ಸಾರಾಂಶ
ಮಂಗಳೂರು : ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತರ 25 ಲಕ್ಷ ರು. ವಿಶೇಷ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ಕದ್ರಿ ಉತ್ತರ ವಾರ್ಡ್ನಲ್ಲಿರುವ ಯುದ್ಧ ಸ್ಮಾರಕದ ಕಾಮಗಾರಿಯ ಗುದ್ದಲಿ ಪೂಜೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಯುದ್ಧ ಸ್ಮಾರಕದ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ರ 25 ಲಕ್ಷ ರು. ವಿಶೇಷ ಅನುದಾನ ಲಭಿಸಿದ್ದು, ಪಾಲಿಕೆ ಉಳಿದ ಖರ್ಚು ಭರಿಸುವ ಭರವಸೆ ನೀಡಿದೆ. ಅಂತೆಯೇ ನಾನು ಕೂಡಾ ನನ್ನ ಒಂದು ತಿಂಗಳ ವೇತನ ಒಂದು ಲಕ್ಷ ರು.ವನ್ನು ಈ ಪುಣ್ಯ ಕಾರ್ಯಕ್ಕೆ ಸಮರ್ಪಿಸುತ್ತೇನೆ ಎಂದು ಘೋಷಿಸಿದರು.ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಸೈನಿಕರು ಈ ದೇಶದ ಹೆಮ್ಮೆ. ಅವರ ತ್ಯಾಗಕ್ಕೆ ಎಂದಿಗೂ ಸಾಟಿಯಿಲ್ಲ. ಅವರನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಶೀಘ್ರದಲ್ಲಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದರು.
ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಶಾಸಕ ಕ್ಯಾ.ಗಣೇಶ್ ಕಾರ್ಣಿಕ್, ಮುಖಂಡರಾದ ರಮೇಶ್ ಕಂಡೆಟ್ಟು, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ಕಮಲಾಕ್ಷಿ, ಕುಸುಮ ದೇವಾಡಿಗ, ಸಂಧ್ಯಾ ವೆಂಕಟೇಶ್, ಮಾಜಿ ಸೈನಿಕ ಸಂಘದ ಅಧ್ಯಕ್ಷ ಶ್ರೀಕಾಂತ್ ಮತ್ತಿತರರಿದ್ದರು.