ಸಾರಾಂಶ
ಮಹದಾಯಿ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿ, ಒತ್ತಡ ಹಾಕಿ ಈ ಯೋಜನೆಯನ್ನು ಜಾರಿ ಮಾಡಿಸಬೇಕು ಎಂದು ರೈತರು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ನರಗುಂದ
ಹಿಂದೆ ಹಲವಾರು ಬಾರಿ ಮಹದಾಯಿ ಹೋರಾಟ ನಡೆದ ಸಂದರ್ಭದಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಹಾಗಾಗಿ, ಈ ಯೋಜನೆ ಜಾರಿ ಮಾಡಲು ಪ್ರಧಾನಿ ಮೋದಿ ಅವರಿಗೆ ಒತ್ತಡ ಹಾಕಬೇಕು ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಭಸಪ್ಪ ಹೂಗಾರ ಆಗ್ರಹಿಸಿದರು.3236ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದರು.
ಕುಡಿಯುವ ನೀರಿಗಾಗಿ ಉತ್ತರ ಕರ್ನಾಟಕ ಭಾಗದ ರೈತರು ಕಳೆದ 9 ವರ್ಷದಿಂದ ಬಂಡಾಯ ನೆಲ ನರಗುಂದದಲ್ಲಿ ಹೋರಾಟ ಮಾಡಿದರುೂ ಸರ್ಕಾರಗಳು ಈ ಯೋಜನೆ ಜಾರಿ ಮಾಡದೇ ಅನ್ನದಾತರಿಗೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.ರೈತರ ಕಷ್ಟ-ಸುಖಗಳ ಬಗ್ಗೆ ಸದಾ ಚಿಂತಿಸುವ ರೈತ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಈ ಬಾರಿ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದು, ಕರ್ನಾಟಕ ರೈತರಿಗೆ ಹರ್ಷ ತಂದಿದೆ. ಮಹದಾಯಿ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿ, ಒತ್ತಡ ಹಾಕಿ ಈ ಯೋಜನೆಯನ್ನು ಜಾರಿ ಮಾಡಿಸಬೇಕು ಎಂದು ಹೇಳಿದರು.
ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ರಾಘವೇಂದ್ರ ಗುಜಮಾಗಡಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಸೋಮಲಿಂಗಪ್ಪ ಆಯಿಟ್ಟಿ, ಮಲ್ಲೇಶ ಅಣ್ಣಿಗೇರಿ, ಅರ್ಜುನ ಮಾನೆ, ಯಲ್ಲಪ್ಪ ಚಲವಣ್ಣವರ, ಶಂಕ್ರಪ್ಪ ಜಾಧವ, ಶಿವಪ್ಪ ಸಾತಣ್ಣವರ, ಅನಸವ್ವ ಶಿಂದೆ, ನಾಗರತ್ನಾ ಸವಳಭಾವಿ, ವಾಸು ಚವಾಣ, ವಿಜಯಕುಮಾರ ಹೂಗಾರ, ಸೇರಿದಂತೆ ಮುಂತಾದವರು ಇದ್ದರು.