ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕಾದರೆ ಮನಸ್ಸು ಶ್ರದ್ಧಾಭಕ್ತಿಯಿಂದ ಪರಿಶುದ್ಧವಾಗಿರಬೇಕು ಎಂದು ಕಾಗಿನೆಲೆಯ ತಿಂತಿಣಿ ಮಹಾಸಂಸ್ಥಾನ ಗುರುಪೀಠದ ಪರಮಪೂಜ್ಯ ಸಿದ್ದ ರಾಮಾನಂದಪುರಿ ಶ್ರೀ ಹೇಳಿದರು.ನಂದಗುಡಿಯಲ್ಲಿ ನೆಲೆಸಿರುವ ಕಾಗಿನೆಲೆಯ ತಿಂತಿಣಿ ಮಹಾಸಂಸ್ಥಾನ ಗುರುಪೀಠದ ಆವರಣದಲ್ಲಿ ನಂದಗುಡಿ ಶ್ರೀಬೀರೇದೇವರ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿನಿತ್ಯ ದೇವರ ಧ್ಯಾನ ಮಾಡಬೇಕು. ಜೀವನದಲ್ಲಿ ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ದೇವಾಲಯಗಳು ಅವಶ್ಯಕ. ಜನರಲ್ಲಿ ಭಕ್ತಿ ಭಾವ ಸಂಪ್ರದಾಯ ಸಂಸ್ಕಾರದ ಬಗ್ಗೆ ಗೌರವ ಮೂಡಿಸುವಲ್ಲಿ ಧಾರ್ಮಿಕ ಉತ್ಸವಗಳು ಸಹಕಾರಿ ಎಂದರು.
ಕುಲ ಗುರುಗಳಾದ ಆಲಂಗಿರಿಯ ಗುರುಮಠದ ಗುಡಿಯ ಶ್ರೀ ಸಿದ್ಧಲಿಂಗಾರಾಧ್ಯ ಮಾತನಾಡಿ, ಸಮುದಾಯದವರು ಸಾವಿರಾರು ವರ್ಷಗಳಿಂದ ಎಲ್ಲಾ ಒಕ್ಕೂಟಗಳಿಗೂ ಸೇರಿ ಮೂಲ ದೇವರಾಗಿ ಬಸವನನ್ನು ದೇವರ ಹಸು ಎಂದು ಬಿಂಬಿಸಿ ಪೂಜೆ ಸಲ್ಲಿಸಿ, ಇಲ್ಲಿ ದೇವರುಗಳ ತಲೆ ಮೇಲೆ ಕಾಯಿ ಒಡೆಯುವ ಜಾತ್ರಾ ಮಹೋತ್ಸವ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಂದಗುಡಿ ಬೀರೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಗುರುಪ್ರಸಾದ್, ಉಪಾಧ್ಯಕ್ಷ ಎನ್. ಮಂಜುನಾಥ್, ಕಾರ್ಯಾಧ್ಯಕ್ಷ ಎಸ್.ಸೋಮಶೇಖರ್, ಕಾರ್ಯದರ್ಶಿ ಎಂ.ನಾಗೇಶ್, ಖಜಾಂಚಿ ಬಂಡೆಹೊಸೂರು ರಮೇಶ್, ಅಂತರಿಕ ಲೆಕ್ಕ ಪರಿಶೋಧಕ ಕೆ.ಎಂ.ಮುನಿನಾರಾಯಣಪ್ಪ, ಜಿಪಂ ಮಾಜಿ ಸದಸ್ಯ ಸಿ.ನಾಗರಾಜ್, ಕುಲದ ಗುರುಗಳಾದ ಶ್ರೀ ಸಿದ್ಧಲಿಂಗಾರಾಧ್ಯರು, ಪ್ರಧಾನ ಅರ್ಚಕರಾದ ಚಾಗಲೇಟಿಯ ಶಿವರಾಜ್, ದೇವರಾಜ್, ಹೇಮಂತ್ಕುಮಾರ್ ಕುಂಬಳಹಳ್ಳಿ ಅಣ್ಣೆಪ್ಪ, ಬೆಂಗಳೂರು ಬಿಎಂಎಸ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಎನ್.ಎಸ್.ನಾಗಮ್ಮ, ನಾಗೇಂದ್ರ, ಪರಮೇಶ್, ಬಂಡೆ ಹೊಸೂರು, ನಲ್ಲೂರು, ವಡಿಗೇನಹಳ್ಳಿ, ಮೇಲೂರು ಹಾಗೂ ನಂದಗುಡಿ ಶ್ರೀಬೀರೇದೇವರುಗಳ ಕಂಬಿಯ ಗೌಡರು ಮತ್ತು ಯಾಜಮಾನರು ಸಹಸ್ರಾರು ಸಂಖ್ಯೆಯ ಒಕ್ಕಲಿನವರು ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.