ಸಾರಾಂಶ
ಗದಗ: ದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿ ಕೇವಲ ಬಾಯಿ ಮಾತಿನ ಘೋಷಣೆಯಿಂದ ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕೇವಲ ಘೋಷಣೆಯಿಂದ ಹೊಟ್ಟೆ ತುಂಬುತ್ತದೆ ಎಂದು ತಿಳಿದುಕೊಂಡಿದ್ದಾರೆ. ಆ ಸಮುದಾಯಗಳಿಗೆ ಮೀಸಲು ಮಾಡಿದ ಹಣವನ್ನು ಸರಿಯಾಗಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾವೇರಿ ಗದಗ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು. ಅವರು ಗುರುವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಬಗ್ಗೆ ಬಹಳ ಮಾತನಾಡುತ್ತಾರೆ. ಅವರು ಎಸ್ಸಿ ಎಸ್ಟಿಗೆ ಮೀಸಲಿಟ್ಟ ಹಣವನ್ನು ಸರಿಯಾಗಿ ಕೊಟ್ಡರೆ ಸಾಕು. ಅದೇ ರೀತಿ ಹಿಂದುಳಿದವರ ಯೋಜನೆಗಳಿಗೆ ಟಾರ್ಗೆಟ್ ಕೊಟ್ಟಿಲ್ಲ. ಎಂಟು ಒಬಿಸಿ ನಿಗಮಗಳಿವೆ. ಅವುಗಳಿಗೆ ಹಣವನ್ನೇ ನೀಡಿಲ್ಲ. ಒಬಿಸಿಯನ್ನು ಉದ್ದಾರ ಮಾಡುತ್ತೇವೆ ಎನ್ನುತ್ತಾರೆ. ಇರುವ ಯೋಜನೆಗಳಿಗೆ ಹಣ ಕೊಡುವುದಿಲ್ಲ. ದಲಿತರ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಕಡಿತ ಮಾಡುತ್ತಾರೆ. ಇದರ ಬಗ್ಗೆ ಮುಖ್ಯಮಂತ್ರಿ ಚರ್ಚೆ ಮಾಡಲಿ, ಯಾರೋ ಅಧ್ಯಕ್ಷರಾಗುವುದರಿಂದ ಏನೂ ಆಗುವುದಿಲ್ಲ. ಆ ಜನಾಂಗ ಅಭಿವೃದ್ಧಿ ಆಗಬೇಕು. ಜನಾಂಗ ಅಭಿವೃದ್ಧಿ ಆಗಬೇಕೆಂದರೆ ಅವರಿಗೆ ಯೋಜನೆಗಳು ತಲುಪಬೇಕು. ಕೇವಲ ಬಾಯಿ ಮಾತಿನಿಂದ ಘೋಷಣೆಯಿಂದ ಏನೂ ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕೇವಲ ಘೋಷಣೆಯಿಂದ ಹೊಟ್ಟೆ ತುಂಬುತ್ತದೆ ಎಂದು ತಿಳಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ರಾಜ್ಯ ಬಿಜೆಪಿಯಲ್ಲಿ ಭಿನ್ನಮತವಿದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತಿಯ ಚಟುವಟಿಕೆ ಇಲ್ಲ. ಪಕ್ಷದ ವರಿಷ್ಠರಿಗೆ ಎಲ್ಲವೂ ಗೊತ್ತಿದೆ ಅವರು ತೀರ್ಮಾನ ಮಾಡುತ್ತಾರೆ ಎಂದರು. ಗದಗ ಜಿಲ್ಲೆಯಲ್ಲಿ ರೈತರಿಗೆ ಬೆಳೆ ಸಾಲ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಎಕರೆವಾರು ನೀಡುವ ಸಾಲದ ಪ್ರಮಾಣ ಹೆಚ್ಚಾಗಬೇಕು. ಸಹಕಾರಿ ಬ್ಯಾಂಕ್ ಗಳ ಮೂಲಕ ಸಾಲ ಪಡೆಯದೇ ಹೊರಗುಳಿದವರನ್ನು ಸಹಕಾರಿ ವ್ಯವಸ್ಥೆಯ ವ್ಯಾಪ್ತಿಗೆ ತಂದು ಸಾಲ ನೀಡಬೇಕು. ರೈತರಿಗೆ ಸಾಲ ಕೊಡುವಾಗ ಸಿಬಿಲ್ ಮಾನದಂಡ ಅನ್ವಯಿಸಬಾರದು ಎನ್ನುವುದು ನಮ್ಮ ಚಿಂತನೆ ಇದೆ. ಇದನ್ನು ರಾಷ್ಟ ಮಟ್ಟದಲ್ಲಿಯೇ ಜಾರಿ ಮಾಡಲು ಪ್ರಯತ್ನಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.