ಸಾರಾಂಶ
ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ.ಎಲ್. ಧರ್ಮ ಈ ಯೋಜನೆ ಜವಬ್ದಾರಿಯನ್ನು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗಕ್ಕೆ ವಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡದಲ್ಲಿ ಖಾಸಗಿ ಬಸ್ಗಳ ಸಾವ೯ಜನಿಕ ಸೇವೆಯ ಚರಿತ್ರೆಯು 100 ವರ್ಷಗಳಿಗಿಂತಲೂ ಮಿಗಿಲಾದ ಚರಿತ್ರೆ ಹೊಂದಿದೆ. ಇದಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕವಾಗಿ ಒಂದು ವಿಶ್ಲೇಷಣಾತ್ಮಕ ಚೌಕಟ್ಟನ್ನು ಒದಗಿಸಲು ಹಾಗೂ ಸಾರ್ವಜನಿಕ ಬಸ್ಗಳ ಸೇವೆಯ ಕಥಾನಕಗಳನ್ನು ಮತ್ತೆ ಸಾರ್ವಜನಿಕ ವಲಯಕ್ಕೆ ಪರಿಚಯಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯ ಒಂದು ಹೊಸ ವೇದಿಕೆಯನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವಿಭಜಿತ ದ.ಕ ಜಿಲ್ಲೆಯ ಖಾಸಗಿ ಬಸ್ಗಳ ಮಾಲೀಕರ ಸಂಘದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ಒಡಂಬಡಿಕೆ ಮಾಡಿಕೊಂಡು ಸಮಗ್ರ ವರದಿ ತಯಾರಿಸಲು ಮುಂದಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ.ಎಲ್. ಧರ್ಮ ಈ ಯೋಜನೆ ಜವಬ್ದಾರಿಯನ್ನು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗಕ್ಕೆ ವಹಿಸಿದ್ದಾರೆ. ಖಾಸಗಿ ಬಸ್ಗಳ ಸಾರ್ವಜನಿಕ ಸೇವೆಯ ಚರಿತ್ರೆಯನ್ನು ಅಂಕಿ ಅಂಶಗಳ ಮುಖಾಂತರ ಸಂಶೋಧನೆಗೆ ಒಳಪಡಿಸುವ ಹಾಗೂ ದೇಶ ವಿದೇಶಗಳಿಗೆ ಅವರ ಸಾಹಸಗಾಥೆಗಳನ್ನು ಪರಿಚಯಿಸುವ ಪ್ರಮುಖ ಉದ್ದೇಶ ಹೊಂದಿದೆ. ಖಾಸಗಿ ಬಸ್ಗಳ ಕಾರ್ಯಚರಣೆಯು ಈ ಉಭಯ ಜಿಲ್ಲೆಗಳ ಬದುಕಿನ ಅವಿಭಾಜ್ಯ ಅಂಶಗಳಾಗಿ ಮೂಡಿ ಬಂದಿರುವ ಅಂಶಗಳನ್ನು ಅಂಕಿಅಂಶಗಳ ಮುಖಾಂತರ ತಿಳಿಸುವುದು ಈ ಯೋಜನೆಯ ಮತ್ತೊಂದು ಉದ್ದೇಶ. ಆ ಮುಖಾಂತರ ರಾಷ್ಟ್ರದಾದ್ಯಂತ ಮಂಗಳೂರು ಮಾದರಿಯನ್ನು ರಾಷ್ಟ್ರಕ್ಕೆ ಪರಿಚಯಿಸುವ ಕೆಲಸ ಮಾಡುವುದು ಇದರ ಪ್ರಮುಖ ಫಲಿತಾಂಶಗಳಲ್ಲಿ ಒಂದಾಗಿದೆ. ಖಾಸಗಿ ಬಸ್ ಮಾಲೀಕರ ಸಂಘದ ಪ್ರಮುಖ ಪ್ರತಿನಿಧಿಗಳಾದ ಅಜೀಜ್ ಪರ್ತಿಪ್ಪಾಡಿ, ದಿಲ್ರಾಜ್ ಆಳ್ವ ಮತ್ತು ರಾಮಚಂದ್ರ ಪಿಲಾರ್ ಇವರೊಂದಿಗೆ ಶುಕ್ರವಾರ ಎರಡು ಔಪಚಾರಿಕ ಸಭೆ ನಡೆಸಿ ವಿಸ್ತ್ರತವಾಗಿ ಚರ್ಚಿಸಲಾಗಿದೆ. ಈ ಚರ್ಚೆಯ ಫಲಿತಾಂಶವೇ ಮಂಗಳೂರು ವಿಶ್ವವಿದ್ಯಾನಿಲಯ ಪ್ರಸ್ತುತ ಕೈಗೆತ್ತಿಕೊಂಡಿರುವ ಸಂಶೋಧನಾ ಕಾರ್ಯ. ಪ್ರಥಮ ಹಂತದಲ್ಲಿ ಬಸ್ ಮಾಲೀಕರ ಸಂಘದ ಸಹಕಾರದೊಂದಿಗೆ ಪ್ರಾಯೋಗಿಕ ಅಧ್ಯಯನ ಕೈಗೊಳ್ಳಲಾಗುವುದು ಎಂದು ವಿವಿ ಪ್ರಕಟಣೆ ತಿಳಿಸಿದೆ.