ಅಪಾರ ಪ್ರಮಾಣದ ಬೆಳೆ ಹಾನಿ: ಕೆಪಿಟಿಸಿಎಲ್‌ಗೆ ಬೀಗ ಜಡಿದು ಪ್ರತಿಭಟನೆ

| Published : Jun 28 2025, 12:20 AM IST / Updated: Jun 28 2025, 12:21 AM IST

ಅಪಾರ ಪ್ರಮಾಣದ ಬೆಳೆ ಹಾನಿ: ಕೆಪಿಟಿಸಿಎಲ್‌ಗೆ ಬೀಗ ಜಡಿದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಸದ್ಯ ಆವರಣದಲ್ಲಿ ನಿಂತಿರುವ ನೀರನ್ನು ಪಕ್ಕದ ಜಮೀನಿಗೆ ಹೋಗದಂತೆ ಎರಡು ದಿನದಲ್ಲಿ ಹೊರ ಹಾಕಲು ಕ್ರಮ

ನವಲಗುಂದ: ಪಟ್ಟಣದ ಹೊರ ವಲಯದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಅವರಣದಲ್ಲಿನ ನೀರು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ ಎಂದು ರೈತ ಪ್ರಕಾಶ ಶಿಗ್ಲಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿದ್ಯುತ್ ವಿತರಣಾ ಕೇಂದ್ರದ ಅವರಣದುದ್ದಕ್ಕೂ ಜಾಲಿ ಕಂಟಿಗಳು ಬೆಳೆದಿದ್ದು, ಮಳೆ ನೀರು ಹೊರ ಹೋಗದೆ ಅಪಾರ ಪ್ರಮಾಣದಲ್ಲಿ ಶೇಖರಣೆಯಾಗುತ್ತಿದೆ. ಪಕ್ಕದಲ್ಲಿಯೇ ಇರುವ ನಮ್ಮ ಜಮೀನಿಗೆ ನೀರು ನುಗ್ಗಿ ಪ್ರತಿ ಮಳೆಗಾಲದಲ್ಲೂ ಬೆಳೆ ಹಾನಿಯಾಗಿ ಲಕ್ಷಾಂತರ ನಷ್ಟವಾಗುತ್ತಿದೆ. ಈ ಕುರಿತು ಹಲವಾರು ಬಾರಿ ವಿತರಣಾ ಕೇಂದ್ರದ ಅಭಿಯಂತರರಿಗೆ ಮನವಿ ಮಾಡಿದರು ಕ್ರಮ ಜರುಗಿಸುತ್ತಿಲ್ಲ. ಹಾಗಾಗಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳದಲ್ಲಿದ್ದ ವಿತರಣಾ ಕೇಂದ್ರದ ಕಿರಿಯ ಅಭಿಯಂತರ ಶ್ರೀಶೈಲ ಗಾಜರೇ ಅವರೊಂದಿಗೆ ಗ್ರಾಮದ ಹಿರಿಯರು ಪ್ರತಿಭಟನಾ ನಿರತ ರೈತನೊಂದಿಗೆ ಮಾತನಾಡಿ, ಮನವೊಲಿಸಿ ನಂತರ ಪ್ರತಿಭಟನೆ ಹಿಂಪಡೆದರು.

ಈ ವೇಳೆ ಶ್ರೀಶೈಲ ಗಾಜರೇ ಮಾತನಾಡಿ, ಅಭಿಯಂತರರು ಸ್ಥಳಕ್ಕೆ ಆಗಮಿಸಿ ಶಾಶ್ವತ ಕಾಮಗಾರಿ ಮಾಡುವುದಾಗಿ ತಿಳಿಸಿದ್ದಾರೆ. ಈಗ ಸದ್ಯ ಆವರಣದಲ್ಲಿ ನಿಂತಿರುವ ನೀರನ್ನು ಪಕ್ಕದ ಜಮೀನಿಗೆ ಹೋಗದಂತೆ ಎರಡು ದಿನದಲ್ಲಿ ಹೊರ ಹಾಕಲು ಕ್ರಮ ಜರುಗಿಸಲಾಗುವುದು ಎಂದರು.

ಸ್ಥಳಕ್ಕೆ ಆಗಮಿಸಿದ್ದ ಹಿರಿಯರಾದ ಅಶೋಕ ಮಜ್ಜಿಗುಡ್ಡ, ಶಂಕರ ಧಾರವಾಡ, ಎನ್.ಪಿ. ಕುಲಕರ್ಣಿ, ನಿಂಗಪ್ಪ ಬಾರಕೇರ, ತಮ್ಮಣ್ಣ ಜೋಶಿ, ಬಸವರಾಜ ಅಕ್ಕಿ ಚರಂತಯ್ಯ ಹಿರೇಮಠ್, ಹನುಮಂತ ಗಡ್ಡಿ, ಕೆಪಿಟಿಸಿಎಲ್ ಮೆಕಾನಿಕ್‌ಗಳಾದ ಎಂ.ಜಿ. ಬಾವಿಮನಿ, ಬಿ.ವಿ. ಹೆಬ್ಬಾಳ, ರವಿ ಬನ್ನಿಗಿಡದ, ಬಿ.ವಿ. ಮಾಳವಾಡ ಇತರರು ಇದ್ದರು.