ಕಗ್ಗದ ಪ್ರತಿಯೊಂದು ಮುಕ್ತಕವೂ ಜೀವನ ದರ್ಶನ ಮಾಡುವಂತಿದ್ದು, ಜೀವನ ಮೌಲ್ಯಗಳ ಮೂಟೆಯನ್ನೇ ಕಾಣಬಹುದು. ಪ್ರಕೃತಿ ಹಾಗೂ ಸಮಾಜದೊಂದಿಗೆ ಸಮನ್ವಯ ಸಾಧಿಸಿಕೊಂಡು ಬದುಕಲು, ಪ್ರೇರಣೆ ನೀಡುತ್ತದೆ.
ಗದಗ: ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆಯಾಗಿದ್ದು, ಜೀವನ, ಧರ್ಮ, ನೈತಿಕತೆ, ಮಾನವ ಸ್ವಭಾವದ ಕುರಿತು ತಿಳಿಸುವ ಮಹಾಗ್ರಂಥವಾಗಿದೆ. ಬದುಕಿನಲ್ಲಿ ಬರುವ ಕಷ್ಟ- ಸುಖಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಸ್ಥಿತಪ್ರಜ್ಞನಾಗಿ ಬದುಕನ್ನು ಮುನ್ನಡೆಸುವ ದಾರಿಗಳನ್ನು ಸೂಚಿಸುತ್ತವೆ ಎಂದು ಹೂವಿನಹಡಗಲಿಯ ಅಧ್ಯಾಪಕ ದ್ವಾರಕೀಶರೆಡ್ಡಿ ತಿಳಿಸಿದರು.ನಗರದ ತೋಂಟದ ಸಿದ್ಧಲಿಂಗೇಶ್ವರ ಸಾಹಿತ್ಯ ಭವನದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಂಕುತಿಮ್ಮನ ಕಗ್ಗದಲ್ಲಿರುವ ಜೀವನ ಮೌಲ್ಯಗಳು ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕಗ್ಗದ ಪ್ರತಿಯೊಂದು ಮುಕ್ತಕವೂ ಜೀವನ ದರ್ಶನ ಮಾಡುವಂತಿದ್ದು, ಜೀವನ ಮೌಲ್ಯಗಳ ಮೂಟೆಯನ್ನೇ ಕಾಣಬಹುದು. ಪ್ರಕೃತಿ ಹಾಗೂ ಸಮಾಜದೊಂದಿಗೆ ಸಮನ್ವಯ ಸಾಧಿಸಿಕೊಂಡು ಬದುಕಲು, ಪ್ರೇರಣೆ ನೀಡುತ್ತದೆ. ಸ್ವಯಂ ಅರಿವಿನೊಂದಿಗೆ ಆತ್ಮಾವಲೋಕನಕ್ಕೆ ತೊಡಗಿಸುತ್ತದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕನ್ನಡ ಕಾವ್ಯಗಳಲ್ಲಿ ಮಂಕುತಿಮ್ಮನ ಕಗ್ಗ ಮಹೋನ್ನತ ಕೃತಿಯಾಗಿ ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಜೀವನದ ಯಾವುದೇ ಸಂದರ್ಭಕ್ಕೂ, ಸಮಸ್ಯೆಗಳಿಗೂ ಪರಿಹಾರವನ್ನು, ಸಾಂತ್ವನ, ಸಮಾಧಾನವನ್ನು ನೀಡುವ ಶಕ್ತಿ ಕೃತಿಗೆ ಇದೆ ಎಂದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಯೋಜಕ ಡಾ. ನಿಂಗು ಸೊಲಗಿ ಮಾತನಾಡಿ, ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ನಾಡಿನ ಹೆಮ್ಮೆಯ ಸಂಸ್ಥೆಯಾಗಿದ್ದು, 136 ವರ್ಷಗಳ ಇತಿಹಾಸ ಹೊಂದಿದೆ. ಸಂಘವು ಧಾರವಾಡವನ್ನು ಕೇಂದ್ರವಾಗಿಸಿಕೊಂಡು ನಾಡಿನ ಹಲವು ಸಮಸ್ಯೆಗಳಿಗೆ ಹೋರಾಟ ರೂಪಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದ ಸಂಸ್ಥೆ. ಗಡಿನಾಡು, ಹೊರನಾಡ ಕನ್ನಡಿಗರೊಡಗೂಡಿ ಕಾರ್ಯ ಮಾಡುತ್ತಿದ್ದು, ಇದೀಗ ಪ್ರತಿ ಜಿಲ್ಲೆಯಲ್ಲೂ ಸಂಘದ ಕಾರ್ಯ ಚಟುವಟಿಕೆಗಳು ವಿಸ್ತಾರಗೊಳಿಸುವ ಉದ್ದೇಶ ಹೊಂದಿ ಕಾರ್ಯ ಪ್ರವೃತ್ತವಾಗಿದೆ ಎಂದರು.ಈ ವೇಳೆ ಕೆ.ಎಚ್. ಬೇಲೂರ, ಅನ್ನದಾನಿ ಹಿರೇಮಠ, ಸತೀಶ ಚನ್ನಪ್ಪಗೌಡರ, ಅಂದಾನಪ್ಪ ವಿಭೂತಿ, ಬಿ.ಜಿ. ಗಿರಿತಮ್ಮಣ್ಣವರ, ರವಿ ದೇವರಡ್ಡಿ, ಶಾರದಾ ಬಾಣದ, ಉಮಾ ಪಾಟೀಲ, ಜ್ಯೋತಿ ಕಬಾಡಿ, ಹೇಮಲತಾ ಬೇಗೂರ, ನಂದೀಶ ಕಲ್ಮಠ, ಸಲೀಂ ಬಳಬಟ್ಟಿ, ಸಿ.ಎಂ. ಮಾರನಬಸರಿ, ಗಿರಿಯಪ್ಪ ಮಡಿವಾಳರ, ಶಶಿಕಾಂತ ಕೊರ್ಲಹಳ್ಳಿ, ಸುಧಾ ಬಳ್ಳಿ, ಅಶೋಕ ಗಿರಡ್ಡಿ, ಪರಶುರಾಮ ಜಂಬಗಿ, ಸತೀಶ ಕುಲಕರ್ಣಿ, ಎಸ್.ಪಿ. ಹೊಂಬಳ, ಶೈಲಜಾ ಗಿಡ್ನಂದಿ, ರತ್ನಾ ಪುರಂತರ, ಜೆ.ಎ. ಪಾಟೀಲ, ವಿಜಯ ಕಿರೇಸೂರ, ಕಿರಣ ಗುಗ್ಗರಿ, ಅಶೋಕ ಸುತಾರ, ಷಡಕ್ಷರಿ ಮೆಣಸಿನಕಾಯಿ, ಎಸ್.ಎನ್. ಗದ್ದಿ ಮೊದಲಾದವರು ಇದ್ದರು. ಡಾ. ದತ್ತಪ್ರಸನ್ನ ಪಾಟೀಲ ಸ್ವಾಗತಿಸಿದರು. ರಾಹುಲ್ ಗಿಡ್ನಂದಿ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಶ್ರದ್ಧಾ ಸ್ವರ ಸಂಗೀತ ವೆಲ್ಫೇರ್ ಟ್ರಸ್ಟ್ನ ಶ್ರದ್ಧಾ ಉಜ್ವಲ ಕಬಾಡಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.