ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೂಸಿನ ಮನೆ ನರೇಗಾದಡಿ ಕೂಲಿ ಕೆಲಸ ಮಾಡುವ ಕೂಲಿಕಾರರ ಪಾಲಿಗೆ ವರದಾನವಾಗಿದೆ ಎಂದು ತಾಪಂ ಇಒ ಎಚ್.ಜಿ.ಶ್ರೀನಿವಾಸ್ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಕೂಸಿನ ಮನೆ ಮಕ್ಕಳನ್ನು (ಕೇರ್ ಟೇಕರ್ಸ್ ) ಆರೈಕೆ ಮಾಡುವವರಿಗೆ ಎರಡನೇ ಹಂತದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಕೂಸಿನ ಮನೆಗೆ ಬರುವ ಮಕ್ಕಳನ್ನು ಆರೈಕೆ ಮಾಡುವಾಗ ಯಾವುದೇ ಭೇದಭಾವ ಮಾಡದೇ ಒಂದೇ ತಾಯಿ ಮಕ್ಕಳೆಂದು ನೋಡಿಕೊಳ್ಳುವ ಜವಾಬ್ದಾರಿಯು ಕೂಸಿನ ಮನೆ ಆರೈಕೆದಾರರ ಮೇಲಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ಮಕ್ಕಳ ಪೌಷ್ಟಿಕ, ಬೌದ್ಧಿಕತೆ, ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಯನ್ನು ನೋಡಿಕೊಳ್ಳುವುದು ಆರೈಕೆದಾರರ ಮೇಲಿದೆ ಎಂದರು.ತರಬೇತಿಯಲ್ಲಿ ಎಲ್ಲರು ಅತ್ಯಂತ ಉತ್ಸಹದಿಂದ ಪಾಲ್ಗೊಂಡು ತರಬೇತುದಾರರು ನೀಡುವ ಎಲ್ಲಾ ಜ್ಞಾನವನ್ನು ಪಡೆದುಕೊಂಡು ಮಕ್ಕಳ ಲಾಲನೆ-ಪಾಲನೆ ಉತ್ತಮವಾಗಿ ಮಾಡಬೇಕು. ಆರೈಕೆದಾರರಿಗೆ ತಾಯಿಯ ವಾತ್ಸಲ್ಯ ಮುಖ್ಯವಾಗಿರಬೇಕು ಎಂದರು.
ಇದೇ ವೇಳೆ ತರಬೇತುದಾರರಾದ ಅಂಗನವಾಡಿ ಮೇಲ್ವಿಚಾರಕಿ ಮಂಜುಳ, ಶೈಲಜಾ, ಕಾರ್ಯದರ್ಶಿಗಳಾದ ಸುಹಾಸ್, ತಾಲೂಕು ಐಇಸಿ ಸಂಯೋಜಕ ಸುನಿಲ್ ಕುಮಾರ್. ಎಚ್, ವಿಕೇಂದ್ರೀಕೃತ ತರಬೇತುದಾರ ಶಿವಕಾಳಯ್ಯ, ಚೇತನ್, ಕೇರ್ ಟೇಕರ್ ಹಾಗೂ ತಾಪಂ ಸಿಬ್ಬಂದಿ ಹಾಜರಿದ್ದರು.ನಾಳೆ ಸಾರ್ವಜನಿಕರಿಗೆ ಮ್ಯಾರಥಾನ್ ಓಟ ಸ್ಪರ್ಧೆ
ಮಂಡ್ಯ:ತಾಲೂಕಿನ ಯಲಿಯೂರು ಸರ್ಕಲ್ ಸಮೀಪದ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ವಿದ್ಯಾ ಸಂಸ್ಥೆಯಲ್ಲಿ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬದ ಅಂಗವಾಗಿ ಜ.5ರಂದು ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಎನ್ಸಿಸಿ ಸಹಕಾರದೊಂದಿಗೆ ಸಾರ್ವಜನಿಕರಿಗೆ ಮ್ಯಾರಥಾನ್ ಓಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಮಹಿಳಾ, ಬಾಲಕಿಯರಿಗೆ ಮತ್ತು ಪುರುಷರು, ಬಾಲಕರುಗಳಿಗೆ ತಲಾ 7 ನಗದು ಬಹುಮಾನ, ಕಿರಿಯ ಮಕ್ಕಳಿಗಾಗಿ 10 ವೈಯಕ್ತಿಕ ಬಹುಮಾನ ಹಾಗೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಿತರಿಗೆ ಟ್ರೋಫಿ ನೀಡಲಾಗುವುದು.ಬಹುಮಾನ ವಿಜೇತರುಗಳಿಗೆ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಎಂ.ಜಗದೀಶ್ ಹಾಗೂ ಕಾರ್ಯದರ್ಶಿ ಎಚ್.ಎಸ್. ಚುಂಚೇಗೌಡರು ಬಹುಮಾನ ವಿತರಣೆ ಮಾಡಲಿದ್ದಾರೆ.
ಮಂಡ್ಯವಲ್ಲದೇ ಅಕ್ಕಪಕ್ಕದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಹೆಸರು ಮಾಡುತ್ತಿರುವುದನ್ನು ಸಂಸ್ಥೆಯು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೇ ಶೈಕ್ಷಣೇತರ- ಸಾಂಸ್ಕೃತಿಕ, ಕ್ರೀಡಾ ಹಾಗೂ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸುತ್ತಿದೆ ಎಂದು ಪ್ರಾಂಶುಪಾಲ ಡಾ.ರಾಮಲಿಂಗಯ್ಯ ತಿಳಿಸಿದ್ದಾರೆ.