ಹಾಲು ತುಂಬಿದ್ದ ಟ್ಯಾಂಕರ್ ಲಾರಿಯೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದು, ಸುಮಾರು ೨೧ ಸಾವಿರ ಲೀಟರ್ ಹಾಲು ವ್ಯರ್ಥವಾಗಿರುವ ಘಟನೆ ಶಿರಾ ರಾ.ಹೆ. ೪೮ರ ಬೈಪಾಸ್ನಲ್ಲಿ ಗುರುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಶಿರಾ
ಹಾಲು ತುಂಬಿದ್ದ ಟ್ಯಾಂಕರ್ ಲಾರಿಯೊಂದು ನಿಯಂತ್ರಣ ತಪ್ಪಿ ಉರುಳಿಬಿದ್ದು, ಸುಮಾರು ೨೧ ಸಾವಿರ ಲೀಟರ್ ಹಾಲು ವ್ಯರ್ಥವಾಗಿರುವ ಘಟನೆ ಶಿರಾ ರಾ.ಹೆ. ೪೮ರ ಬೈಪಾಸ್ನಲ್ಲಿ ಗುರುವಾರ ನಡೆದಿದೆ. ಸುಮಾರು ೮ ಲಕ್ಷ ಮೌಲ್ಯದ ೨೧ ಸಾವಿರ ಲೀಟರ್ ಹಾಲನ್ನು ಟ್ಯಾಂಕರ್ನಲ್ಲಿ ತುಂಬಿ ತುಮಕೂರಿನಿಂದ ಮುಂಬೈಗೆ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಅದೃಷ್ಟವಷಾತ್ ಲಾರಿ ಚಾಲಕ ಮತ್ತು ಕ್ಲೀನರ್ಗೆ ಯಾವುದೇ ಪ್ರಾಣಾಪಾಯವಾಗಿಲ್ಲ.ಸ್ಥಳಕ್ಕೆ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಶಿರಾ ಉಪ ವಿಭಾಗದ ವ್ಯವಸ್ಥಾಪಕ ಗಿರೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಎಸ್.ಆರ್.ಗೌಡ ಅವರು ತುಮಕೂರು ಹಾಲು ಒಕ್ಕೂಟದಿಂದ ಮುಂಬೈಗೆ ಹಾಲನ್ನು ಸರಬರಾಜು ಮಾಡಿ ಮಾರಾಟ ಮಾಡಲಾಗುತ್ತಿದ್ದು, ಹಾಲನ್ನು ಸಂಸ್ಕರಣೆ ಮಾಡಲು ಮುಂಬೈಗೆ ಕಳುಹಿಸಲಾಗುತ್ತಿದೆ. ಶಿರಾ ಬಳಿ ಹಾಲನ್ನು ಸಂಸ್ಕರಿಸಲು ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ೪ ಎಕರೆ ಜಮೀನನ್ನು ಮಂಜೂರು ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದೇ ಸ್ಥಳದಲ್ಲಿ ಹಾಲಿ ಸಂಸ್ಕರಣಾ ಘಟನ ಸ್ಥಾಪಿಸಿದರೆ ಸಮಯವೂ ಉಳಿಯುತ್ತದೆ, ಹಾಲಿನ ಗುಣಮಟ್ಟವೂ ಉತ್ತಮವಾಗಿರುತ್ತದೆ. ಮತ್ತು ಸಾಗಾಟದ ವೆಚ್ಚವು ಕಡಿಮೆಯಾಗುತ್ತದೆ. ಈ ಬಗ್ಗೆ ಸರಕಾರವು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಹಾಲನ್ನು ತುಂಬಿಸಿಕೊಳ್ಳಲು ಮುಗಿಬಿದ್ದ ಜನ: ಹಾಲಿನ ಲಾರಿ ತುಮಕೂರು ಕಡೆಯಿಂದ ಮುಂಬೈಗೆ ತೆರಳಲು ಶಿರಾ ಬೈಪಾಸ್ನಲ್ಲಿ ಸಂಚರಿಸುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯಲ್ಲಿ ಉರುಳಿಬಿದ್ದಿದ್ದು, ಲಾರಿ ಪಲ್ಟಿಯಾಗುತ್ತಿದ್ದಂತೆ ಅದರಲ್ಲಿದ್ದ ಸಾವಿರಾರು ಲೀಟರ್ ಹಾಲು ರಸ್ತೆಯುದ್ದಕ್ಕೂ ಹರಿದಿದೆ. ಟ್ಯಾಂಕರ್ ಪಲ್ಟಿಯಾದ ವಿಷಯ ತಿಳಿದ ಜನರು ಪ್ಲಾಸ್ಟಿಕ್ ಬಾಟಲಿ ಹಾಗೂ ಕ್ಯಾನ್ಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಚೆಲ್ಲುತ್ತಿದ್ದ ಹಾಲನ್ನು ತುಂಬಿಸಿಕೊಳ್ಳಲು ಮುಗಿಬಿದ್ದಿರು. ಇದರಿಂದ ಹೆದ್ದಾರಿಯಲ್ಲಿ ಕೆಲಕಾಲ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.