ಸಾರಾಂಶ
ಒಂದು ಪುಸ್ತಕ ಒಬ್ಬ ಶ್ರೇಷ್ಠ ಸ್ನೇಹಿತನಿದ್ದಂತೆ. ಶ್ರೇಷ್ಠ ಕವಿಗಳು ದಾರ್ಶನಿಕರು, ಆತ್ಮಚರಿತ್ರೆ ಬರೆದವರ ಪುಸ್ತಕಗಳನ್ನು ಓದುವುದರಿಂದ ಬದುಕುವ ಕಲೆ ಕರಗತವಾಗುತ್ತಿದೆ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಒಬ್ಬ ಮನುಷ್ಯ ಪರಿಪೂರ್ಣವಾಗಬೇಕಾದರೆ ದೇಶ ಸುತ್ತಬೇಕು, ಇಲ್ಲಾ ಕೋಶ ಓದಬೇಕು ಎಂಬ ಗಾದೆ ಇದೆ. ದೇಶ ಸುತ್ತಲೂ ಆಗದಿದ್ದಲ್ಲಿ ಕೋಶ ಓದುವುದರಿಂದ ಪರಿಪೂರ್ಣನಾಗುತ್ತಿದ್ದು, ಅದಕ್ಕಾಗಿ ಓದುಗರು ಸಮಚಿತ್ತ ಅಧ್ಯಯನ ಮಾಡಬೇಕೆಂದು ಗ್ರೇಡ್-2 ತಹಸೀಲ್ದಾರ್ ನಾಗೇಂದ್ರ ಕೋರಿಶೆಟ್ಟಿ ಹೇಳಿದರು.ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ನಿಮಿತ್ತ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಪುಸ್ತಕ ಒಬ್ಬ ಶ್ರೇಷ್ಠ ಸ್ನೇಹಿತನಿದ್ದಂತೆ. ಶ್ರೇಷ್ಠ ಕವಿಗಳು ದಾರ್ಶನಿಕರು, ಆತ್ಮಚರಿತ್ರೆ ಬರೆದವರ ಪುಸ್ತಕಗಳನ್ನು ಓದುವುದರಿಂದ ಬದುಕುವ ಕಲೆ ಕರಗತವಾಗುತ್ತಿದೆ ಎಂದರು.
ಒಬ್ಬ ಲೇಖಕ ಒಂದು ವಿಷಯದ ಮೇಲೆ ಬರೆದಿದ್ದರೆ, ಅದೇ ವಿಷಯವನ್ನು ಮತ್ತೊಬ್ಬ ಲೇಖಕ ವಿಭಿನ್ನವಾಗಿ ಬರೆದಿರುತ್ತಾರೆ. ವಿಷಯ ಒಂದೇ ಆದರೂ ಅಧ್ಯಯನ ರೀತಿ ಬೇರೆಯಾಗಿರುತ್ತದೆ. ಕಾರಣ ಹಲವಾರು ಲೇಖಕರ ಪುಸ್ತಕಗಳನ್ನು ಓದುವುದು ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಮಟ್ಟದಲ್ಲಿ ಓದುಗರ ಸಂಖ್ಯೆ ಹೆಚ್ಚಾಗಬೇಕೆಂಬ ಗುರಿ ಇದೆ ಎಂದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ ಕಾರ್ಯಾಲಯದ ಶಿರಸ್ತೇದಾರ ಮಹಾಂತೇಶ ಅಂಗಡಿ, ಸ್ಪರ್ಧಾತ್ಮಕ ಅಧ್ಯಯನ ಕೇಂದ್ರದ ಅಭಿಷೇಕ ಕಬ್ಬಿಣದ ಸೇರಿದಂತೆ ಇತರರು ಉಪಸ್ಥಿತರಿದ್ದರು.