ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಹೊಸ ವರ್ಷ ಪ್ರತಿಯೊಬ್ಬ ರೈತರು, ಸಾರ್ವಜನಿಕರಿಗೆ ಹೊಸ ಹರುಷ ತರಲಿ. ಸಕಾಲಕ್ಕೆ ಮಳೆ ಬೆಳೆಯಾಗಿ ರೈತರು ನೆಮ್ಮದಿ ಬದುಕು ನಡೆಸುವಂತಾಗಲಿದೆ ಎಂದು ಶಾಸಕ ದರ್ಶನ್ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಜಕ್ಕನಹಳ್ಳಿ ಸರ್ಕಲ್ನಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, 2024ನೇ ವರ್ಷ ರೈತರು ಸೇರಿದಂತೆ ಪ್ರತಿಯೊಬ್ಬರ ಜೀವನದಲ್ಲಿ ಸಾಕಷ್ಟು ನೋವು- ನಲಿವುಗಳು, ಸಿಹಿ-ಕಹಿ ಘಟನೆಗಳನ್ನು ನೋಡಿದ್ದೇವೆ ಎಂದರು.
ರೈತರಿಗೆ ಆರಂಭದಲ್ಲಿ ಸ್ವಲ್ಪ ಭರದ ಛಾಯೆ ಮನೆ ಮಾಡಿತ್ತು. ಬಳಿಕ ಸೂಕ್ತ ಮಳೆಯಾಗಿ ಕನ್ನಂಬಾಡಿ ಕಟ್ಟೆ ಭರ್ತಿಯಾಗುವ ಮೂಲಕ ಉತ್ತಮ ಬೆಳೆಯಾಗಿದೆ. ಇದೇ ರೀತಿ ಮುಂದಿನ 2025ನೇ ವರ್ಷವೂ ಸಹ ರೈತರು ನೆಮ್ಮದಿಯ ಜೀವನ ನಡೆಸುವಂತಾಗಲಿದೆ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದರು.ಈ ವೇಳೆ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಟಿಎಪಿಸಿಎಂಎಸ್ ನಿರ್ದೇಶಕ ಬೆಟ್ಟಸ್ವಾಮೀಗೌಡ, ತಾಪಂ ಮಾಜಿ ಸದಸ್ಯ ರಾಮೇಗೌಡ, ಗ್ರಾಪಂ ಅಧ್ಯಕ್ಷೆ ಮಂಜುಳ, ಸದಸ್ಯರಾದ ಸಂಗಾಪುರ ಪ್ರಕಾಶ್, ಶಂಕರ್, ಮುಖಂಡರಾದ ಕೆ.ಎಚ್.ಪುಟ್ಟಸ್ವಾಮೀಗೌಡ, ಮುರುಳೀಧರ್, ಚನ್ನೇಗೌಡ, ಶಿವರಾಮೇಗೌಡ, ಎ.ಎಸ್.ಕೃಷ್ಣೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಳ್ಳತನಕ್ಕೆ ವಿಫಲ ಯತ್ನಪಾಂಡವಪುರ: ಪಟ್ಟಣದ ಹಾರೋಹಳ್ಳಿಯ ಮನೆಗಳಲ್ಲಿ ಕಳ್ಳತನಕ್ಕೆ ಕಳ್ಳರ ಗುಂಪೊಂದು ವಿಫಲ ಯತ್ನ ನಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ಆಲೆಮನೆ ಬೀದಿಯ ಚಿಕ್ಕಬೋಯಿ ಪುತ್ರ ರಾಮಕೃಷ್ಣರಿಗೆ ಸೇರಿದ ಹೆಂಚಿನ ಮನೆ ಮೇಲೆ ಓಡಾಡಿರುವ ಕಳ್ಳರು ಹೆಂಚು ತೆಗೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ನಾಯಿಗಳು ಬೊಗಳಿದ್ದು, ನಿವಾಸಿಗಳು ಹೊರ ಬಂದಾಗ ಕಳ್ಳರ ಗುಂಪು ನಾಯಿಗಳ ಮೇಲೆ ಕಲ್ಲು ತೂರಿ ಪರಾರಿಯಾಗಿದೆ. ಅಲ್ಲದೇ ಪಕ್ಕದ ಬೀದಿಯ ಪಾರ್ವತಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ರಾಮೇಗೌಡರ ಖಾಲಿ ಮನೆ ಬೀಗ ಮುರಿದು ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದು, ಯಾವುದೇ ಹಣ, ಒಡವೆ ಸಿಗದೆ ಅಲ್ಲಿಂದ ತೆರಳಿದ್ದಾರೆ. ತಾಲೂಕು, ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಪೊಲೀಸರು ರಾತ್ರಿ ಗಸ್ತು ತಿರುಗುವಂತೆ ಜನರು ಒತ್ತಾಯಿಸಿದ್ದಾರೆ.