ಧಾರವಾಡ:
ಸಮಾಜದಲ್ಲಾಗುವ ಅನ್ಯಾಯ, ಅವ್ಯವಸ್ಥೆ ಎದುರಿಸುವ ತಾಕತ್ತು ಪತ್ರಕರ್ತ ಹೊಂದಿರಬೇಕು. ಯಾವುದೇ ಮುಲಾಜಿಗೆ ಒಳಗಾಗದೇ ಸದಾಕಾಲ ಸತ್ಯದ ಪರವಾಗಿ ನಿಲ್ಲಬೇಕು. ಇದು ಪತ್ರಿಕೋದ್ಯಮದ ವೃತ್ತಿಪರತೆ ಮತ್ತು ಪತ್ರಕರ್ತನ ವ್ಯಕ್ತಿ ಗೌರವ ಸಮಾಜದಲ್ಲಿ ಎತ್ತಿಹಿಡಿಯುತ್ತದೆ ಎಂದು ಕವಿವಿ ಕುಲಸಚಿವ ಡಾ. ಶಂಕರೆಪ್ಪ ವಣಿಕ್ಯಾಳ ಹೇಳಿದರು.ವಾರ್ತಾ ಇಲಾಖೆಯು ಕವಿವಿ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಕವಿವಿ ಕನಕ ಭವನದಲ್ಲಿ ಆಯೋಜಿಸಿದ್ದ ಮೀಡಿಯಾ ಫೆಸ್ಟ್ ಸಮಾರೋಪದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಪಕ್ಷಾತೀತ ಮತ್ತು ನಿರ್ಭಿಡೆಯ ಕೆಲಸದಿಂದ ಸಮಾಜಕ್ಕೆ ಮಾರ್ಗದರ್ಶಕರು. ಆದರೆ, ಕೆಲವರು ಶೋಕಿಗಾಗಿ ಪತ್ರಿಕೆ ಆರಂಭಿಸುವ, ಪತ್ರಕರ್ತರಾಗುತ್ತಿದ್ದಾರೆ. ಇದರಿಂದ ಮಾಧ್ಯಮದ ನೈತಿಕತೆ ಹಾಗೂ ವಿಶ್ವಾರ್ಹತೆ ಕಡಿಮೆಯಾಗುತ್ತದೆ. ಇಂತಹದಕ್ಕೆ ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮಗಳ ಮುಖ್ಯಸ್ಥರು ಕಡಿವಾಣ ಹಾಕಬೇಕೆಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ಪ್ರಸ್ತುತ ಸಾಮಾಜಿಕ ಜಾಲತಾಣಗಳಿಂದ ಪ್ರತಿಯೊಬ್ಬ ನಾಗರಿಕನು ಪತ್ರಕರ್ತನಾಗಿದ್ದು ವರದಿಗಾರಿಕೆಗೆ ಯಾವುದೇ ಚೌಕಟ್ಟು ಇಲ್ಲದಾಗಿದೆ. ಇಂದಿನ ಪತ್ರಿಕಾ ಮಾಧ್ಯಮದಲ್ಲಿ ಭಾಷಾ ಶುದ್ಧತೆ ಕಡಿಮೆಯಾಗಿದ್ದು ಜನರಿಗೆ ತಿಳಿಯುವಂತೆ ಬರೆಯುವುದು ಅವಶ್ಯಕವಾಗಿದೆ ಎಂದರು.ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಹಸಿವು, ಬಡತನ ಹಾಗೂ ಅಶಕ್ತರ ಧ್ವನಿಯಾಗಿ ಇರಬೇಕಾದ, ಭ್ರಷ್ಟಾಚಾರ, ಅನ್ಯಾಯ, ಅವ್ಯವಸ್ಥೆಯ ಬಗ್ಗೆ ಸಿಡಿದೇಳಬೇಕಾದ ಪತ್ರಕರ್ತರು ತಮ್ಮ ಮೂಲ ಕರ್ತವ್ಯ ಮರೆತಿದ್ದಾರೆ. ಉದ್ಯಮಿಗಳ ಕೈಗೆ ಸಿಕ್ಕಿರುವ ಪತ್ರಿಕೋದ್ಯಮ ಸದ್ಯ ಒಂದೇ ದಾರಿಯಲ್ಲಿ ಸಾಗುತ್ತಿದೆ. ಎಐ ಅಂತಹ ಎಂತಹುದೇ ತಂತ್ರಜ್ಞಾನ ಬರಲಿ ಪತ್ರಕರ್ತರು ಮಾತ್ರ ಸತ್ಯದ, ನ್ಯಾಯದ ಪರವಾಗಿ ಇರಬೇಕು. ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ತನಿಖಾ ಪತ್ರಿಕೋದ್ಯಮ ಹೋಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಸುದ್ದಿಯ ಬೆನ್ನು ಬೀಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಂಜೀವಕುಮಾರ ಮಾಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಡಾ. ಎ.ಎಸ್. ಬಾಲಸುಬ್ರಮಣ್ಯ, ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ, ಪ್ರಭಾರಿ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ, ಗೀತಾ ಚವ್ಹಾಣ ಇದ್ದರು. ಪ್ರಾಧ್ಯಾಪಕ ಪ್ರೊ. ಜೆ.ಎಂ. ಚಂದುನವರ ವಂದಿಸಿದರು. ಮೀಡಿಯಾ ಫೆಸ್ಟ್ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪದವಿ ಹಂತದಲ್ಲಿ ಕರ್ನಾಟಕ ಕಾಲೇಜು ಹಾಗೂ ಸ್ನಾತಕೋತ್ತರ ಹಂತದಲ್ಲಿ ಬೆಳಗಾವಿಯ ರಾಣಿಚೆನ್ನಮ್ಮ ವಿವಿ ವಿದ್ಯಾರ್ಥಿಗಳು ಹೆಚ್ಚಿನ ಬಹುಮಾನ ಪಡೆದರು.