ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ 2025ಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯ ಕೆಲವು ತಿದ್ದುಪಡಿಗಳ ಜಾರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಮಧ್ಯಂತರ ತಡೆ ನೀಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಏಕಸದಸ್ಯ ಪೀಠ, ಸರ್ಕಾರದ ಅಧಿಸೂಚನೆಯ ಜಾರಿಗೆ ಮಧ್ಯಂತರ ತಡೆ ಆದೇಶ ಹೊರಡಿಸಿದೆ.

ಮಂಗಳೂರು; ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ 2025ಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯ ಕೆಲವು ತಿದ್ದುಪಡಿಗಳ ಜಾರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ಮಧ್ಯಂತರ ತಡೆ ನೀಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಏಕಸದಸ್ಯ ಪೀಠ, ಸರ್ಕಾರದ ಅಧಿಸೂಚನೆಯ ಜಾರಿಗೆ ಮಧ್ಯಂತರ ತಡೆ ಆದೇಶ ಹೊರಡಿಸಿದೆ.ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್, ರಾಜ್ಯ ಸರ್ಕಾರ 2025ರ ಸೆಪ್ಟೆಂಬರ್ 12ರಂದು ಹೊರಡಿಸಿದ ತಿದ್ದುಪಡಿ ಅಧಿಸೂಚನೆಯ ಮೂಲಕ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 53-A ಮೂಲಕ ಸಹಕಾರ ಸಂಘಗಳ ಸಮಿತಿಗಳಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ಪಡೆದಿರುವುದು, ಸಹಕಾರ ಸಂಘಗಳ ಮೂಲ ತತ್ವಗಳನ್ನೇ ದುರ್ಬಲಗೊಳಿಸುವ ಕ್ರಮವಾಗಿದೆ. ಇದು ಸಹಕಾರ ಸಂಘಗಳ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆಯನ್ನು ತಂದಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ವಾದವನ್ನು ಅಲಿಸಿದ ಬಳಿಕ ನ್ಯಾಯಾಲಯ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 53-A ನ ಮೇಲೆ ತಿಳಿಸಲಾದ ಸೇರ್ಪಡೆಯ ಪರಿಶೀಲನೆಯು ಕೇಂದ್ರ ಸರ್ಕಾರ ಮತ್ತು ನಬಾರ್ಡ್ ವ್ಯಾಪ್ತಿಯಲ್ಲಿರುವ ಸಂಘಗಳನ್ನು ಒಳಗೊಳ್ಳುತ್ತದೆ. ಆ ವಿಷಯದ ದೃಷ್ಟಿಯಿಂದ ಪರಿಚ್ಚೇದ VII ರೊಂದಿಗೆ ಆರ್ಟಿಕಲ್ 246 ರ ಅಡಿಯಲ್ಲಿ ರಾಜ್ಯ ಶಾಸಕಾಂಗದ ಪರಿಮಿತಿಯನ್ನು ವಿವರವಾಗಿ ಪರಿಗಣಿಸಬೇಕು. ಈ ದೃಷ್ಟಿಯಿಂದ ಸೆಕ್ಷನ್ 2(a-1-1), 28-A, 58 ತಿದ್ದುಪಡಿ ಮಾಡುವ ಕಾರ್ಯಾಚರಣೆ ಮತ್ತು ಸೆಕ್ಷನ್ 53-A ನ ಸೇರ್ಪಡೆಯನ್ನು ವಿಸ್ತ್ರತವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಕರ್ನಾಟಕ ಸರ್ಕಾರ ದಿ.12.09.2025 ರ ಅಧಿಸೂಚನೆ ಮೂಲಕ ಜಾರಿಗೆ ತಂದ ತಿದ್ದುಪಡಿ ಕಾಯ್ದೆಯ ಸೆಕ್ಷನ್ 2(a-1-1), 28-A, 58 ಮತ್ತು 53 -A ಯ ತಿದ್ದುಪಡಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್, ವಕೀಲರಾದ ರಕ್ಷಿತ್ ಕುಮಾರ್ ಜೈನ್ ನಾರಾವಿ, ಮೊಹಮದ್ ತಾಹೀರ್ ವಾದಿಸಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿ ಕುಮಾರ್ ರೈ ಬಾಲ್ಯೊಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

+++++++