-ಕವಿತಾಳದಲ್ಲಿ ಉಪ ತಹಸೀಲ್ದಾರ್‌ಗೆ ರಜಪೂತ ಸಮಾಜದ ಮುಖಂಡರು ಮನವಿ

----

ಕನ್ನಡಪ್ರಭ ವಾರ್ತೆ ಕವಿತಾಳ

ರಾಜ್ಯದಲ್ಲಿ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ರಜಪೂತ ಸಮುದಾಯದ ಪ್ರಗತಿಗಾಗಿ ರಜಪೂತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವಂತೆ ಸಮಾಜದ ಮುಖಂಡರು ಪಟ್ಟಣದಲ್ಲಿ ಉಪ ತಹಸೀಲ್ದಾರ್ ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಶಾಸಕರು ಮುಖ್ಯಮಂತ್ರಿಗಳಿಗೆ ಸೂಕ್ತ ಶಿಫಾರಸು ಮಾಡಬೇಕು, ಈಗಾಗಲೇ ಜಾರಿಯಲ್ಲಿರುವ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ವಯ ರಾಜ್ಯದಲ್ಲಿರುವ ರಜಪೂತ ಸಮುದಾಯದ ಕುಟುಂಬಗಳ ನಿಖರ ಸಂಖ್ಯೆ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ದತ್ತಾಂಶವನ್ನು ಸಂಗ್ರಹಿಸಲು ಸಂಬಂಧಪಟ್ಟ ತಾಲೂಕು ಮತ್ತು ಜಿಪಂಗಳ ಮೂಲಕ ಸಮೀಕ್ಷೆ ನಡೆಸಬೇಕು. ರಜಪೂತ ಸಮುದಾಯದ ಜನಸಂಖ್ಯೆ ಆಧರಿಸಿ ಅವರನ್ನು ಹಿಂದುಳಿದ ವರ್ಗಗಳ ಸೂಕ್ತ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಅಧಿಕೃತ ಆದೇಶ ಹೊರಡಿಸಬೇಕು. ಸಮುದಾಯದ ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ವೇಗ ನೀಡಲು ಪ್ರತ್ಯೇಕ ರಜಪೂತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕು ಎಂದು ರಜಪೂತ ಯುವ ಮಂಡಳಿ ಅಧ್ಯಕ್ಷ ಆನಂದ ಸಿಂಗ್ ಠಾಕೂರ್ ಅವರು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಮುಖಂಡರಾದ ಜಿ.ಯಮನ್ ಸಿಂಗ್, ಸಂಜೀವ್ ಸಿಂಗ್, ಕಿಶನ್ ಸಿಂಗ್, ವಿಜಯ್ ಸಿಂಗ್, ಟಿಪ್ಪು ಸಿಂಗ್, ಹೀರಾ ಲಾಲ್ ಸಿಂಗ್, ಮಹಾದೇವ ಸಿಂಗ್, ನಾಗೇಂದ್ರ ಸಿಂಗ್, ಉದಯ ಸಿಂಗ್, ಬಾಲಾಜಿ ಸಿಂಗ್, ವಿನಾಯಕ್ ಸಿಂಗ್, ಮಾನ್ ಸಿಂಗ್, ತುಳಜಾ ರಾಮ್ ಸಿಂಗ್, ಜಯಾ ಸಿಂಗ್, ಮೋಹನ್ ಸಿಂಗ್ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.

-----------------

12ಕೆಪಿಕೆವಿಟಿ01: ಕವಿತಾಳ ಪಟ್ಟಣದಲ್ಲಿ ಉಪ ತಹಸೀಲ್ದಾರ್ ರಿಗೆ ರಜಪೂತ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.