ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ, ಹಿಂದೂ ಸುರಕ್ಷಾ ಸಮಿತಿಯಿಂದ ಪ್ರತಿಭಟನೆ

| Published : May 06 2025, 12:17 AM IST

ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ, ಹಿಂದೂ ಸುರಕ್ಷಾ ಸಮಿತಿಯಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನಲ್ಲಿ ಹತ್ಯೆಗೀಡಾದ ಹಿಂದೂಪರ ಸಂಘಟನೆಯ ಮುಖಂಡ ಸುಹಾಸ್‌ ಶೆಟ್ಟಿ ಹತ್ಯೆಯನ್ನು ಖಂಡಿಸಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಮಂಗಳೂರಿನಲ್ಲಿ ಹತ್ಯೆಗೀಡಾದ ಹಿಂದೂಪರ ಸಂಘಟನೆಯ ಮುಖಂಡ ಸುಹಾಸ್ ಶೆಟ್ಟಿ ಅವರ ಹತ್ಯೆಯನ್ನು ಖಂಡಿಸಿ, ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ ಮಾತನಾಡಿ, ಸುಹಾಸ್ ಅವರ ಬಳಿಯಿದ್ದ ಆತ್ಮರಕ್ಷಣೆಯ ಶಸ್ತ್ರಗಳನ್ನು ತಿಂಗಳ ಹಿಂದೆ ಪೊಲೀಸರೇ ವಶಕ್ಕೆ ಪಡೆದಿದ್ದಾರೆ. ಈ ವಿಷಯ ತಿಳಿದ ಮತಾಂಧರು ಹೊಂಚು ಹಾಕಿ ಹತ್ಯೆ ಮಾಡಿದ್ದಾರೆ. ಇದು ಪೊಲೀಸ್ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಆರೋಪಿಸಿದರು.

ಹತ್ಯೆಯ ಆರೋಪಿಗಳಿಗೆ ಕಟ್ಟುನಿಟ್ಟಿನ ಶಿಕ್ಷೆ ನೀಡಬೇಕು. ಇಸ್ಲಾಮಿಕ್ ಭಯೋತ್ಪಾದನೆಯನ್ನು ಬೇರುಸಹಿತ ಕೀಳಬೇಕು. ತಪ್ಪಿದ್ದಲ್ಲಿ ಹಿಂದೂ ಸಮಾಜ ಇನ್ನಷ್ಟು ತೊಂದರೆಗೆ ಸಿಲುಕಲಿದೆ. ರಾಜಕೀಯ ಬದಿಗಿಟ್ಟು ಇಡೀ ಹಿಂದೂಗಳು ಒಗ್ಗಟ್ಟಾಗಬೇಕಾದ ಅನಿವಾರ್ಯತೆಯಿದೆ ಎಂದರು.

ಸುಹಾಸ್ ಶೆಟ್ಟಿಯವರನ್ನು ರೌಡಿ ಶೀಟರ್ ಎಂದು ಬಿಂಬಿಸಲಾಗುತ್ತಿದೆ. ಆದರೆ ಲವ್ ಜಿಹಾದ್, ಗೋಹತ್ಯೆ ಸೇರಿದಂತೆ ಹಿಂದೂ ಧರ್ಮದ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಿದಕ್ಕೆ ಪೊಲೀಸ್ ಇಲಾಖೆ ರೌಡಿ ಶೀಟರ್ ಪಟ್ಟ ಕಟ್ಟಿದೆಯೇ ಹೊರತು, ಇನ್ಯಾವುದೇ ಕ್ರಿಮಿನಲ್ ಚಟುವಟಿಕೆಗಳಿಗೆ ಅಲ್ಲ ಎಂಬುದನ್ನು ಹಿಂದೂಗಳು ಮನಗಾಣಬೇಕಿದೆ ಎಂದರು.

ಈಗಾಗಲೇ ಕೊಡಗಿನಲ್ಲಿ ಬಾಂಗ್ಲಾ ವಲಸಿಗರು ಅಸ್ಸಾಮಿಗರ ಸೋಗಿನಲ್ಲಿ ಬಂದು ನೆಲೆಸಿದ್ದಾರೆ. ಹಿಂದೂ ಸಮಾಜ ಭದ್ರತೆಯ ದೃಷ್ಟಿಯಿಂದ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಜಾತಿ ಬಿಟ್ಟು ಇಡೀ ಹಿಂದೂಗಳು ಒಗ್ಗಟ್ಟಾಗಬೇಕು ಎಂದು ಹಿಂದೂ ಪರ ಸಂಘಟನೆಯ ಮುಖಂಡ ಸುನಿಲ್ ಮಾದಾಪುರ ಕರೆ ನೀಡಿದರು.

ಈ ಸಂದರ್ಭ ವಿವಿಧ ಸಂಘಟನೆಗಳ ಮುಖಂಡರಾದ ಸುಭಾಷ್ ತಿಮ್ಮಯ್ಯ, ಉಮೇಶ್ ಎಂ.ಬಿ., ಕೂತಿ ಪರಮೇಶ್, ದರ್ಶನ್ ಜೋಯಪ್ಪ, ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರು ಇದ್ದರು.