ಸಾರಾಂಶ
ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ಯೋಜನೆ ಆರಂಭಿಸಲು, ಮೈಸೂರು-ಚಾಮರಾಜನಗರ ವಿಭಾಗದ ರೈಲ್ವೇ ವಿದ್ಯುದ್ದೀಕರಣ ಕಾರ್ಯಕ್ಕೆ ಎನ್.ಒ.ಸಿ ಮಂಜೂರು ಮಾಡಿಸಿಕೊಡಲು ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಸಂಸದ ಸುನಿಲ್ ಬೋಸ್ ಮನವಿ ಕನ್ನಡಪ್ರಭ ವಾರ್ತೆ,ಚಾಮರಾಜನಗರ
ಲೋಕಸಭಾ ಸದಸ್ಯ ಸುನಿಲ್ ಬೋಸ್ ಅವರು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರನ್ನು ಇಂದು ಭೇಟಿ ಮಾಡಿ ನೆನೆಗುದಿಗೆ ಬಿದ್ದಿರುವ ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗ ಯೋಜನೆಯನ್ನು ಆರಂಭಿಸಲು ಮತ್ತು ಮೈಸೂರು-ಚಾಮರಾಜನಗರ ನಡುವಿನ ರೈಲ್ವೆ ವಿದ್ಯುದ್ಧಿಕರಣ ಕಾರ್ಯಕ್ಕೆ ಎನ್.ಒ.ಸಿ ದೊರಕಿಸಿಕೊಡಲು ಮನವಿ ಮಾಡಿದ್ದಾರೆ. ಕರ್ನಾಟಕದಲ್ಲಿ ೧೪೨ ಕಿ.ಮೀ. ಹಾದುಹೋಗುವ ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಮೂಲತಃ ಬೆಂಗಳೂರು-ಸತ್ಯಮಂಗಲದ (೨೬೦ ಕಿ.ಮೀ) ನಡುವಿನ ಈ ಯೋಜನೆಯನ್ನು ೧೯೯೭-೯೮ ರಲ್ಲಿ ಮಂಜೂರು ಮಾಡಲಾಗಿತ್ತು. ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಯೋಜನೆ ಸಂಬಂಧ ೨೦೧೩-೧೪ರಲ್ಲಿ ಸರ್ವೇ ನಡೆಸಲು ತಮಿಳುನಾಡು ಸರಕಾರ ಹಾಗೂ ಕೇಂದ್ರ ಅಧಿಕಾರ ಸಮಿತಿಯು ಅನುಮತಿ ನೀಡಲಿಲ್ಲ. ಕೆಂಗೇರಿ-ಚಾಮರಾಜನಗರ ನಡುವಿನ ಯೋಜನೆಗೆ ಅರಣ್ಯ ಭೂಮಿ ವ್ಯಾಪ್ತಿ ಆರಂಭದಲ್ಲಿ ಬಂದಿರಲಿಲ್ಲ. ಮೊದಲಿಗೆ ಕೆಂಗೇರಿಯಿಂದ ಯೋಜನೆ ಆರಂಭಿಸಲು ಯೋಜಿಸಲಾಗಿತ್ತು. ಆದರೆ ಅಂತಿಮ ಸ್ಥಳ ಸರ್ವೇಯಲ್ಲಿ ಅರಣ್ಯ ಭೂಮಿ ಇರುವುದನ್ನು ಗಮನಿಸಲಾಯಿತು. ಆದ್ದರಿಂದ ಅರಣ್ಯ ಭೂಮಿಯನ್ನು ತಪ್ಪಿಸಲು ಟೇಕ್-ಆಫ್ ನಿಲ್ದಾಣವನ್ನು ಹೆಜ್ಜಾಲಕ್ಕೆ ಸ್ಥಳಾಂತರಿಸಲಾಗಿದೆ.ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಯಳಂದೂರು ಮತ್ತು ಚಾಮರಾಜನಗರ ಮೂಲಕ ಈ ಜೋಡಣೆ ಹಾದು ಹೋಗಿತ್ತು. ೧೭೨೩.೧೫ ಎಕರೆ ಭೂಮಿ ಸ್ವಾಧೀನಕ್ಕಾಗಿ (೧೦೦% ಕಂದಾಯ ಖಾಸಗಿ ಭೂಮಿ, ಯಾವುದೇ ಅರಣ್ಯ ಭೂಮಿ ಇಲ್ಲ) ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಈ ವಿಷಯದಲ್ಲಿ ತಮ್ಮ ಸಹಕಾರ ನೀಡಬೇಕೆಂದು ಸಂಸದರಾದ ಸುನಿಲ್ ಬೋಸ್ ಅವರು ರೈಲ್ವೆ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಮೈಸೂರು-ಚಾಮರಾಜನಗರ ವಿಭಾಗದ ರೈಲ್ವೇ ವಿದ್ಯುದ್ದೀಕರಣ ಕಾರ್ಯಕ್ಕೆ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನಿರಾಪೇಕ್ಷಣಾ ಪತ್ರ (ಎನ್.ಒ.ಸಿ) ಮಂಜೂರು ಮಾಡಲು ಸಹಕರಿಸುವಂತೆ ರೈಲ್ವೆ ಸಚಿವರಾದ ಸೋಮಣ್ಣ ಅವರಿಗೆ ಸಂಸದ ಸುನಿಲ್ ಬೋಸ್ ಅವರು ಮನವಿ ಮಾಡಿದ್ದಾರೆ. ಮೈಸೂರು-ಚಾಮರಾಜನಗರ ರೈಲ್ವೇ ವಿದ್ಯುದ್ದೀಕರಣ ಕಾರ್ಯವನ್ನು ಮೈಸೂರಿನ ನೈಋತ್ಯ ರೈಲ್ವೆಯ ವಿಭಾಗದ ಕೋರ್ಗೆ ನಿಯೋಜಿಸಲಾಗಿದೆ. ಸಿಪಿಡಿ/ಆರ್.ಇ/ಎಸ್.ಬಿ.ಸಿ ಪ್ರಾಜೆಕ್ಟ್ ಆಫೀಸ್ ಅಡಿಯಲ್ಲಿ ರೈಲ್ವೇ ವಿದ್ಯುದ್ದೀಕರಣ ಘಟಕದಿಂದ ಈ ಕೆಲಸವನ್ನು ಕಾರ್ಯಗತಗೊಳಿಸಲಾಗುತ್ತಿದೆ. ಅಶೋಕಪುರಂನಿಂದ ಕಡಕೋಳದ ನಡುವಿನ ೧.೫ ಕಿ.ಮೀ. ಹೊರತುಪಡಿಸಿ ವಿದ್ಯುದ್ದೀಕರಣ ಕಾಮಗಾರಿಯ ೨೦೨೨ರ ಅಕ್ಟೋಬರ್ನಲ್ಲಿ ಕೆಲಸ ಪೂರ್ಣಗೊಂಡಿದೆ.
ಅಶೋಕಪುರಂನಿಂದ ಕಡಕೋಳದ ನಡುವೆ ೧.೫ ಕಿ.ಮೀ. ವಿದ್ಯುದ್ದೀಕರಣ ಕಾಮಗಾರಿಯ ಭಾಗವಾಗಿ ಅಶೋಕಪುರಂನಿಂದ ಕಡಕೋಳದ ನಡುವೆ ಟ್ರಾಕ್ಷನ್ ಮಾಸ್ಟ್ಗಳನ್ನು ನಿರ್ಮಿಸಲಾಯಿತು. ಸ್ಥಳ ಸಂಖ್ಯೆ ೧೦/೪-೧೦/೮ ರಲ್ಲಿ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರು ಓವರ್ಹೆಡ್ ತೆಗೆದುಹಾಕಲು ರೈಲ್ವೆಗೆ ಸೂಚಿಸಿದರು. ಉಪಕರಣ (ಔಊಇ) ಮಾಸ್ಟ್ಗಳನ್ನು ೫ ಸ್ಥಳಗಳಲ್ಲಿ ನಿರ್ಮಿಸಲು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನಿರಾಪೇಕ್ಷಣಾ ಪತ್ರ (ಎನ್.ಒ.ಸಿ) ನಿರೀಕ್ಷಿಸಲಾಗಿದೆ.ಅದರನ್ವಯ ನಿರಾಪೇಕ್ಷಣಾ ಪತ್ರಕ್ಕಾಗಿ (ಎನ್.ಒ.ಸಿ) ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ (ಎ.ಎ.ಐ) ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ದಿನಾಂಕ ೧೪.೦೭.೨೦೨೧, ೦೬.೦೮.೨೦೨೧ ಮತ್ತು ೧೩.೦೮.೨೦೨೧ರಂದು ಕೋರಲಾಗಿದೆ. ರೈಲ್ವೆಯು ನೆಲಮಟ್ಟದಿಂದ ಶೂನ್ಯ ಎತ್ತರಕ್ಕಾಗಿ ಎನ್ಒಸಿ ಸ್ವೀಕರಿಸಿದೆ. ಅಂದರೆ ಇದರ ಅರ್ಥವು ಒ.ಎಚ್.ಇ ಮಾಸ್ಟ್ಗಳನ್ನು ನಿರ್ಮಿಸಲು ಅನುಮತಿಸಲಾಗುವುದಿಲ್ಲ ಎಂದಾಗಿದೆ. ೧.೫ ಕಿಮೀ ವ್ಯಾಪ್ತಿಯ ವಿದ್ಯುದ್ದೀಕರಣಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಎನ್ಒಸಿ ನೀಡಿದ್ದಲ್ಲಿ ಕೋಚಿಂಗ್ ಮತ್ತು ಸರಕು ರೈಲುಗಳ ಚಲನಶೀಲತೆಯನ್ನು ಹೆಚ್ಚಿಸಬಹುದಾಗಿದೆ. ಇದಕ್ಕಾಗಿ ತಾವು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ವಿದ್ಯುದ್ದೀಕರಣನ ಕಾರ್ಯಕ್ಕೆ ಎನ್.ಒ.ಸಿ ಮಂಜೂರು ಮಾಡಿಕೊಡಲು ತಮ್ಮ ಸಹಕಾರ ನೀಡಿ ಕಾರ್ಯಗತಗೊಳಿಸಿಕೊಡಬೇಕೆಂದು ರೈಲ್ವೆ ಸಚಿವ ಸೋಮಣ್ಣ ಅವರಿಗೆ ಸಂಸದ ಸುನಿಲ್ ಬೋಸ್ ಅವರು ಮನವಿ ಮಾಡಿದ್ದಾರೆ.
-----------18ಸಿಎಚ್ಎನ್25
ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ಯೋಜನೆ ಆರಂಭಿಸಲು, ಮೈಸೂರು-ಚಾಮರಾಜನಗರ ವಿಭಾಗದ ರೈಲ್ವೇ ವಿದ್ಯುದ್ದೀಕರಣ ಕಾರ್ಯಕ್ಕೆ ಎನ್.ಒ.ಸಿ ಮಂಜೂರು ಮಾಡಿಸಿಕೊಡಲು ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಸಂಸದ ಸುನಿಲ್ ಬೋಸ್ ಮನವಿ