ನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಆವರಣದಿಂದ ಮಂಗಳವಾದ್ಯ ಮತ್ತು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪ್ರಾರಂಭವಾಗಲಿರುವ ಮೆರವಣಿಗೆಯು ಅಗ್ರಹಾರ, ಕಾಮಣ್ಣಗುಡಿ ವೃತ್ತ, ಎಂ.ಜಿ.ರಸ್ತೆ, ಮುಖ್ಯ ರಸ್ತೆ, ಹಳೇ ಬಸ್ ನಿಲ್ದಾಣ, ಐಜೂರು ವೃತ್ತ ಮಾರ್ಗವಾಗಿ ಸಾಗಿ ರಂಗರಾಯರದೊಡ್ಡಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಕೆ.ಶೇಷಾದ್ರಿ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಲೋಕ ಕಲ್ಯಾಣಾರ್ಥವಾಗಿ ಫೆಬ್ರವರಿ 4 ರಿಂದ 8ರವರೆಗೆ ನಗರದ ಆಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯ ಆವರಣದಲ್ಲಿ ಸಾಮೂಹಿಕ ಶ್ರೀ ಗಜಗೌರಿ ವ್ರತ ಆಯೋಜಿಸಲಾಗಿದೆ.ಶ್ರೀ ಸೀತಾರಾಮ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಶ್ರೀ ಬಲ ಮುರಿ ಗಣಪತಿ ದೇವಸ್ಥಾನ ಟ್ರಸ್ಟ್ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಮಂಡಳಿ ಸಹಯೋಗದೊಂದಿಗೆ ಮಿಗನಕಲ್ಲು ಶೃಂಗೇರಿಯ ವೇದಬ್ರಹ್ಮ ಶ್ರೀ ವಿಶ್ವೇಶ್ವರ ಭಟ್ ಮತ್ತು ವೇದ ಪಂಡಿತ ಗಣಪತಿ ಭಟ್ ನೇತೃತ್ವದಲ್ಲಿ ಗಜಗೌರಿ ವ್ರತ ಏರ್ಪಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫೆ.4ರಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಮಂಡಳಿ ವತಿಯಿಂದ ಸಂಜೆ 4 ಗಂಟೆಗೆ ಗಂಗೆ ಪೂಜೆ, ಗೋ ಪೂಜೆ, ಗಣಪತಿ ಪೂಜೆ, ಪುಣ್ಯಾಹ, ಮಹಾಸಂಕಲ್ಪ, ಕಂಕಣ ಬಂಧನ, ಅಂಕುರಾರ್ಪಣೆ, ಕಳಸ ಸ್ಥಾಪನೆ , ವಾಸ್ತು ಹೋಮ, ರಕ್ಷೋಗ್ನ ಹೋಮ, ದಿಗ್ಗ್ ಬಲಿ ಪೂಜೆ, ಪೂರ್ಣಪುತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.ಫೆ.5ರಂದು ಬೆಳಗ್ಗೆ 7.30ಕ್ಕೆ ಗಣಪತಿ ಹೋಮ, ನವಗ್ರಹ ಹೋಮ, ರುದ್ರಾಭಿಷೇಕ, ರುದ್ರ ಹೋಮ, ಮೃತ್ಯುಂಜಯ ಹೋಮ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 5.30ಕ್ಕೆ ಆಶ್ಲೇಷ ಬಲಿ ಮಹಾಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ಹೇಳಿದರು.
ಶ್ರೀ ಗಜಗೌರಿ ವ್ರತ ಪೂಜೆಯು ಫೆ.6ರಿಂದ ಪ್ರಾರಂಭವಾಗಲಿದ್ದು, ಅಂದು ಬೆಳಗ್ಗೆ 6.30 ಕ್ಕೆ ಗೋಪೂಜೆ ನೆರವೇರಲಿದೆ. ಬೆಳಗ್ಗೆ 7 ರಿಂದ 8 ಗಂಟೆವರೆಗೆ ಪೂಜೆಯಲ್ಲಿ ಭಾಗವಹಿಸುವ 108 ದಂಪತಿಗಳು ರಾಮನಗರದ ರಾಜಬೀದಿಯಲ್ಲಿ ಕಳಸ ಸಮೇತ ಮೆರವಣಿಗೆ ನಡೆಯಲಿದ್ದು, ನಂತರ 8 ಗಂಟೆಗೆ ಪೂಜಾ ಮಂಟಪಕ್ಕೆ ಪ್ರವೇಶಿಸುವರು. ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆವರೆಗೆ ಗಜಗೌರಿ ವ್ರತ ಜರುಗಿದ ನಂತರ ಮಹಾಮಂಗಳಾರತಿ, ತೀರ್ಥ , ಪ್ರಸಾದ ವಿನಿಯೋಗ ನಡೆಯಲಿದೆ.ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ವೀರಶೈವ ಮಂಡಳಿ ಮಕ್ಕಳಿಂದ ಕಂಸಾಳೆ ನೃತ್ಯ ಪ್ರದರ್ಶನ, ನಂತರ ಆರ್ಯವೈಶ್ಯ ಮಹಿಳಾ ಸದಸ್ಯರು ಡೊಳ್ಳು ಕುಣಿತ ಪ್ರದರ್ಶಿಸುವರು. ಸಂಜೆ 7 ಗಂಟೆಗೆ ಕಾಶಿ ಮಾದರಿಯಲ್ಲಿ ದೇವರ ವಿಗ್ರಹಗಳಿಗೆ ಗಂಗಾರತಿ ನೆರವೇರಿಸಿದ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಜರುಗಲಿದೆ ಎಂದು ಶೇಷಾದ್ರಿ ತಿಳಿಸಿದರು.
ಆನೆ ಮೇಲೆ ಗಜಗೌರಿ ಮೆರವಣಿಗೆ:ಪೆ.7ರಂದು ಬೆಳಗ್ಗೆ 8 ಗಂಟೆಗೆ ಪೌರ ಕಾರ್ಮಿಕರಿಗೆ ಮಡಿಲಕ್ಕಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ದತ್ತ ಉಪಶಂಕರ ಶ್ರೀ ಅನಂತ ಸತ್ಯಂ ಅವರ ನೇತೃತ್ವದಲ್ಲಿ 10 ಸಾವಿರ ಗಾಯತ್ರಿ ಜಪ ಮತ್ತು ಗಾಯತ್ರಿ ಹೋಮ, ಬೆಳಗ್ಗೆ 9 ಗಂಟೆಗೆ ವೇದಿಕೆಯಲ್ಲಿ ರಾಜ್ಯದ ನಾನಾ ಭಾಗಗಳ ಭಜನಾ ಮಂಡಳಿಗಳಿಂದ ಅಖಂಡ ಭಜನೆ, ರಾತ್ರಿ 7 ಗಂಟೆಗೆ ಗಜಗೌರಿ ಹರಿಕಥೆ ಮತ್ತು ದುರ್ಗ ದೀಪ ನಮಸ್ಕಾರ ಏರ್ಪಡಿಸಲಾಗಿದೆ.
ಫೆ.8ರಂದು ಬೆಳಗ್ಗೆ 7ಕ್ಕೆ ಶ್ರೀ ಗಜಗೌರಿ ವ್ರತ ಉದ್ಯಾಪನ ಹೋಮ, ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ಶ್ರೀ ಕ್ಷೇತ್ರ ಶಿವಗಂಗೆ ದೇವರಿಗೆ ಗಿರಿಜಾ ಕಲ್ಯಾಣ ನಡೆಯಲಿದೆ. ವಿವಿಧ ಮಠಾಧಿಪತಿಗಳಿಂದ ಪ್ರವಚನ ಮತ್ತ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುವುದು. ಮಧ್ಯಾಹ್ನ 3 ಗಂಟೆಯಿಂದ ಆನೆಯ ಮೇಲೆ ಗಜಗೌರಿ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.ನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಆವರಣದಿಂದ ಮಂಗಳವಾದ್ಯ ಮತ್ತು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪ್ರಾರಂಭವಾಗಲಿರುವ ಮೆರವಣಿಗೆಯು ಅಗ್ರಹಾರ, ಕಾಮಣ್ಣಗುಡಿ ವೃತ್ತ, ಎಂ.ಜಿ.ರಸ್ತೆ, ಮುಖ್ಯ ರಸ್ತೆ, ಹಳೇ ಬಸ್ ನಿಲ್ದಾಣ, ಐಜೂರು ವೃತ್ತ ಮಾರ್ಗವಾಗಿ ಸಾಗಿ ರಂಗರಾಯರದೊಡ್ಡಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ಕೆ.ಶೇಷಾದ್ರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಶ್ರೀ ಸೀತಾ ರಾಮಸೇವಾ ಟ್ರಸ್ಟ್ ಅಧ್ಯಕ್ಷ ಆರ್.ರಾಘವೇಂದ್ರ, ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಕೆ.ವಿ.ಉಮೇಶ್, ಟ್ರಸ್ಟಿನ ಪದಾಧಿಕಾರಿಗಳಾದ ಆರ್.ವಿ.ಸುರೇಶ್, ಸೋಮಶೇಖರ್ (ಮಣಿ), ಪಿ.ಶಿವಾನಂದ್, ಗೂಳಿಗೌಡ, ಕಿರಣ, ಕುಮಾರ್, ಚಂದನ್ ಮೋರೆ, ಬಿಜೆಪಿ ಮಂಜು ಇದ್ದರು.