ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಕಳೆದ ಹತ್ತು ದಿನಗಳ ಹಿಂದೆ ರೈತ ಕುಟುಂಬ ಹಾಗೂ ಅರಣ್ಯಾಧಿಕಾರಿಗಳ ನಡುವೆ ಬುಗಿಲೆದ್ದಿದ್ದ ಗಲಾಟೆ ಪ್ರಕರಣ ಹಾಗೂ ದೂರು, ಪ್ರತಿದೂರಿನ ವಿಚಾರ ಶನಿವಾರ ಕೊಳ್ಳೇಗಾಲ ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಡಿಸಿಎಫ್ ಕಚೇರಿಯಲ್ಲಿ ರೈತ ಮುಖಂಡರ ಭಾರಿ ಪ್ರತಿಭಟನೆ ಹಿನ್ನೆಲೆ ಸುಖಾಂತ್ಯ ಕಂಡಿದೆ. ಶನಿವಾರ ರೈತ ಸಂಘದ ಕಾರ್ಯಕರ್ತರು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಲ್ಲಿನ ಅರಣ್ಯ ವ್ಯಾಪ್ತಿಯ ಸಿಬ್ಬಂದಿ ಮಹಿಳೆಯರ ಮೇಲೆ ಹಲ್ಲೆ ಹಾಗೂ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಅರಣ್ಯಾಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿ ನೂರಾರು ರೈತರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಕಚೇರಿಯನ್ನು ಮುತ್ತಿಗೆ ಹಾಕಿ, ಅರಣ್ಯ ಇಲಾಖೆ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು. ಪ್ರತಿಭಟನಾಕಾರರು ಡಿಸಿಎಫ್ ಕಚೇರಿಗೆ ಮುತ್ತಿಗೆ ಹಾಕಲು ಪ್ರವೇಶ ಮಾಡುತ್ತಿದಂತೆ ಪ್ರವೇಶ ದ್ವಾರದ ಗೇಟ್ಗಳನ್ನು ಬಂದ್ ಮಾಡಿ ರೈತರನ್ನು ನಿಯಂತ್ರಿಸಲಾಯಿತು. ಈ ವೇಳೆ ಕೆಲ ಸಮಯ ನೂಕು ನುಗ್ಗಲು ಸಹ ಉಂಟಾಯಿತು. ಇದನ್ನು ಲೆಕ್ಕಿಸದ ರೈತರು ಡಿಸಿ ಎಫ್ ಕಚೇರಿ ಆವರಣದ ಮುಂದೆ ಸಮಾವೇಶ ಗೊಂಡು ಬಳಿಕ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ನಮ್ಮನ್ನು ಏಕೆ ತಡೆದಿರಿ ಎಂದು ಪೊಲೀಸರನ್ನು ರೈತ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ಸಹ ಜರುಗಿತು. ಬಳಿಕ, ರೈತ ಮುಖಂಡ ಗೌಡೇಗೌಡ ಮಾತನಾಡಿ, ಫೆ.21ರಂದು ಹೂಗ್ಯಂ ಗ್ರಾಮದ ಜಮೀನಿಗೆ ಆನೆ ದಾಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಮೊಬೈಲ್ ಮೂಲಕ ಅರಣ್ಯ ಸಿಬ್ಬಂದಿಯನ್ನು ಕರೆದು ಪ್ರಶ್ನಿಸಿದ್ದಕ್ಕೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಖಂಡಿಸಿ 3 ದಿನಗಳ ಹೋರಾಟ ನಡೆಸಿದ್ದೇವೆ. ಅರಣ್ಯ ಸಿಬ್ಬಂದಿ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆನಂತರ, ಅರಣ್ಯ ಸಿಬ್ಬಂದಿ ರೈತರು ಹಲ್ಲೆ ನಡೆಸಿದಲ್ಲದೆ, ಜಾತಿ ನಿಂದನೆ ಮಾಡಿದ್ದರೆ ಎಂದು ಸುಳ್ಳು ಪ್ರತಿ ದೂರು ನೀಡಿದ್ದಾರೆ. ಈ ಹಿನ್ನಲೆ ಇಂದು ಮುತ್ತಿಗೆ ಚಳುವಳಿ ನಡೆಸುತ್ತಿದ್ದೇವೆ, ಈ ಬೆಳವಣಿಗೆ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು. ಮಾಜಿ ಶಾಸಕ ಆರ್.ನರೇಂದ್ರ, ರಾಜ್ಯ ಸಂಘದ ಜಿಲ್ಲಾಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ಮಹೇಶ್ ಪ್ರಭು, ಡಿಸಿಎಫ್ ಸಂತೋಷ್ ಕುಮಾರ್ ಹಾಗೂ ಇತರೆ ರೈತ ಸಂಘದ ಪಧಾಧಿಕಾರಿಗಳ ಸಮ್ಮುಖದಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿ ಈ ಪ್ರಕರಣದ ಸಂಬಂಧ ಏನು ಕ್ರಮ ತೆಗೆದು ಕೊಳ್ಳಬೇಕೆಂದು ತೀರ್ಮಾನಿಸಲಾಯಿತು.ಸಭೆಯಲ್ಲಿನ ನಿರ್ಣಯ ಉದ್ದೇಶಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಭೆ ನಡೆಸಿದ್ದೇವೆ. ಇಂತಹ ಪ್ರಕರಣಗಳು ಮತ್ತೆ ನಡೆಯದಂತೆ ಡಿಸಿಎಫ್ ಕ್ರಮವಹಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಈ ಘಟನೆ ಸಂಬಂಧ ಅವರೆ ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದಾರೆ, ಗಲಾಟೆ ಮಾಡಿದ ಅರಣ್ಯಾಧಿಕಾರಿಗಳನ್ನು ಈ ಸ್ಥಳದಿಂದ ವರ್ಗಾವಣೆ ಮಾಡಬೇಕಾಗಿ ಕೇಳಿದ್ದೇವೆ. 1 ವಾರ ಕಾಲಾವಕಾಶ ಕೇಳಿದ್ದಾರೆ. ಈ ಪ್ರಕರಣದಲ್ಲಿನ ದೂರು-ಪ್ರತಿದೂರನ್ನು ವಾಪಸ್ಸು ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ, ಹಾಗಾಗಿ ಎಲ್ಲರೂ ಸಹಕರಿಸಬೇಕೆಂದರು.ರೈತರಲ್ಲಿ ಕ್ಷಮೆ ಯಾಚಿಸಿದ ಡಿಸಿಎಫ್: ಹೂಗ್ಯಂ ಘಟನೆ ಕುರಿತು ಸ್ವತಃ ಡಿಸಿಎಫ್ ಸಂತೋಷ್ ರೈತರಲ್ಲಿ ಬಹಿರಂಗವಾಗಿ ನಮ್ಮ ಸಿಬ್ಬಂದಿ ಪರವಾಗಿ ನಾನು ಕ್ಷಮೇ ಕೇಳುತ್ತೆನೆಂದು ಪ್ರತಿಭಟನಾನಿರತ ರೈತರಲ್ಲಿ ಕ್ಷಮೆಯಾಚಿಸಿದ ಘಟನೆ ಜರುಗಿತು. ಡಿಸಿಎಫ್ ಸಂತೋಷ್ ಕುಮಾರ್ ಮಾತನಾಡಿ, ಪ್ರಾಣಿ ಮತ್ತು ವನ್ಯ ಜೀವಿ ಸಂಘರ್ಷ ತಡೆಗಟ್ಟಲು ಹೂಗ್ಯಂ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ರೈತರೊಂದಿಗೆ ಸಭೆ ನಡೆಸಲಾಗುತ್ತದೆ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕ್ರಮ ವಹಿಸುತ್ತೇನೆ. ವಾಟ್ಸ್ ಆಪ್ ಗ್ರೂಪ್ ತೆರೆದು ಜನರು ಸಮಸ್ಯೆಗಳ ಬಗೆಹಿಸುವ ನಿಟ್ಟಿನಲ್ಲಿ ಇಲಾಖೆಗೆ ರವಾನಿಸುವಂತೆ ಅವಕಾಶ ಮಾಡಿ ಕೊಡಲಾಗುತ್ತದೆ. ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನೀಡಿರುವ ದೂರನ್ನು ಹಿಂಪಡೆಯುತ್ತೇವೆ. ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ. ಎಲ್ಲರೂ ಸೇರಿ ಉತ್ತಮ ಕೆಲಸ ಮಾಡೋಣ, ಅರಣ್ಯ ಉಳಿವಿಗಾಗಿ ರೈತರು ಸಹಕಾರ ನೀಡಿ ಎಂದರು.
ರೈತ ಮಹಿಳೆಯರ ಮೇಲೆ ಹಲ್ಲೆ ನಡೆದಿರುವುದನ್ನು ಈಗಾಗಲೇ ಖಂಡಿಸಿದ್ದೇನೆ. ಹಾಗಾಗಿ ಈಪ್ರತಿಭಟೆನಯಲ್ಲಿ ಪಾಲ್ಗೊಂಡಿದ್ದು ಮುಂದಿನ ದಿನಗಳಲ್ಲಿ ಈ ರೀತಿ ಪ್ರಕರಣ ಮರುಕಳುಹಿಸದಂತೆ ಮೇಲಾಧಿಕಾರಿಗಳು ಗಮನಹರಿಸಬೇಕು, ಸಾರ್ವಜನಿಕರ ಜೊತೆ ಸೌಜನ್ಯವಾಗಿ ನಡೆದು ಕೊಳ್ಳಬೇಕೆಂದು ಕಿರಿಯ ಅಧಿಕಾರಿಗಳಿಗೆ ಹೇಳಿ ಕೊಡಬೇಕು. ಮಹಿಳೆಯರ ಮೇಲೆ ಹಲ್ಲೆ ಮಾಡಿದ ಸಿಬ್ಬಂದಿಯನ್ನು ಈ ಸ್ಥಳದಿಂದ ವರ್ಗಾವಣೆ ಮಾಡುತ್ತೇವೆ. ಎಂದು ಡಿಸಿಎಫ್ ಒಪ್ಪಿದ್ದಾರೆ, ನಾಗಮಲೆಗೆ ತೆರಳಲು ಭಕ್ತರಿಗೆ ಅರಣ್ಯ ಇಲಾಖಾಧಿಕಾರಿ ಅನುಮತಿ ನೀಡಬೇಕು.- ಆರ್ ನರೇಂದ್ರ. ಹನೂರಿನ ಮಾಜಿ ಶಾಸಕ