Minister visits and inspects the Sirambaling State Highway site

-ವಿಜಯಪುರ-ಹೈದ್ರಾಬಾದ್ ಸಂಪರ್ಕಿಸುವ ಹೆದ್ದಾರಿ ರಸ್ತೆ ಕುಸಿಯುತ್ತಿರುವ ಸ್ಥಳಕ್ಕೆ ಸಚಿವ ದರ್ಶನಾಪುರ ಭೇಟಿ

-----

ಕನ್ನಡಪ್ರಭ ವಾರ್ತೆ, ಯಾದಗಿರಿ

ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ನಗರಕ್ಕೆ ಹೊಂದಿಕೊಂಡಿರುವ ರೈಲ್ವೆ ಮೇಲ್ಸೇತುವೆ ಹತ್ತಿರ ವಿಜಯಪುರ-ಹೈದ್ರಾಬಾದ್ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ ಕುಸಿಯುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆದ್ದಾರಿ ರಸ್ತೆ ಕುಸಿಯುತ್ತಿರುವುದರಿಂದ ವಾಹನ ಸಂಚಾರಲ್ಲಿ ಆತಂಕ ಉಂಟುಮಾಡಿದೆ. ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಅಭಿಮನ್ಯು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಧರ, ಇಂಜಿನಿಯರ್ ಸುನೀಲಕುಮಾರ ರಾಠೋಡ ಅವರೊಂದಿಗೆ ಚರ್ಚಿಸಿದ ಸಚಿವರು ಕೂಡಲೇ ಈ ರಸ್ತೆ ಮೇಲೆ ಸದ್ಯ ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ, ಭಾರೀ ವಾಹನಗಳಿಗೆ ಗುಲಸರಂ ಕ್ರಾಸ್ ಹತ್ತಿರವಿರುವ ಬೈಪಾಸ್ ರಸ್ತೆ ಮೇಲೆ ಸಂಚಾರಕ್ಕೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಅಲ್ಲದೇ ರಸ್ತೆ ಮೇಲೆ ಪೊಲೀಸ್ ಬ್ಯಾರಿಕೇಡರ್‌ ಹಾಕಿ ಪೊಲೀಸ್ ಸಿಬ್ಬಂದಿ ನೇಮಿಸಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರವಹಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಲು ಕಾಮಗಾರಿ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಡಳಿತಕ್ಕೆ ನೀಡಿ ಎಂದು ಸಚಿವರು ಆದೇಶಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ. ಸಂಗೀತಾ, ಶಹಾಪುರ ಪಿಡಬ್ಲುಡಿ ಎಇಇ ಸುಗೂರೆಡ್ಡಿ ಬೆಂಡೆಬೆಂಬಳಿ ಸೇರಿದಂತೆ ಇತರರಿದ್ದರು.

-----

9ವೈಡಿಆರ್13 : ಯಾದಗಿರಿ ನಗರಕ್ಕೆ ಹೊಂದಿಕೊಂಡಿರುವ ರೈಲ್ವೆ ಮೇಲ್ಸೇತುವೆ ಹತ್ತಿರ ವಿಜಯಪುರ-ಹೈದ್ರಾಬಾದ್ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ ಕುಸಿಯುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.