ಇಂದಿನಿಂದ ಪರಾಭವ ಸಂವತ್ಸರ ಪ್ರಾರಂಭಗೊಂಡಿದೆ. ಗುರು ಅಧಿಪತಿಯಾಗಿದ್ದಾನೆ. ಗುರು ರಾಜನ ಸ್ಥಾನದಲ್ಲಿದ್ದಾನೆ.
ಹಿಂದೂ ಯುಗಾದಿ ಉತ್ಸವದ ಮೆರವಣಿಗೆಯ ನಂತರ ಪಂಚಾಂಗ ಶ್ರವಣ
ಕನ್ನಡಪ್ರಭ ವಾರ್ತೆ ಯಲ್ಲಾಪುರಇಂದಿನಿಂದ ಪರಾಭವ ಸಂವತ್ಸರ ಪ್ರಾರಂಭಗೊಂಡಿದೆ. ಗುರು ಅಧಿಪತಿಯಾಗಿದ್ದಾನೆ. ಗುರು ರಾಜನ ಸ್ಥಾನದಲ್ಲಿದ್ದಾನೆ. ದೇಶಕ್ಕೆ, ವಿಶ್ವಕ್ಕೆ ಒಳಿತಾಗಲು ಕಾರಣವಾಗುತ್ತವೆ. ದೇಶದಲ್ಲಿ ಗೋಸಂಪತ್ತು ಹೆಚ್ಚಾಗಬೇಕು. ಅಂತೆಯೂ ಮಳೆಯೂ ಹೆಚ್ಚಲಿದೆ. ಅದರಿಂದ ಕೃಷಿ, ಸಂಪತ್ತು ವೃದ್ಧಿಯಾಗಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಜ್ಯೋತಿರ್ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.
ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದ ಸಭಾಭವನದಲ್ಲಿ ೨೬ನೇ ಹಿಂದೂ ಯುಗಾದಿ ಉತ್ಸವದ ಮೆರವಣಿಗೆಯ ನಂತರ ಪಂಚಾಂಗ ಶ್ರವಣ ಮಾಡಿ, ಈ ವರ್ಷದ ಪಂಚಾಂಗದ ಫಲ ಪ್ರಸ್ತುತಪಡಿಸಿದರು.ಬುದ್ಧಿವಂತರಿಗೆ ಸಾಕಷ್ಟು ಅವಕಾಶ ತೆರೆದುಕೊಳ್ಳಲಿದೆ. ರಾಜ ಶ್ರೇಷ್ಟನಿದ್ದಾಗ ಮಾತ್ರ ಪ್ರಜೆಗಳಿಗೆ ಒಳಿತಾಗುತ್ತದೆ. ಸಜ್ಜನರು, ಯಜ್ಞಯಾಗಗಳು ಎಲ್ಲವೂ ನಡೆಯುವಂತಾಗುತ್ತದೆ. ಆದರೂ ಅಗ್ನಿಭಯ, ಯುದ್ಧಭೀತಿ, ಶನಿ-ಕುಜ ದೃಷ್ಟಿ ಇರುವುದರಿಂದ ನಡೆದರೂ ಕೆಲವು ದಿನಗಳಲ್ಲಿ ಅವು ನಿಲ್ಲುತ್ತದೆ. ಬುಧ ಮಂತ್ರಿಯಾಗಿರುವುದರಿಂದ ಅದು ಕೂಡ ಅನುಕೂಲವಾಗಲಿದೆ. ಇದರಿಂದ ಕೆಲವೆಡೆ ಅಲ್ಪಸ್ವಲ್ಪ ಮಳೆಯ ವ್ಯತ್ಯಾಸವಾದರೂ ನಿರೀಕ್ಷೆಯಂತೆ ಉತ್ತಮ ಮಳೆ ಬೀಳಲಿದೆ. ದೇಶ ವಿದೇಶಗಳಲ್ಲಿ ಮೈತ್ರಿ ಫಲಿಸುತ್ತದೆ. ಬೆಳ್ಳಿ, ಬಂಗಾರ ಸೇರಿದಂತೆ ಎಲ್ಲ ರೀತಿಯ ಲೋಹಗಳು ಮತ್ತು ಎಲ್ಲ ರೀತಿಯ ತೈಲ ದರ ಏರಲಿದೆ ಎಂದ ಅವರು, ಋಷಿಮುನಿಗಳು ನಮಗೆ ಗಣಿತ ರೀತ್ಯಾ ಪಂಚಾಂಗ ಕ್ರಮವನ್ನು ರೂಪಿಸಿಕೊಟ್ಟಿದ್ದಾರೆ. ಅದು ನಮ್ಮ ಭಾರತೀಯ ಪರಂಪರೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗುವ ಕಾರ್ಯ ಮಾಡಬೇಕಾಗಿದೆ ಎಂದರು.
ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಶಾನಭಾಗ, ಮಾರುತಿ ಮಂದಿರದ ಅರ್ಚಕ ನಾರಾಯಣ ಭಟ್ಟ ಮಾತನಾಡಿದರು.ಸ್ವರ್ಣವಲ್ಲೀ ಮಠದ ಮರಾಠಾ ಸಮಾಜದ ಸೀಮಾ ಪರಿಷತ್ ಅಧ್ಯಕ್ಷ ನಾರಾಯಣ ಮರಾಠಿ ಶುಭಹಾರೈಸಿದರು. ಪ್ರಸಾದಿನಿ ಚಿಕ್ಯಾನಮನೆ ಪ್ರಾರ್ಥಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಉತ್ಸವ ಸಮಿತಿಯ ಅಧ್ಯಕ್ಷ ವಿಶಾಲ ವಾಳಂಬಿ ಸ್ವಾಗತಿಸಿದರು. ಶಿಕ್ಷಕ ಚಂದ್ರಹಾಸ ನಾಯ್ಕ ವಂದಿಸಿದರು.