ಹೊಸಪೇಟೆ: ಜಿಲ್ಲಾಡಳಿತ, ಜಿಪಂ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮೂಲಕ ಜನಸ್ಪಂದನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಶನಿವಾರ ಚಾಲನೆ ನೀಡಿದರು.

ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನಮೂದಿಸಿ ಮೊಬೈಲ್ ಮೂಲಕ ಅರ್ಜಿದಾರರನ್ನು ಸಂಪರ್ಕಿಸಿ ಪರಿಹಾರ ಒದಗಿಸಲಾಗುತ್ತದೆ. ಸಾರ್ವಜನಿಕರ ಅಹವಾಲು ಸ್ವೀಕರಿಸಲು ಜಿಲ್ಲಾಡಳಿತದಿಂದ ಇಲಾಖೆಗಳ ಕೌಂಟರ್ ಸ್ಥಾಪಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಜನರು ಆಯಾ ಇಲಾಖೆಯ ಕೌಂಟರ್ ಬಳಿ ಒಟ್ಟು 84 ಅರ್ಜಿ ಸಲ್ಲಿಕೆಯಾದವು. ಸ್ಥಳದಲ್ಲೇ 2 ಅರ್ಜಿಗಳು ಇತ್ಯರ್ಥ ಮಾಡಿದರು. 82 ಅರ್ಜಿಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಸಕ್ಕರೆ ಕಾರ್ಖಾನೆಗೆ ಆಗ್ರಹ: ರೈತ ಸಂಘದ ಅಧ್ಯಕ್ಷ ಟಿ. ನಾಗರಾಜ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಚಿವ ಜಮೀರ್ ಅವರು ಮುಖ್ಯಮಂತ್ರಿ ಜತೆಗೆ ಚರ್ಚಿಸಲಾಗುವುದು ಎಂದರು.

ಕಾರಿಗನೂರುನ 23ನೇ ವಾರ್ಡ್‌ನಲ್ಲಿ ಮೂಲಸೌಕರ್ಯ ಕಲ್ಪಿಸಲು ಹಾಗೂ ಮನೆಗಳ ನೋಂದಣಿಗೆ ಅರ್ಜಿ ಸಲ್ಲಿಸಲಾಯಿತು. ನಿವೇಶನ, ಮನೆಗಳ ಅರ್ಜಿಗಳು ಕೂಡ ಸಲ್ಲಿಕೆಯಾದವು.

ಪಿಯುಸಿ ಟಾಪರ್‌ಗಳಿಗೆ ತಲಾ ಐದು ಲಕ್ಷ ರು., ಸ್ಕೂಟಿ ಕಾಣಿಕೆ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸಾಧನೆ ಮಾಡಿದ ಸಂಜನಾಬಾಯಿ, ಕೆ. ನಿರ್ಮಲಾ ಅವರನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಸನ್ಮಾನಿಸಿದರು. ಜತೆಗೆ ತಲಾ ₹5 ಲಕ್ಷ ಮತ್ತು ಒಂದೊಂದು ಸ್ಕೂಟಿ ಗಿಫ್ಟ್‌ ನೀಡಿದರು. ಲೈಸೆನ್ಸ್‌ ಆಗುವವರೆಗೆ ಸ್ಕೂಟಿ ತಂದೆ, ತಾಯಿಗಳಿಗೆ ನೀಡಲು ತಿಳಿಸಿದರು.


ಕೊಟ್ಟೂರಿನ ನಾಗಲಕ್ಷ್ಮಿ, ಕೂಡ್ಲಿಗಿಯ ಯಲ್ಲಮ್ಮ ಅವರಿಗೆ ತಲಾ ಒಂದು ₹50 ಸಾವಿರ ವಿತರಿಸಿದರು.

ಇನ್ನು ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 624 ಅಂಕ ಗಳಿಸಿರುವ ಯಶವಂತ್‌ ಮತ್ತು 625ಕ್ಕೆ 622 ಅಂಕ ಗಳಿಸಿರುವ ಹರಪನಹಳ್ಳಿ ಬಾಲಕ ನಿಹಾರ್ ಅವರಿಗೆ ತಲಾ ₹1 ಲಕ್ಷ ಮತ್ತು ಸ್ಕೂಟಿ ನೀಡುವುದಾಗಿ ಘೋಷಿಸಿದರು.

ವಿದ್ಯಾರ್ಥಿಗಳಾದ ಎನ್.ಆರ್. ಅಭಿಷೇಕ್, ಹೇಮಂತ್ ಮತ್ತು ಲಕ್ಷ್ಮಿ, ಜಿ.ಎ.‌ ಉಮೇಶ್ ತಲಾ 621 ಅಂಕಗಳನ್ನು ಗಳಿಸಿದ್ದು, ಅವರಿಗೆ ಸ್ಕೂಟಿ ನೀಡುವುದಾಗಿ ಘೋಷಿಸಿದರು.

ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್, ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಮಾಜಿ ಶಾಸಕ ಸಿರಾಜ್‌ ಶೇಕ್‌, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ಅಕ್ರಂ ಷಾ, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ್ ಶ್ರುತಿ ಎಂ. ಮತ್ತಿತರರಿದ್ದರು.ಜನಸ್ಪಂದನದಿಂದ ಶಾಸಕ ಗವಿಯಪ್ಪ ದೂರ: ಜನ್ಮದಿನಕ್ಕೆ ಸನ್ಮಾನ

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜನಸ್ಪಂದನ ನಡೆಸುತ್ತಿದ್ದರೆ, ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಜಿಲ್ಲಾಧಿಕಾರಿ ಕಚೇರಿಗೆ ನೇರ ತೆರಳಿದರು. ಇದರಿಂದ ಶಾಸಕರು, ಸಚಿವರಿಗೆ ಸರಿಯಿಲ್ಲ ಎಂಬ ಗುಲ್ಲು ಮತ್ತೆ ಎದ್ದಿತು. ಕೆಡಿಪಿ ಸಭೆ ಮುನ್ನ ಜನ್ಮದಿನದ ಶುಭಾಶಯ ಕೋರಿದ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು, ಗವಿಯಪ್ಪ ಅವರನ್ನು ಸನ್ಮಾನಿಸಿದರು.