ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ
ಹೊಸನಗರ ಕ್ಷೇತ್ರದ ಮರುಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಏನೆಲ್ಲಾ ಕೆಲಸ ಆಗಬೇಕೋ ಅದನ್ನು ಪ್ರಮಾಣಿಕವಾಗಿ ಮಾಡಿಸುವ ಹೊಣೆ ಹೊರುತ್ತೇನೆ. ಆ ಮೂಲಕ ಕ್ಷೇತ್ರದ ಜನತೆಗೆ ನ್ಯಾಯ ಕಲ್ಪಿಸಲು ನಾನು ಶತಾಯ ಗತಾಯ ಪ್ರಯತ್ನಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಭರವಸೆ ನೀಡಿದರು.ಇಲ್ಲಿನ ಸಾಗರ ರಸ್ತೆಯಲ್ಲಿನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೊಸನಗರ ಕ್ಷೇತ್ರ ಉಳಿಸಿ ಹೋರಾಟದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾನೂನಾತ್ಮಕವಾಗಿ ಸಂಸದ ಬಿ.ವೈ.ರಾಘವೇಂದ್ರರವರಿಗೆ ಎಲ್ಲ ಬಗೆಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ನಾಡಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಸರ್ವಸ್ವವನ್ನು ಕಳೆದುಕೊಂಡ ಹೊಸನಗರ ವಿಧಾನಸಭಾ ಕ್ಷೇತ್ರ ಸ್ಥಾನಮಾನ ಸಿಗಬೇಕಿದೆ. ಪಕ್ಷಾತೀತ ಹೋರಾಟದ ಮೂಲಕ ಜನಸಾಮಾನ್ಯರಿಗೆ ನ್ಯಾಯ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಹೊಸನಗರ ಕ್ಷೇತ್ರ ಮರು ಹುಟ್ಟು ಪಡೆಯುವ ಮೂಲಕ ಮಲೆನಾಡಿನ ಹಿಂದಿನ ಗತ ವೈಭವ ಮರುಕಳಿಸಲಿ ಸಂಸತ್ತಿನಲ್ಲಿ ಕ್ಷೇತ್ರ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಕುರಿತು ವಿಶೇಷ ಅಧಿವೇಶನ ನಡೆಯಲಿದೆ. ಇದು ಹೊಸನಗರ ಕ್ಷೇತ್ರಕ್ಕೂ ಪ್ರಾಸ್ತಾಪಿಸಲು ಸುಸಂದರ್ಭವಾಗಲಿದೆ ಎಂದು ತಿಳಿಸಿದರು.
ಹೊಂಬುಜ ಜೈನ ಮಠದ ಜಗದ್ಗುರು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸಿದರು.
ನಿಟ್ಟೂರು ನಾರಾಯಣಗುರು ಸಂಸ್ಥಾನಮಠದ ಪೀಠಾಧ್ಯಕ್ಷರಾದ ರೇಣುಕಾನಂದ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮಠದ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಜುಮ್ಮಾ ಮಸೀದಿ ಧರ್ಮಗುರು ಮುನೀರ್ ಸಖಾಫಿ, ಮಾಜಿ ಶಾಸಕ ಬಿ.ಸ್ವಾಮಿರಾವ್, ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಸುರೇಶ್ ಸ್ವಾಮಿರಾವ್, ಶ್ವೇತಾ, ಆರ್.ಎ.ಚಾಬುಸಾಬ್, ಎನ್.ವರ್ತಶ್, ಎನ್.ಚಂದ್ರೇಶ್, ಎನ್.ಆರ್.ದೇವಾನಂದ್ ಇನ್ನಿತರರು ಹಾಜರಿದ್ದರು.