ಕಣುಮ ಹತ್ಯೆ ಸುತ್ತ ಹಲವಾರು ಅನುಮಾನಗಳ ಹುತ್ತ

| Published : May 06 2025, 12:17 AM IST

ಸಾರಾಂಶ

ಕಣುಮ ಸಂತೋಷನ ಹತ್ಯೆಗೆ ನಾನಾ ಊಹಾಪೋಹಗಳು ಕೇಳಿಬರುತ್ತಿದ್ದರೂ, ಆತನ ಜೊತೆಗೆ ಗುರುತಿಸಿಕೊಂಡಿದ್ದ ಯುವಕರೇ ಹಣ, ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

ದಾವಣಗೆರೆ: ಕಣುಮ ಸಂತೋಷನ ಹತ್ಯೆಗೆ ನಾನಾ ಊಹಾಪೋಹಗಳು ಕೇಳಿಬರುತ್ತಿದ್ದರೂ, ಆತನ ಜೊತೆಗೆ ಗುರುತಿಸಿಕೊಂಡಿದ್ದ ಯುವಕರೇ ಹಣ, ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಯಾವುದೇ ಅಂಜಿಕೆ ಇಲ್ಲದೇ ಕಣುಮನನ್ನು ಕೊಂದು ಹಾಕಿದ ಗುಂಪು ರಿಕ್ರಿಯೇಷನ್ ಕ್ಲಬ್‌ನಲ್ಲಿ ಇದ್ದ ಯಾರ ಮೇಲೂ ದಾಳಿ ಮಾಡಿಲ್ಲ, ಮಾತನಾಡಿಲ್ಲ. ಮೂಲಗಳ ಪ್ರಕಾರ ಹಳೆಯ ಹಣ ಮತ್ತು ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಣುಮನನ್ನು ಹತ್ಯೆಗೈಯ್ಯಲಾಗಿದೆ ಎನ್ನಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಈತ, ನಿಧಿ ಸಿಕ್ಕಿದೆ ಎಂಬುದಾಗಿ ನಂಬಿಸಿ, ವಂಚನೆ ಮಾಡಿದ್ದ ಪ್ರಕರಣವೂ ಹೊತ್ತಿದ್ದ ಎನ್ನಲಾಗಿದೆ.

ಕೆಲವು ವರ್ಷಗಳ ಹಿಂದೆ ಶ್ರೀರಾಮ ನಗರದ ವಾಸಿಯಾಗಿದ್ದ ಮತ್ತೊಬ್ಬ ರೌಡಿ ಶೀಟರ್ ಬುಳ್ಳ ನಾಗನ ಹತ್ಯೆಗೆ ಸಂಬಂಧಿಸಿದ ಪ್ರತೀಕಾರ ಇದು ಎಂದೂ, ಮತ್ತೊಂದು ವಾದಗಳ ಪ್ರಕಾರ ಹಂತಕರು ಕೊಲೆ ಮಾಡಿದ ನಂತರ ದುಗ್ಗಮ್ಮ ನಿನ್ನಾಲ್ಕು ಉಧೋ ಉಧೋ ಎಂಬ ಘೋಷಣೆ ಕೂಗಿದ್ದು ನೋಡಿದರೆ ಹಿಂದೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಬಳಿ ಕ್ರೀಡಾಪಟುವೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರತೀಕಾರದ ಕೊಲೆ ಆಗಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

ಮತ್ತೆ ಕೆಲವರ ಪ್ರಕಾರ ಹಣದ ವ್ಯವಹಾರ, ಜಮೀನು ವ್ಯವಹಾರದಲ್ಲಿ ಕಣುಮ ಸಾಕಷ್ಟು ತೊಡಗಿಕೊಂಡಿದ್ದ. ಇಂತಹ ವ್ಯವಹಾರಕ್ಕೆ ತೊಡಗಿದ್ದರಿಂದ ಯಾರೋ ಕೊಲೆ ಮಾಡಿಸಿರಬಹುದು ಎಂಬ ಗುಸುಗುಸು ಕೇಳಿಬರುತ್ತಿವೆ. ಒಟ್ಟಾರೆ, ಹಂತಕರನ್ನು ಪೊಲೀಸರು ಬಂಧಿಸಿದ ನಂತರವಷ್ಟೇ ಕಣುಮನ ಭೀಕರ ಹತ್ಯೆಯ ಸತ್ಯಾಸತ್ಯತೆ ಬಯಲಾಗಲಿದೆ.

- - - -5ಕೆಡಿವಿಜಿ21, 22.ಜೆಪಿಜಿ: ಕಣುಮ ಸಂತೋಷನ ಹತ್ಯೆಯಾದ ಕ್ಲಬ್‌ ಮುಂದೆ ಪೊಲೀಸರು ಜಮಾಯಿಸಿರುವುದು. -5ಕೆಡಿವಿಜಿ23, 24.ಜೆಪಿಜಿ: ದಾವಣಗೆರೆಯ ರಿಕ್ರಿಯೇಷನ್ ಕ್ಲಬ್‌ನಲ್ಲಿ ಕಣುಮ ಸಂತೋಷನನ್ನು ಹತ್ಯೆಗೈದ ಕ್ಲಬ್‌ ಬಳಿ ಜಮಾಯಿಸಿರುವ ಸಾರ್ವಜನಿಕರು.