ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿದಶಕದ ಹಿಂದೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಮರಕುಂಬಿ ಗ್ರಾಮದಲ್ಲಿ ಜಾತಿ ವೈಶಮ್ಯ ಉಲ್ಬಣಗೊಂಡು ದಲಿತರು ಹಾಗು ದಲಿತ ಕೇರಿಯ ಮೇಲೆ ಸಾಮೂಹಿಕ ಹಲ್ಲೆ ಮಾಡಿ ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸುದೀರ್ಘ 10 ವರ್ಷಗಳ ಕಾಲ ವಿಚಾರಣೆಯನ್ನು ನಡೆಸಿದ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿನ್ನೆ ಅಪರಾಧಿಗಳಿಗೆ ವಿಧಿಸಿದ ಶಿಕ್ಷೆಯು ಚರಿತ್ರಾರ್ಹವಾದುದು ಎಂದು ಸಿಪಿಐಎಂ ರಾಜ್ಯ ಸಮಿತಿ ಬಣ್ಣಿಸಿದೆ.ಈ ಪ್ರಕರಣದ 98 ಜನರಿಗೆ ಜೀವಾವಧಿ ಶಿಕ್ಷೆ, ದಂಡ ಹಾಗು ಮೂವರಿಗೆ ಐದು ವರ್ಷಗಳ ಜೈಲು ಶಿಕ್ಷೆ, ದಂಡ ವಿಧಿಸಿರುವುದನ್ನು ಸ್ವಾಗತಿಸುತ್ತೇವೆ. ಇದು ರಾಜ್ಯದ ಎಲ್ಲ ದಲಿತರಿಗೂ, ಸಾಮಾಜಿಕ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿರುವ ಎಲ್ಲ ಎಡ ಮತ್ತು ಪ್ರಗತಿಪರ ಶಕ್ತಿಗಳಿಗೆ ಮತ್ತಷ್ಠು ಬಲವನ್ನು ತಂದು ಕೊಟ್ಟಿದೆ. ಜಾತಿ ದೌರ್ಜನ್ಯದಲ್ಲಿ ತೊಡಗಿರುವ ಪುಂಡರಿಗೆ ಈ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹಾಗೂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕೆ. ನೀಲಾ ಹೇಳಿದ್ದಾರೆ.ಈ ದೌರ್ಜನ್ಯದ ಪ್ರಕರಣದಲ್ಲಿ ದಲಿತರ ರಕ್ಷಣೆಗೆ ನಿಂತ ಸಿಪಿಐಎಂ ಪಕ್ಷದ ಅಂದಿನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಂಗಾಧರ ಸ್ವಾಮಿ ಸೇರಿದಂತೆ ಪಕ್ಷದ ಸದಸ್ಯರ ಮೇಲೂ ಹಲ್ಲೆ ನಡೆಸಲಾಗಿತ್ತು. ಪಕ್ಷದ ಬೆಂಬಲಿಗ ಹಾಗು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತ ವೀರೇಶಪ್ಪ ಪ್ರಮುಖ ಸಾಕ್ಷಿಯಾಗಿದ್ದರು ಎಂದು ಅವರು ಮೇಲಾದ ಹಲ್ಲೆ, ಹೋರಾಟದ ದಿನಗಳನ್ನು ಮೆಲಕು ಹಾಕಿದ್ದಾರೆ.ಸಿಪಿಐಎಂ ಎಲ್ಲ ದಮನಿತ ಹಾಗು ಶೋಷಿತ ಸಮುದಾಯಗಳ ಜಾಗೃತಿಗಾಗಿ ಮತ್ತು ಮಾನವ ಘನತೆಗಾಗಿ ಮತ್ತು ಸಾಮಾಜಿಕ ವ್ಯವಸ್ಥೆಯ ವಿರುದ್ದ ಹೋರಾಟ ನಡೆಸುತ್ತದೆಯೇ ಹೊರತು ವ್ಯಕ್ತಿಗಳ ವಿರುದ್ದವಲ್ಲವೆಂಬುದನ್ನು ನೀಲಾ, ಬಸವರಾಜ ಸ್ಪಷ್ಟಪಡಿಸಿದ್ದಾರೆ.