ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಮತ್ತು ಮೇ ಆಯುಷ್ ಎನ್ವಿರೋಟೆಕ್ ಪ್ರೈ.ಲಿ. ಸಹಯೋಗದೊಂದಿಗೆ ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ಜೀವ ವೈದ್ಯಕೀಯ ತ್ಯಾಜ್ಯವಸ್ತು ನಿರ್ವಹಣೆ ೨೦೧೬’ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಮಂಗಳೂರು ವಿಭಾಗದ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗ್ಡೆ ಉದ್ಘಾಟಿಸಿದರು ಪ್ರಾಂಶುಪಾಲೆ ಡಾ.ಮಮತಾ ಕೆ. ವಿ ಅಧ್ಯಕ್ಷತೆ ವಹಿಸಿದ್ದರು.
ಮಾ.ನಿ.ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರ, ಉಡುಪಿ ವಿಭಾಗದ ಮುಖ್ಯ ಅಧಿಕಾರಿ ಡಾ.ಕೆ.ಎಂ.ರಾಜು ಹಾಗೂ ಏ.ಎಫ್.ಐ. ಉಡುಪಿ ಕಾರ್ಯದರ್ಶಿ ಡಾ.ಸಂದೀಪ್ ಸನಿಲ್, ಆಯುಷ್ ಎನ್ವಿರೋಟೆಕ್ ನ ಮಾರುತಿ ಹೆಗ್ಡೆ ಇದ್ದರು.ಎಸ್.ಡಿ.ಎಂ. ಕಾಲೇಜಿನ ವಿವಿಧ ವೈದ್ಯಕೀಯ ವಿಭಾಗದ ಮುಖ್ಯಸ್ಥರು, ಅಧ್ಯಾಪಕ ವೃಂದದವರು, ಕಾಲೇಜಿನ ಸ್ನಾತಕೋತ್ತರ ವೈದ್ಯ ವಿಧ್ಯಾರ್ಥಿಗಳು, ಎಸ್. ಡಿ. ಎಂ.ಕಾಲೇಜು ಹಾಗೂ ಆಸ್ಪತ್ರೆಯ ವ್ಯವಸ್ಥಾಪಕರು, ಆಸ್ಪತ್ರೆಯ ಎಚ್. ಐ. ಸಿ. ವಿಭಾಗದ ಸದಸ್ಯರುಗಳು, ಆಸ್ಪತ್ರೆಯ ಶುಶ್ರೂಷಕಿಯರು, ಸಿಬ್ಬಂದಿ ವರ್ಗ, ಸ್ವಚ್ಛತಾ ಸಿಬ್ಬಂದಿ, ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಿದ ಆಯುಷ್ ವೈದ್ಯರು, ಆರೋಗ್ಯ ಇಲಾಖೆಯ ಸದಸ್ಯರು ಭಾಗವಹಿಸಿದ್ದರು.ಸಭಾ ಕಾರ್ಯಕ್ರಮದ ನಂತರ ಸುಮಾರು ಒಂದು ಗಂಟೆ ಕಾಲ ಜೆ.ಚಂದ್ರ ಅವರು, ಮುಖ್ಯವಾಗಿ ನಮ್ಮ ಪರಿಸರದ ಸುತ್ತಮುತ್ತಲಿನ ವಿವಿಧ ಆರೋಗ್ಯ ಸಂಸ್ಥೆಯ ವ್ಯವಸ್ಥೆಯಡಿ ಉತ್ಪತ್ತಿಯಾಗುವ ಜೀವ ತ್ಯಾಜ್ಯಗಳು, ಸೂಕ್ತ ಸಂಗ್ರಹಣಾ ಕ್ರಮ - ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳು ಮತ್ತು ನಿಯಮಗಳು , ಜೀವ ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯ ವೈಖರಿ, ಸಾಮಾಜಿಕ ಆರೋಗ್ಯದ ಮೇಲೆ ವೃತ್ತಿ ನಿರತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಜವಾಬ್ದಾರಿಗಳು, ಪರಿಸರ ನೈರ್ಮಲ್ಯ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.ಆಸ್ಪತ್ರೆಯ ತುರ್ತು ಘಟಕ ಮುಖ್ಯಸ್ಥ ಡಾ. ಪ್ರಸನ್ನ ಎನ್. ಮೊಗಸಾಲೆ ಸ್ವಾಗತಿಸಿದರು. ಡಾ.ಸದಾನಂದ ಭಟ್ ಕಾಪು ವಂದಿಸಿದರು. ಡಾ. ಶ್ರೇಯಶ್ರೀ ಸುವರ್ಣ ಸಂಯೋಜಿದರು. ಸಹಾಯಕ ವೈದ್ಯರಾದ ಪ್ರತಿಭಾ ಹಾಗೂ ಅಸೀರಾ ನಿರೂಪಿಸಿದರು.