ಎರಡೂ ಧರ್ಮೀಯರಿಂದ ಒಗ್ಗಟ್ಟಿನ ಮಂತ್ರ: ಚಲುವರಾಯಸ್ವಾಮಿ

| Published : Sep 15 2024, 01:47 AM IST

ಎರಡೂ ಧರ್ಮೀಯರಿಂದ ಒಗ್ಗಟ್ಟಿನ ಮಂತ್ರ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೋ ಕೆಟ್ಟ ಘಳಿಗೆ, ಹಿಂದೂ- ಮುಸ್ಲಿಮರು ಅಣ್ಣ- ತಮ್ಮಂದಿರಂತಿದ್ದ ನಾಗಮಂಗಲದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಂಬಲಸಾಧ್ಯವಾದ ಘಟನೆ ನಡೆದುಹೋಗಿದೆ. ಇನ್ನು ಮುಂದೆ ಈ ವಿಚಾರವನ್ನು ರಾಜಕಾರಣಿಗಳು, ಸಂಘಟನೆಗಳು ಮುಂದುವರೆಸುವುದು ಬೇಡ, ಇದನ್ನು ಇಲ್ಲಿಗೇ ನಿಲ್ಲಿಸುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಎರಡೂ ಧರ್ಮದವರು ಇನ್ನು ಮುಂದೆ ಒಗ್ಗಟ್ಟಾಗಿರುವುದಾಗಿ ಹೇಳಿದ್ದಾರೆ. ಗಣಪತಿ ಹಬ್ಬವನ್ನೂ ಮಾಡುತ್ತೇವೆ, ಮುಸ್ಲಿಂ ಹಬ್ಬಗಳಿಗೂ ಸಹಕಾರ ಕೋರುವುದಾಗಿ ತಿಳಿಸಿದ್ದಾರೆ. ಗಲಭೆಯಲ್ಲಿ ನಷ್ಟಕ್ಕೊಳಗಾದವರಿಗೆ ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಪರಿಹಾರ ನೀಡುವ ಜೊತೆಗೆ ಅಮಾಯಕರ ಬಿಡುಗಡೆಗೆ ಕ್ರಮ ವಹಿಸುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಗಣೇಶಮೂರ್ತಿ ಮೆರವಣಿಗೆ ವೇಳೆ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಬಿಂಡಿಗನವಿಲೆ ರಸ್ತೆಯಲ್ಲಿರುವ ಕೃಷ್ಣಪ್ಪ ಸಮದಾಯ ಭವನದಲ್ಲಿ ಉಭಯ ಕೋಮಿನವರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು.

ಈ ವಿಚಾರ ಮುಂದುವರೆಸಬೇಡಿ: ಯಾವುದೋ ಕೆಟ್ಟ ಘಳಿಗೆ, ಹಿಂದೂ- ಮುಸ್ಲಿಮರು ಅಣ್ಣ- ತಮ್ಮಂದಿರಂತಿದ್ದ ನಾಗಮಂಗಲದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಂಬಲಸಾಧ್ಯವಾದ ಘಟನೆ ನಡೆದುಹೋಗಿದೆ. ಇನ್ನು ಮುಂದೆ ಈ ವಿಚಾರವನ್ನು ರಾಜಕಾರಣಿಗಳು, ಸಂಘಟನೆಗಳು ಮುಂದುವರೆಸುವುದು ಬೇಡ, ಇದನ್ನು ಇಲ್ಲಿಗೇ ನಿಲ್ಲಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಹಿಂದೂ- ಮುಸ್ಲಿಮರು ಅಣ್ಣ- ತಮ್ಮಂದಿರ ರೀತಿ ಕುಳಿತಿದ್ದರು. ಈ ಕ್ಷಣದಿಂದ ನಾವು ಒಟ್ಟಾಗಿರುತ್ತೇವೆ ಎಂದಿದ್ದಾರೆ. ಗಣಪತಿ ಹಬ್ಬವನ್ನೂ ಮಾಡುತ್ತೇವೆ. ಮುಸ್ಲಿಂ ಹಬ್ಬಗಳಿಗೂ ಸಹಕಾರ ಕೋರುವುದಾಗಿ ಹೇಳಿದ್ದಾರೆ. ಸೋಮವಾರ ಮುಸ್ಲಿಮರ ಹಬ್ಬ ಈದ್‌ ಮಿಲಾದ್ ಇರುವ ಕಾರಣ ಗಣಪತಿ ವಿಸರ್ಜನೆ ಬೇಡ ಎಂದು ಹೇಳಿದ್ದೇವೆ. ಅದಕ್ಕೆ ಸಹಮತ ವ್ಯಕ್ತವಾಗಿದೆ ಎಂದು ತಿಳಿಸಿದರು.

ವಿಶೇಷ ತನಿಖಾ ತಂಡ ರಚನೆ: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ನಮ್ಮೆಲ್ಲರ ಉದ್ದೇಶ ಶಾಂತಿ ಸ್ಥಾಪನೆ. ಜನರು ನೆಮ್ಮದಿಯಾಗಿ ಬದುಕು ಬದುಕಬೇಕು. ನಾಗಮಂಗಲ ಈಗ ಯಥಾಸ್ಥಿತಿಗೆ ಬಂದಿದೆ. ಈ ಘಟನೆ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ತಿಳಿಯಲು ವಿಶೇಷ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಗಲಭೆಯಿಂದ ಎರಡೂ ಕಡೆಯವರಿಗೆ ನಷ್ಟವಾಗಿರುವ ಪ್ರಮಾಣದ ವರದಿ ಸಿದ್ದವಾಗಲಿದೆ. ಅದನ್ನು ಸರ್ಕಾರಕ್ಕೆ ಕಳುಹಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕರ ಬಿಡುಗಡೆಗೆ ಮನವಿ ಮಾಡಿದ್ದಾರೆ. ದೋಷಾರೋಪಣಾ ಪಟ್ಟಿಯಲ್ಲಿ ಅಮಾಯಕರನ್ನು ಕೈಬಿಡಲಾಗುವುದು. ಇದರ ಜೊತೆಗೆ ಸಾರ್ವಜನಿಕರೂ ಕೆಲವೊಂದು ಸಲಹೆಗಳನ್ನೂ ನೀಡಿದ್ದು ಅದನ್ನೂ ಸ್ವೀಕರಿಸಿದ್ದೇವೆ ಎಂದು ನುಡಿದರು.

ಎಚ್‌ಡಿಕೆಗೆ ಅಭಿನಂದನೆ: ಕುಮಾರಸ್ವಾಮಿ ಹೇಳಿಕೆ ಏನೇ ಇದ್ದರೂ ನೊಂದವರಿಗೆ ಪರಿಹಾರ ಕೊಟ್ಟಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಈ ಸಮಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡುತ್ತೇನೆ. ನಾಗಮಂಗಲದಲ್ಲಿ ಘಟನೆ ನಡೆದುಹೋಗಿದೆ.

ಅಲ್ಲಿ ಮತ್ತೆ ಶಾಂತಿ ಸ್ಥಾಪನೆ ಆಗಬೇಕು. ನಾಳೆಯಿಂದ ಗಣಪತಿ ಉತ್ಸವ ಆರಂಭವಾಗಲಿದೆ. ಈ ಘಟನೆ ಇಲ್ಲಿಗೇ ನಿಲ್ಲಲು ಎಲ್ಲರ ಸಹಕಾರ ಅಗತ್ಯವಿದೆ. ನಾಗಮಂಗಲ ಯಥಾಸ್ಥಿತಿಗೆ ತಲುಪಿರುವ ಸಂದೇಶವನ್ನು ರಾಜ್ಯಕ್ಕೆ ಕೊಡಬೇಕು ಎಂದು ಮನವಿ ಮಾಡಿದರು.

ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಜಿ.ಆದರ್ಶ್, ಡಿವೈಎಸ್ಪಿ ಎ.ಆರ್.ಅಮಿತ್, ಸಿಪಿಐ ನಿರಂಜನ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಸೇರಿ ಹಿಂದೂ- ಮುಸ್ಲಿಮ್ ಸಮುದಾಯದ ನೂರಾರು ಮಂದಿ ಮುಖಂಡರು ಇದ್ದರು.

ಉಭಯ ಕೋಮಿನವರ ನಡುವೆ ಸಮನ್ವಯ ಸಮಿತಿ ರಚನೆಗೆ ಸಲಹೆ: ನಾಗಮಂಗಲದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ- ಮುಸ್ಲಿಮರ ನಡುವೆ ಗಲಭೆ ಸಂಭವಿಸದಂತೆ ತಡೆಯಲು ಎರಡೂ ಕೋಮಿನವರ ನಡುವೆ ಸಮನ್ವಯ ಸಮಿತಿ ರಚನೆಯಾಗಬೇಕೆಂಬ ಸಲಹೆ ಸಾರ್ವಜನಿಕರಿಂದ ಶಾಂತಿಸಭೆಯಲ್ಲಿ ವ್ಯಕ್ತವಾಯಿತು.

ಯಾರೋ ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ಎರಡೂ ಧರ್ಮದವರು ನೋವು, ಸಂಕಟ, ನಷ್ಟ ಅನುಭವಿಸುವಂತಾಗಿದೆ. ಎರಡೂ ಕಡೆ ತಲಾ ೫೦ ಜನರ ಸಮಿತಿಯನ್ನು ರಚಿಸಿಕೊಂಡರೆ ಮೆರವಣಿಗೆ, ಹಬ್ಬದ ಸಮಯದಲ್ಲಿ ಗಲಭೆ ಸೃಷ್ಟಿಸುವವರನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇದರಿಂದ ತಾಲೂಕಿಗೆ ಬರುವ ಕೆಟ್ಟಹೆಸರನ್ನೂ ತಡೆಯಬಹುದು ಎಂಬ ಮಾತುಗಳು ಕೇಳಿಬಂದವು.

ಹಬ್ಬ, ಮೆರವಣಿಗೆ ನಡೆಸುವುದಕ್ಕೂ ಮುನ್ನ ಎರಡೂ ಕಡೆಯ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರೆ ಅಶಾಂತಿ ಉಂಟಾಗುವ ಘಟನೆಗಳನ್ನು ತಡೆಯಬಹುದು. ಎರಡೂ ಧರ್ಮದವರು ಪರಸ್ಪರ ಅನ್ಯೋನ್ಯತೆಯಿಂದ ಮಾದರಿಯಾಗಿ ಜೀವನ ನಡೆಸಬಹುದೆಂಬ ಸಲಹೆ ಕೇಳಿಬಂದಿತು.