ಹಾನಗಲ್ಲ: ಬದುಕು ರೂಪಿಸುವ ಶಿಕ್ಷಣದ ಮೂಲಕ ಕೌಟುಂಬಿಕ ಸೌಖ್ಯಕ್ಕೆ ಆರ್ಥಿಕ ಸಬಲತೆ ನೀಡುವ ಸಂಕಲ್ಪ ಈಗ ಅತ್ಯವಶ್ಯವಾಗಿದ್ದು, ಇದಕ್ಕಾಗಿ ಪರಿವರ್ತನ ಕಲಿಕಾ ಕೇಂದ್ರ ಯುವ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ, ಉದ್ಯೋಗ ಮಾರ್ಗದರ್ಶನ ನೀಡುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್ನ ಪರಿವರ್ತನ ಕಲಿಕಾ ಕೇಂದ್ರ ಆಯೋಜಿಸಿದ್ದ ಆರಿ ವರ್ಕ್ ಮತ್ತು ಬ್ಯೂಟಿಷಿಯನ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.ಆರ್ಥಿಕ ಸಬಲತೆಗಾಗಿ ಪ್ರತಿ ವ್ಯಕ್ತಿ ದುಡಿಮೆಯನ್ನೇ ಅವಲಂಬಿಸಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಮನೆಯಲ್ಲಿ ಎಲ್ಲರೂ ದುಡಿಯುವ ಅನಿವಾರ್ಯತೆ ಕಂಡುಬರುತ್ತಿದೆ. ಹಳ್ಳಿಗಳಲ್ಲಿ ವ್ಯವಸಾಯ ಹೊರತುಪಡಿಸಿ ಉದ್ಯೋಗಾವಕಾಶ ಹುಡುಕಿಕೊಳ್ಳಬೇಕಾಗಿದೆ. ಆದ್ದರಿಂದಲೇ ಪರಿವರ್ತನ ಕಲಿಕಾ ಕೇಂದ್ರದ ಮೂಲಕ ಹೊಸ ಉದ್ಯೋಗಗಳಿಗೆ ತರಬೇತಿ ಹಾಗೂ ಮಾರ್ಗದರ್ಶನಕ್ಕೆ ಮುಂದಾಗಿದ್ದೇವೆ. ತರಬೇತಿ ಪಡೆದವರು ಅದರ ಪ್ರಯೋಜನ ಪಡೆಯಬೇಕು. ಬಡವರು ಆರ್ಥಿಕ ಸಬಲತೆ ಪಡೆಯಲು ಇದು ಹೆಚ್ಚು ಅನುಕೂಲಕರ ಎಂದರು.
ಅಧ್ಯಕ್ಷತೆ ವಹಿಸಿದ್ದ ಹ್ಯುಮ್ಯಾನಿಟಿ ಫೌಂಡೇಶನ್ ಅಧ್ಯಕ್ಷೆ ಸ್ವಾತಿ ಮಾಳಗಿ ಮಾತನಾಡಿ, ಹೆಣ್ಣುಮಕ್ಕಳು ಈಗ ಹೆಚ್ಚು ಉದ್ಯೋಗದತ್ತ ಮುನ್ನಡೆಯುತ್ತಿದ್ದಾರೆ. ಅವರ ಕೌಶಲ್ಯಾಭಿವೃದ್ಧಿ ನಮ್ಮ ಪ್ರಥಮ ಆದ್ಯತೆಯಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳು, ಪರೀಕ್ಷಾ ಸಿದ್ಧತೆಯ ತರಬೇತಿಗಳ ಜೊತೆ ಜೊತೆಗೆ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿ ಆರ್ಥಿಕ ಸಬಲತೆಯ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದರ ಸದುಪಯೋಗ ಪಡೆಯುವಲ್ಲಿ ಮಹಿಳೆಯರು ವಿಶೇಷ ಕಾಳಜಿ ವಹಿಸಬೇಕು ಎಂದರು.ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಆಶಯ ನುಡಿ ನುಡಿದರು. ಲೋಯಲಾ ವಿಕಾಸ ಕೇಂದ್ರದ ಸಹ ನಿರ್ದೇಶಕ ಜೈಸನ್ ಪಾಯಸ್ ಸಂವಿಧಾನ ಪೀಠಿಕೆ ಓದಿದರು. ಆರಿ ವರ್ಕ್, ಬ್ಯೂಟಿಷಿಯನ್ ತರಬೇತುದಾರರಾದ ಶಿಕ್ಷಕಿಯರಾದ ಪರ್ವಿನ್ ಹಾಗೂ ಜೈಶಿಕಾ ಪಾಲ್ಗೊಂಡಿದ್ದರು. ತರಬೇತಿ ಪಡೆದ ಸಿರಿ ಮತ್ತು ಪಿ.ಕೆ. ಸಾಹಿತ್ಯಾ ಅನಿಸಿಕೆ ಹಂಚಿಕೊಂಡರು. ಪವಿತ್ರಾ ಸಂಗಡಿಗರು ಪ್ರಾರ್ಥಿಸಿದರು. ಶುಭಲಕ್ಷ್ಮೀ ಕೋರಿ ಸ್ವಾಗತಿಸಿದರು. ವರ್ಷಿತಾ ನೆಗಳೂರ ನಿರೂಪಿಸಿದರು. ಲಕ್ಷ್ಮೀ ಅವ್ವಕ್ಕನವರ ವಂದಿಸಿದರು.