ಮಾದ್ಯಮಕ್ಕೆ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿಯಿದೆ: ಡಾ. ಪ್ರಭಾಕರ ಭಟ್

| Published : May 18 2024, 12:39 AM IST

ಮಾದ್ಯಮಕ್ಕೆ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿಯಿದೆ: ಡಾ. ಪ್ರಭಾಕರ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ವಿವೇಕ ಚೇತನ ೨೦೨೪ ಸ್ಪರ್ಧೆಯ ಸಮಗ್ರ ತಂಡ ಪ್ರಶಸ್ತಿಯನ್ನು ಮೂಡುಬಿದಿರೆ ಆಳ್ವಾಸ್ ಕಾಲೇಜು, ದ್ವಿತೀಯ ಪ್ರಶಸ್ತಿಯನ್ನು ಎಸ್‌ಡಿಎಂ ಕಾಲೇಜು ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಮಾಧ್ಯಮಗಳಿಗೆ ದೇಶದ ಎಲ್ಲ ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿಯಿದೆ. ಪತ್ರಕರ್ತರು ಯಾರ ಪರವಾಗಿಯೂ ನಿಲ್ಲದೆ, ಸತ್ಯದ ಪರ ಹಾಗೂ ರಾಷ್ಟ್ರದ ಪರ ನಿಲ್ಲಬೇಕು. ಸಮಾಜದಲ್ಲಿ ಕಂಡುಬರುವ ಒಳ್ಳೆತನವನ್ನು ಗಮನಿಸಿ ಅವುಗಳನ್ನು ಗುರುತಿಸುವ ಜವಾಬ್ದಾರಿ ಪತ್ರಕರ್ತರಿಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ)ದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಶುಕ್ರವಾರ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ‘ವಿವೇಕ ಚೇತನ- ೨೦೨೪’ ಫೆಸ್ಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಟ, ಹಿನ್ನೆಲೆ ಧ್ವನಿ ಕಲಾವಿದ ಬಡೆಕ್ಕಿಲ ಪ್ರದೀಪ್ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಯುವ ಜನರಿಗೆ ಅದಮ್ಯವಾದ ತಿಳುವಳಿಕೆ, ಬುದ್ಧಿವಂತಿಕೆ ಇರುತ್ತದೆ. ಅದನ್ನು ರಾಷ್ಟ್ರದ ಅಭಿವೃದ್ಧಿಗೆ ಬಳಸಬೇಕು. ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೊಸತನವನ್ನು ಹುಡುಕಿಕೊಂಡು ಹಾಗೂ ಮೈಗೂಡಿಸಿಕೊಂಡು ಬಾಳುವುದು ಬಹಳ ಮುಖ್ಯವಾಗಿದೆ. ಹೊಸ ಅಲೆಯೊಂದಿಗೆ ಹಳೆಯ ವಿಚಾರಗಳನ್ನು ಜೋಡಿಸಿಕೊಂಡು ಅದಕ್ಕೆ ನಾವು ಹೇಗೆ ಹೊಂದಿಕೊಳ್ಳುತ್ತೇವೆ ಎನ್ನುವುದು ಮಹತ್ತರವಾದ ಸಂಗತಿಯಾಗಿದ್ದು, ಬದುಕಿನಲ್ಲಿ ಕಹಿಯ ಸಂಗತಿಗಳು ಉಂಟಾದಾಗ ನಾವು ಕುಗ್ಗಿ ಹೋಗದೆ, ಅದನ್ನುಧೈರ್ಯದಿಂದ ಎದುರಿಸಿ ಮುಂದುವರಿಯಬೇಕು ಎಂದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ

ಮಂಡಳಿಯ ಕಾಲೇಜಿನ ಸಂಚಾಲಕ ಮುರಳಿ ಕೃಷ್ಣ ಕೆ.ಎನ್., ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ಪಿಜಿ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರೀಪ್ರಿಯಾ ಉಪಸ್ಥಿತರಿದ್ದರು. ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ. ಪ್ರಾಸ್ತಾವಿಕವಾಗಿ ಮಾನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್. ನಿಡ್ಪಳ್ಳಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಶರತ್ ಕೆ.ಎನ್. ವಂದಿಸಿದರು. ಹರಿಪ್ರಸಾದ್ ಈಶ್ವರಮಂಗಲ ಮತ್ತು ಚೈತ್ರಾ ಭಟ್ ನಿರ್ವಹಿಸಿದರು. ಆಳ್ವಾಸ್ ಕಾಲೇಜ್‌ಗೆ ಸಮಗ್ರ ಪ್ರಶಸ್ತಿ: ವಿವೇಕ ಚೇತನ ೨೦೨೪ ಸ್ಪರ್ಧೆಯ ಸಮಗ್ರ ತಂಡ ಪ್ರಶಸ್ತಿಯನ್ನು ಮೂಡುಬಿದಿರೆ ಆಳ್ವಾಸ್ ಕಾಲೇಜು, ದ್ವಿತೀಯ ಪ್ರಶಸ್ತಿಯನ್ನು ಎಸ್‌ಡಿಎಂ ಕಾಲೇಜು ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ವಿನೂತನ ಪಾಕ್ಷಿಕ ಹಾಗೂ ವಿಕಸನ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷವಾಗಿ ಸುಮಾರು ೨೫೦೦ಕ್ಕೂ ಅಧಿಕ ಹೆರಿಗೆಯನ್ನು ಮಾಡಿಸಿದ ಸೂಲಗಿತ್ತಿ ವೆಂಕಮ್ಮ ಮತ್ತು ಸಮಾಜ ಸೇವಕ, ಶ್ವಾನಪ್ರಿಯ ರಾಜೇಶ್ ಬನ್ನೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಭಾಗದಲ್ಲಿ ಸಾಧನೆ ಮಾಡಿದ ಶರತ್ ಕೆ.ಎನ್, ದೀಪ್ತಿ ಅಡ್ಡಂತಡ್ಕ, ಜೀವನ್ ಕಲ್ಲೇಗ, ಲಾವಣ್ಯ ಅವರನ್ನು ಪುರಸ್ಕರಿಸಲಾಯಿತು.