ಕನ್ನಡದ ಎಲ್ಲ ಮನಸ್ಸುಗಳು ಒಂದಾಗಲಿ: ಸದ್ದಾಂ ನದಾಫ

| Published : Nov 10 2025, 01:45 AM IST

ಸಾರಾಂಶ

ತಾಲೂಕಿನ ಕಿರವತ್ತಿಯಲ್ಲಿ ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಿರವತ್ತಿಯಲ್ಲಿ ಜಯಕರ್ನಾಟಕ ಸಂಘಟನೆಯಲ್ಲಿ ಕನ್ನಡ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ತಾಲೂಕಿನ ಕಿರವತ್ತಿಯಲ್ಲಿ ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಿರವತ್ತಿಯ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನಡೆಯಿತು. ಮಹಿಳೆಯರ ಅಬ್ಬರದ ಡೊಳ್ಳುಕುಣಿತ ಗಮನ ಸೆಳೆಯಿತು. ಕನ್ನಡ ಪರ ಘೋಷಣೆ, ಬಾವುಟ, ಕನ್ನಡ ಹಾಡಿಗೆ ಕುಣಿತ, ಆಕರ್ಷಕ ಸ್ತಬ್ಧಚಿತ್ರದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಜಯಕರ್ನಾಟಕ ಸಂಘಟನೆಯ ಹುಬ್ಬಳ್ಳಿಯ ಘಟಕದ ಅಧ್ಯಕ್ಷ ಸದ್ದಾಂ ನದಾಫ ಮಾತನಾಡಿ, ಎಲ್ಲ ಕನ್ನಡ ಮನಸ್ಸುಗಳೂ ಒಂದಾಗಿ ನಾಡು, ನುಡಿ ಏಳಿಗೆಗೆ ಶ್ರಮಿಸಬೇಕು ಎಂದರು.

ಫಾ. ರೇಮಂಡ್ ಫರ್ನಾಂಡೀಸ್ ಮಾತನಾಡಿ, ಜಾತಿ, ಧರ್ಮ ಬದಿಗಿಟ್ಟು ಭಾಷೆಯ ಮೂಲಕ ಸಮಾಜವನ್ನು ಜೋಡಿಸುವ, ಕೂಡಿಸುವ ಕೆಲಸ ಮಾಡಬೇಕು. ಕನ್ನಡ ಉಳಿಸಲು ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದರು.

ಸಾಮಾಜಿಕ ಕಾರ್ಯಕರ್ತೆ ಸೀಮಾ ಫರ್ನಾಂಡೀಸ್ ಮಾತನಾಡಿ, ಕಳೆದ ೧೫ ವರ್ಷದಿಂದ ಸಂಘಟನೆ ಕನ್ನಡದ ಕೆಲಸಕ್ಕಾಗಿ ಹೋರಾಡುತ್ತ ಬಂದಿರುವುದು ಅಭಿಮಾನದ ಸಂಗತಿ ಎಂದರು.

ಪ್ರಮುಖರಾದ ನೂರ್ ಅಹಮ್ಮದ್ ಶೇಖ್, ಜೂಜೆ ಸಿದ್ದಿ ಮುಂಡಗೋಡ ಮಾತನಾಡಿದರು. ಸಂಘಟನೆಯ ಪ್ರಮುಖರಾದ ಮಂಜುನಾಥ ಬಾರಕರ್, ರಾಜಶೇಖರ ವಂದಲಿ, ಎಸ್. ಫಕೀರಪ್ಪ, ದೀಪಕ ಮಿರಾಶಿ, ಮುನಾಫ ಪಟೇಲ್, ಶಂಶಾದ್ ಅತ್ತರ್, ತೇರೆಜಾ ಫರ್ನಾಂಡೀಸ್, ಕಲ್ಪನಾ ಪಾಟೀಲ್, ಅರ್ಜುನ ಬೆಂಗೇರಿ, ಮಾಯಾ ಪಾಟೀಲ್, ಮಹೇಶ ನಾಯ್ಕ, ಹರೂಣ ಪಟೇಲ್, ಜಾಫರ್ ವಂಟಿ, ಚನ್ನಪ್ಪ ಡಿ.ಎಸ್, ಫಾತಿಮಾ, ಗಾಂಧಿ ಸೋಮಾಪುರಕರ್, ಬಮ್ಮು ಪಾಟೀಲ್, ಪರಶುರಾಮ, ಜಾನು ಪಟಕಾರೆ, ಗಂಗವ್ವ ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಅಕ್ಷತಾ ಧೂಳಿಕೊಪ್ಪ ಅವರನ್ನು ಪುರಸ್ಕಾರಿಸಲಾಯಿತು. ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆಗೆ ಆಯ್ಕೆಯಾದ ಕಿರವತ್ತಿಯ ರೋಷನ್ ಕಿತ್ತೂರ ತಂಡವನ್ನು ಗೌರವಿಸಲಾಯಿತು.

ಸುಮಂಗಲಾ ಹನುಮರೆಡ್ಡಿ ಸಂಗಡಿಗರು ಪ್ರಾರ್ಥಿಸಿದರು. ಸಂಘಟನೆ ತಾಲೂಕಾಧ್ಯಕ್ಷ ವಿಲ್ಸನ್ ಫರ್ನಾಂಡೀಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗಂಗಾಧರ ಎಸ್.ಎಲ್. ಕಾರ್ಯಕ್ರಮ ನಿರ್ವಹಿಸಿದರು.