ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ವಿವಿಧೆಡೆ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ಶೋಭಾ ಅವರ ಮನೆ ಹಾಗೂ ಅವರಿಗೆ ಸೇರಿದ ಶಿಕಾರಿಪುರ ಮತ್ತು ಸಾಗರದಲ್ಲೂ ದಾಳಿ ನಡೆದಿದೆ. ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿನ ಮನೆ ಮತ್ತು ತರಲಘಟ್ಟ ಬಳಿಯ 4 ಎಕರೆ ತೋಟ ಹಾಗೂ ಫಾರ್ಮ್‌ಹೌಸ್ ಮತ್ತು ಅವರ ಒಡೆತನದ ಸಾಗರ ತಾಲೂಕಿನ ಆಚಾಪುರದ ಬಳಿಯ ಶಾಲೆ, ನವುಲೆ ಬಳಿಯ ಮನೆಯಲ್ಲೂ ಹಾಗೂ ಕೆಇಬಿ ವೃತ್ತದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿಯ ಮೇಲೂ ದಾಳಿ ಮಾಡಿ ಆದಾಯ ಮೀರಿದ ಆಸ್ತಿಯ ಬಗ್ಗೆ ಕಡತ ಪರಿಶೀಲನೆ ಮಾಡುತ್ತಿದ್ದಾರೆ. ಬಿಸಿಎಂ ಇಲಾಖೆಯ ವ್ಯವಸ್ಥಾಪಕ ರಾಘವೇಂದ್ರ ಅವರ ಚಾಲುಕ್ಯ ನಗರದಲ್ಲಿರುವ ಮನೆಯ ಮೇಲೆ ಕೂಡ ದಾಳಿಮಾಡಿ ದಾಖಲೆ ಪರಿಶೀಲಿಸಲಾಗಿದೆ.

ದಾವಣಗೆರೆಯ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಶಿವಮೊಗ್ಗ, ಹಾವೇರಿ, ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.