ಐಷಾರಾಮಿ ಹಡಗಿನಲ್ಲಿ ಮತದಾನ ಜಾಗೃತಿ

| Published : Apr 19 2024, 01:01 AM IST

ಸಾರಾಂಶ

ಬಂದರು ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಅವರ ಕುಟುಂಬದವರಿಗೆ ಮತದಾನದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿ ಮತದಾನದ ಪ್ರತಿಜ್ಞೆ ಭೋಧಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಇಲ್ಲಿಗೆ ಹತ್ತಿರದ ಪಣಂಬೂರು ಬಂದರಿಗೆ ಎಂ.ಎಸ್. ಸೆವೆನ್ಸ್ ನ್ಯಾವಿಗೇಟರ್ ಐಷಾರಾಮಿ ಪ್ರವಾಸಿಗರ ಹಡಗು ಆಗಮಿಸಿದೆ. ಅದರಲ್ಲಿ ಆಗಮಿಸಿದ ಪ್ರವಾಸಿಗರಿಗಾಗಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ದ.ಕ. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ಗುರವಾರ ನಡೆಯಿತು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮುಖ್ಯಸ್ಥರೂ ಆಗಿರುವ ಡಾ. ಆನಂದ್ ಮಾತನಾಡಿ, ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಅರ್ಹ ಮತದಾರರೆಲ್ಲರೂ ಮತದಾನದ ಮಹತ್ವ ಅರಿತು ತಪ್ಪದೆ ಹಕ್ಕು ಚಲಾಯಿಸಬೇಕು ಎಂದರು.

ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಆಡಳಿತ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು. ಮತದಾನದ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ ಎಂದು ಹೇಳಿದರು.

ಬಂದರು ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಅವರ ಕುಟುಂಬದವರಿಗೆ ಮತದಾನದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿ ಮತದಾನದ ಪ್ರತಿಜ್ಞೆ ಭೋಧಿಸಿದರು.

ಬಂದರು ಮಂಡಳಿಯ ಹಿರಿಯ ಅಧಿಕಾರಿಗಳು, ಟ್ರಾಫಿಕ್ ಮ್ಯಾನೆಜರ್ ಹಾಗೂ ಇತರ ಅಧಿಕಾರಿಗಳು ಇದ್ದರು.