ಸಾರಾಂಶ
ಚಳ್ಳಕೆರೆ ನಗರದ ಕರೇಕಲ್ ಕೆರೆಯಂಗಳದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕಳೆದ ಕೆಲವು ವರ್ಷಗಳಿಂದ ಮಳೆಯ ಅಭಾವವನ್ನು ಎದುರಿಸುತ್ತಿರುವ ಚಳ್ಳಕೆರೆ ತಾಲ್ಲೂಕಿನ ಈ ಬಾರಿಯಾದರೂ ವಿಶೇಷವಾಗಿ ಉತ್ತಮ ಮಳೆ, ಬೆಳೆಯಾಗಿ ರೈತರ ಬದುಕು ಸಮೃದ್ಧಿಯಾಗಲೆಂದು ಪ್ರಾರ್ಥಿಸಿ ಕರೇಕಲ್ ಕೆರೆಯಂಗಳದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ನಗರದ ಮುಸ್ಲಿಂ ಸಮುದಾಯದ ನೂರಾರು ಬಂಧುಗಳು ಸಲ್ಲಿಸಿದರು.ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಮುತುವಲ್ಲಿ ಅತಿಕೂರ್ ರೆಹಮಾನ್, ಕಳೆದ ಕೆಲವು ವರ್ಷಗಳಿಂದ ಮಳೆ ಇಲ್ಲದೆ ಬೆಳೆಗಳು ನೆಲ ಕಚ್ಚಿದ್ದು, ತಾಲ್ಲೂಕಿನ ಸಾವಿರಾರು ರೈತರು ಬದುಕು ನಡೆಸುವುದೇ ಕಷ್ಟವಾಗಿದೆ. ಮಳೆ ಇಲ್ಲದೆ ಬೆಳೆ ಇಲ್ಲದೆ ಬದುಕುವುದು ಕಷ್ಟವಾಗಿದೆ. ಆದ್ದರಿಂದ ಈ ಬಾರಿ ಮುಸ್ಲಿಂ ಸಮುದಾಯದ ಎಲ್ಲರೂ ಸೇರಿ ತಾಲ್ಲೂಕಿನ ಹಿತದೃಷ್ಠಿಯಿಂದ ಇಲ್ಲಿನ ಕೆರೆಯಂಗಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ. ನಮಗಂತೂ ಈ ಕಾರ್ಯ ಹೆಚ್ಚು ತೃಪ್ತಿ ತಂದಿದೆ. ಮುಸ್ಲಿಂ ಸಮುದಾಯ ಎಲ್ಲರ ಒಳಿತನ್ನು ಬಯಸುತ್ತದೆ ಎಂದರು.
ಎಸ್.ಎಚ್.ಸೈಯದ್ ಮಾತನಾಡಿ, ನಾವೆಲ್ಲರೂ ರೈತರ ಹಿತದೃಷ್ಠಿಯಿಂದ ಸಾಮೂಹಿಕ ಪ್ರಾರ್ಧನೆ ಸಲ್ಲಿಸೋಣವೆಂದು ನಿರ್ಧರಿಸಿದ್ದೆವು. ಏ.೧೩ರ ಶನಿವಾರ ಬೆಳಗ್ಗೆ ೮ ಗಂಟೆಗೆ ಬಳ್ಳಾರಿ ರಸ್ತೆಯ ಜಾಮೀಯ ಮಸೀದಿಯಿಂದ ನೂರಾರು ಸಂಖ್ಯೆಯಲ್ಲಿ ಸೇರಿ ಅಲ್ಲಿಂದ ಕಾಲ್ನಡಿಗೆ ಮೂಲಕ ಕರೇಕಲ್ ಕೆರೆ ತಲುಪಿ ಅಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು ಎಂದರು.ಈ ಸಂದರ್ಭದಲ್ಲಿ ಸಮುದಾಯದ ಸಿ.ಆರ್.ಅಲ್ಲಾಬಕ್ಷಿ, ಎಸ್.ಮುಜೀಬುಲ್ಲಾ, ಸೈಯದ್ಅನ್ವರ್ಮಾಸ್ಟರ್, ಬಿ.ಫರೀದ್ಖಾನ್, ಕೆ.ದಾದಾಪೀರ್, ನೂರುದ್ದೀನ್ಮೌಲಾನ, ದಾವುದ್ಮೌಲಾನ, ಜಾಫರ್, ಖಾದರ್ ಮುಂತಾದವರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.