ಅಗಲಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಭೆ

| Published : Jul 25 2024, 01:26 AM IST

ಸಾರಾಂಶ

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪತ್ರಕರ್ತರಾದ ಭಾಸ್ಕರ ರೈ ಕಟ್ಟ, ಉಮೇಶ್ ಕೊಟ್ಟಾರಿ, ಭರತ್‌ರಾಜ್, ಆದಿತ್ಯ ನುಡಿನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಇತ್ತೀಚೆಗೆ ನಿಧನರಾದ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ಮಂಗಳೂರಿನ ಹಿರಿಯ ಫೋಟೊ ಜರ್ನಲಿಸ್ಟ್ ಅಲ್ಫ್ರೆಡ್ ಡಿಸೋಜಾ ಮತ್ತು ಖಾಸಗಿ ಟಿವಿ ಕ್ಯಾಮೆರಾಮ್ಯಾನ್ ವೀರೇಶ್ ಕಡ್ಲಿಕೊಪ್ಪ ಅವರಿಗೆ ಶ್ರದ್ಧಾಂಜಲಿ ಸಭೆ ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆಯಿತು.ನುಡಿನಮನ ಸಲ್ಲಿಸಿದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಅಗಲಿದ ಇಬ್ಬರೂ ಪತ್ರಕರ್ತರೂ ಸಜ್ಜನ ವ್ಯಕ್ತಿತ್ವ ಹೊಂದಿದ್ದರು. ಎಲ್ಲರ ಜತೆ ಮುಕ್ತವಾಗಿ ಬೆರೆಯುತ್ತಿದ್ದರು. ಇಬ್ಬರೂ ಪತ್ರಕರ್ತರ ಹೆಸರನ್ನು ಶಾಶ್ವತವಾಗಿ ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖವಾಗಲಿದೆ ಎಂದರು.ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ವೀರೇಶ್ ಅವರು ಗದಗ್ ಜಿಲ್ಲೆಯಿಂದ ಮಂಗಳೂರಿಗೆ ಆಗಮಿಸಿ ಇಲ್ಲಿನ ಪತ್ರಕರ್ತರ ಜತೆ ಬೆರೆತು ಕೆಲಸ ಮಾಡಿದ್ದರು. ಎಳೆಯ ವಯಸ್ಸಿನಲ್ಲಿ ಅವರು ನಿಧನ ಹೊಂದಿರುವುದು ಬೇಸರದ ಸಂಗತಿ. ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಸದಾ ಕಾಳಜಿ ಹೊಂದಬೇಕು. ಪತ್ರಕರ್ತರು ಹಾಗೂ ಅವರ ಕುಟುಂಬ ಸದಸ್ಯರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಯೋಚನೆಯಿದೆ ಎಂದರು.ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪತ್ರಕರ್ತರಾದ ಭಾಸ್ಕರ ರೈ ಕಟ್ಟ, ಉಮೇಶ್ ಕೊಟ್ಟಾರಿ, ಭರತ್‌ರಾಜ್, ಆದಿತ್ಯ ನುಡಿನಮನ ಸಲ್ಲಿಸಿದರು.ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪತ್ರಕರ್ತರಾದ ನಂದಗೋಪಾಲ್, ಇಬ್ರಾಹಿಂ ಅಡ್ಕಸ್ಥಳ, ರಮೇಶ್ ಪೆರ್ಲ ಇದ್ದರು.ಅಗಲಿದ ಇಬ್ಬರೂ ಪತ್ರಕರ್ತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.