ಸಾರಾಂಶ
ಸೀತಾಳಯ್ಯನಗಿರಿ, ಬಾಬಾಬುಡನ್ ಗಿರಿ ಪ್ರದೇಶದಲ್ಲಿ ಪರಿಶೀಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ ಪೂರ್ವ ಮುಂಗಾರಿನಲ್ಲಿ ಬಿದ್ದ ಭಾರೀ ಮಳೆಗೆ ಜಿಲ್ಲೆಯಲ್ಲಿ ಹಾನಿಯಾಗಿರುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೀತಾಳಯ್ಯನಗಿರಿ, ಬಾಬಾಬುಡನ್ಗಿರಿ ಮಾಲ್ ಸೇರಿದಂತೆ ಗಿರಿ ಪ್ರದೇಶಕ್ಕೆ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶನಿವಾರ ಭೇಟಿ ನೀಡಿ ರಸ್ತೆಗಳನ್ನು ಪರಿಶೀಲಿಸಿದರು.
ಸಚಿವರು ಕಳೆದ ಮೇ 30 ರಂದು ಮೂಡಿಗೆರೆ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿ ಯಾಗಿರುವ ಪ್ರದೇಶಗಳನ್ನು ವೀಕ್ಷಿಸಿ ಅದೇ ದಿನ ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಎರಡನೇ ಸುತ್ತಿನಲ್ಲಿ ಸಚಿವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಳೆದ ವಾರದ ಹಿಂದೆ ಸುರಿದ ಮಳೆಯಿಂದ ಗಿರಿ ಪ್ರದೇಶದಲ್ಲಿ ತೇವಾಂಶ ಹೆಚ್ಚಳದಿಂದ ಹಲವೆಡೆ ರಸ್ತೆಗಳಲ್ಲಿ ಭೂ ಕುಸಿತ ಉಂಟಾಗಿದೆ. ಪೂರ್ವ ಮುಂಗಾರಿಗೂ ಮೊದಲು ನಿರ್ಮಾಣ ಮಾಡಲಾಗಿರುವ ರಸ್ತೆ ಕಾಮಗಾರಿಗೆ ಹಾನಿ ಸಂಭವಿಸಿದೆ. ಈ ಎಲ್ಲಾ ಅಂಶಗಳನ್ನು ಅಧಿಕಾರಿಗಳು ಸಚಿವ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತಂದರು.
ಸಚಿವರು ಗಿರಿ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ಮಾಜಿ ಸಂಸದ ಚಂದ್ರಪ್ಪ, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.--- ಬಾಕ್ಸ್ ---ಚಿಕ್ಕಮಗಳೂರು ತಾಲೂಕಿನಲ್ಲಿ ಹೆಚ್ಚು ಹಾನಿಪೂರ್ವ ಮುಂಗಾರಿನಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆಗಳ ಹಾನಿಯಲ್ಲಿ ಚಿಕ್ಕಮಗಳೂರು ತಾಲೂಕು ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 81.59 ಕಿ.ಮೀ. ರಾಜ್ಯ ಹೆದ್ದಾರಿ ರಸ್ತೆಗಳಿಗೆ ಹಾನಿ ಸಂಭವಿಸಿದ್ದು, ಅದರಲ್ಲಿ ಚಿಕ್ಕಮ ಗಳೂರು ತಾಲೂಕಿನಲ್ಲಿ 80.09 ಕಿ.ಮೀ. ರಸ್ತೆಗಳಿಗೆ ಹಾನಿಯಾಗಿದೆ. 6.04 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು, 7 ಸೇತುವೆ ಗಳಿಗೆ ಹಾನಿಯಾಗಿದೆ.----- ಬಾಕ್ಸ್-------ವರದಿ ಬಂದ ಮೇಲೆ ಇನ್ನೊಂದು ಹಂತದ ಕ್ರಮ: ಸತೀಶ್ ಜಾರಕಿಹೊಳಿಚಿಕ್ಕಮಗಳೂರು: ಆರ್ಸಿಬಿ ಅಭಿಮಾನಿಗಳ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರು ಅಂತ ವರದಿ ಬಂದ ಮೇಲೆ ಮುಂದಿನ ಕ್ರಮ ಇನ್ನೊಂದು ಹಂತ ಇದೆ ಎಂದು ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಳೆಯಿಂದ ಹಾನಿಯಾಗಿರುವ ಜಿಲ್ಲೆಯ ಗಿರಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಆಗಬಾರದಿತ್ತು, ಆಗಿದೆ. ಬಹಳ ಗೊಂದಲವಿದೆ. ಅನುಮತಿ ಬಗ್ಗೆ ತನಿಖೆಯಾಗಬೇಕು ಎಂದರು.ಡಿಸಿಎಂ ಫ್ಲಾಗ್ ಹಿಡಿದು ಓಡಾಡಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಅದು ಅವರ ವೈಯಕ್ತಿಕ ವಿಚಾರ. ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಬಿಜೆಪಿ ಆಗ್ರಹ ಕುರಿತ ಪ್ರಶ್ನೆಗೆ ಒಂದು ವರದಿ ಬರಲಿ, ಆಮೇಲೆ ಅವರಿಗೂ ಅವಕಾಶ ಇದೆ. ಬಿಜೆಪಿ ರಾಜ್ಯಗಳಲ್ಲೂ ಘಟನೆಗಳಾಗಿವೆ, ಕೇಂದ್ರದಲ್ಲಿ ಫೆಲ್ಯೂರ್ ಆಗಿದೆ, ಅದಕ್ಕೆ ಚಕಾರ ಎತ್ತಲ್ಲ. ಭದ್ರತೆ ಲ್ಯಾಪ್ಸ್ ಆಗಿದೆ ಇಲ್ಲ ಅಂತ ಹೇಳಕ್ಕೆ ಆಗಲ್ಲ, ಮೊದಲು ವರದಿ ಬರಲಿ ಎಂದು ಹೇಳಿದರು.
ಬೆಂಗಳೂರು ಕಮಿಷನರ್ ಅಮಾನತು ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿಎಂ ವರದಿ ತರಿಸಿಕೊಂಡಿರುತ್ತಾರೆ, ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿರುತ್ತೆ. ವರದಿ ಬರಲಿ, ತಪ್ಪಿಲ್ಲ ಅಂದ್ರೆ ಆಮೇಲೆ ದಾರಿ ಇದೆ. ನಾವು, ನೀವು ಹೇಳಿದರೆ ಆಗಲ್ಲ, ವರದಿ ಬರಲಿ, ತಿಂಗಳಲ್ಲಿ ಬರುತ್ತೆ ಆಮೇಲೆ ತೀರ್ಮಾನ ಮಾಡೋಣ ಎಂದರು.- 7 ಕೆಸಿಕೆಎಂ 1ಪೂರ್ವ ಮುಂಗಾರಿನಲ್ಲಿ ಸುರಿದ ಭಾರೀ ಮಳೆಗೆ ಹಾಳಾಗಿರುವ ಚಿಕ್ಕಮಗಳೂರು ತಾಲೂಕಿನ ಗಿರಿ ಪ್ರದೇಶಕ್ಕೆ ಸಚಿವ ಸತೀಶ್ ಜಾರಕಿಹೊಳಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಮಾಜಿ ಸಂಸದ ಚಂದ್ರಪ್ಪ ಇದ್ದರು.