ಸಾರಾಂಶ
ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 1ನೇ ಸುತ್ತಿನಿಂದ 7 ನೇ ಸುತ್ತಿನ ತನಕವೂ ನಿರಂತರ ಮುನ್ನಡೆ ಹೊಂದಿದ್ದರು. ಅದಾದ ಬಳಿಕವೂ, ಸುನಿಲ್ ಬೋಸ್ 76,722 ಮತ ಪಡೆದರೆ ಬಿಜೆಪಿ ಅಭ್ಯರ್ಥಿ ಬಾಲರಾಜು 73,801 ಮತಗಳನ್ನು ಪಡೆದುಕೊಂಡು. 2921 ಮತಗಳ ಲೀಡ್ ಪಡೆದಿದ್ದಾರೆ. ಲಕ್ಷ ಮತಗಳ ಅಂತರದಲ್ಲಿ ಗೆದ್ದರೂ ಸುನಿಲ್ ಬೋಸ್ ಅವರಿಗೆ ತವರಿನಲ್ಲೇ ಅಲ್ಪ ಲೀಡ್ ಬಂದಿದ್ದು ಮುಜುಗರ ಅನುಭವಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಆರಂಭದಿಂದಲೂ ಭರ್ಜರಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಜಯಭೇರಿ ಬಾರಿಸಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಮತ್ತು ಮೈಸೂರು ಜಿಲ್ಲೆಯ ಟಿ.ನರಸೀಪುರ, ವರುಣ, ನಂಜನಗೂಡು ಹಾಗೂ ಎಚ್.ಡಿ.ಕೋಟೆ ಬರಲಿದ್ದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕೈ ಅಭ್ಯರ್ಥಿಗೆ ಲೀಡ್ ತಂದುಕೊಟ್ಟವರೇ ಟಿ.ನರಸೀಪುರದಲ್ಲಿ ಮಾತ್ರ ಅಲ್ಪ ಲೀಡ್ ಪಡೆದಿದ್ದಾರೆ.ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 1ನೇ ಸುತ್ತಿನಿಂದ 7 ನೇ ಸುತ್ತಿನ ತನಕವೂ ನಿರಂತರ ಮುನ್ನಡೆ ಹೊಂದಿದ್ದರು. ಅದಾದ ಬಳಿಕವೂ, ಸುನಿಲ್ ಬೋಸ್ 76,722 ಮತ ಪಡೆದರೆ ಬಿಜೆಪಿ ಅಭ್ಯರ್ಥಿ ಬಾಲರಾಜು 73,801 ಮತಗಳನ್ನು ಪಡೆದುಕೊಂಡು. 2921 ಮತಗಳ ಲೀಡ್ ಪಡೆದಿದ್ದಾರೆ. ಲಕ್ಷ ಮತಗಳ ಅಂತರದಲ್ಲಿ ಗೆದ್ದರೂ ಸುನಿಲ್ ಬೋಸ್ ಅವರಿಗೆ ತವರಿನಲ್ಲೇ ಅಲ್ಪ ಲೀಡ್ ಬಂದಿದ್ದು ಮುಜುಗರ ಅನುಭವಿಸಿದ್ದಾರೆ.
ಸಿಎಂ ಕ್ಷೇತ್ರದಲ್ಲಿ 33 ಸಾವಿರ ಲೀಡ್: ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಕವಾಗಿ ಕೈ-ಕಮಲದ ನಡುವೆ ಟೈಟ್ ಫೈಟ್ ನಡೆದರೂ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಗೆ 33,352 ಲೀಡ್ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ 73,852 ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ 1,07,203 ಮತ ಪಡೆದುಕೊಂಡರು. ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಾಲರಾಜ್ಗೆ 72,997 ಮತಗಳು ಬಂದಿದ್ದು ಸುನಿಲ್ ಬೋಸ್ ಗೆ 96,735 ಮತ ಸಿಕ್ಕಿದ್ದು 23,738 ಲೀಡ್ ಸಿಕ್ಕಿದೆ. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 20,578 ಲೀಡ್, ಜೆಡಿಎಸ್ ಶಾಸಕ ಇರುವ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕೈಗೆ 36,957 ಲೀಡ್, ಕೊಳ್ಳೇಗಾಲದಲ್ಲಿ 33,016 ಲೀಡ್, ಗುಂಡ್ಲುಪೇಟೆಯಲ್ಲಿ 17,982 ಲೀಡ್ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 20,326 ಮತಗಳು ಲೀಡ್ ಬಂದಿದೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಟಿ.ನರಸಿಪುರ ಹೊರತುಪಡಿಸಿ ಉಳಿದೆಲ್ಲಾ ಕಡೆ ಭರ್ಜರಿ ಮತಗಳು ಕೈ ಬುಟ್ಟಿಗೆ ಬಂದಿವೆ. ಇವಿಎಂ ಮತ ಎಣಿಕೆ ಅಂಕಿ ಅಂಶಗಳು ಇದಾಗಿದ್ದು ಅಂಚೆ ಮತ ಪತ್ರದ ಲೆಕ್ಕ ಇನ್ನಷ್ಟೇ ತಿಳಿದುಬರಬೇಕಿದೆ.ಸುನೀಲ್ ಬೋಸ್ ಕೊಟ್ಟ ಕಾರಣ: ಎಲ್ಲಾ ಕ್ಷೇತ್ರದಲ್ಲೂ ಲೀಡ್ ಬಂದು ತವರಿನಲ್ಲೇ ಕಡಿಮೆ ಲೀಡ್ ಬಂದಿದ್ದರ ಕುರಿತು ಸುನಿಲ್ ಬೋಸ್ ಪ್ರತಿಕ್ರಿಯಿಸಿ, ಎಲ್ಲಾ 8 ಕ್ಷೇತ್ರಗಳಲ್ಲೂ ತನ್ನದೇ ಆದ ರಾಜಕೀಯ ಕಾರಣಗಳಿರುತ್ತವೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಹುರುಪು ತುಂಬಿ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವಂತೆ ಮಾಡುತ್ತೇನೆ ಎಂದರು.
‘ಗೋ ಬ್ಯಾಕ್ ಎಂದು ವಿರೋಧಿಗಳು ಹೇಳಿದ್ದರು, ಆದರೆ, ಜನ ಕಮ್ ಇನ್ ಎಂದಿದ್ದಾರೆ. 8 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರು, ಮುಖಂಡರು ತಾವೇ ಚುನಾವಣೆಗೆ ನಿಂತಂತೆ ಕೆಲಸ ಮಾಡಿದ್ದಾರೆ. ವಿರೋಧಿಗಳ ಆರೋಪಗಳಿಗೆ ಮತದಾರರು ಉತ್ತರ ಕೊಟ್ಟಿದ್ದಾರೆ. ಶೀಘ್ರವೇ ಚಾ.ನಗರದಲ್ಲಿ ಮನೆ ಮಾಡಿ, ಇಲ್ಲಿನ ಜನರ ಕಷ್ಟ ಕೇಳುತ್ತೇನೆ. ಕೈಗಾರಿಕೆಗಳನ್ನು ತಂದು ಚಾಮರಾಜನಗರ ಅಭಿವೃದ್ಧಿ ಮಾಡುತ್ತೇನೆ.’-ಸುನೀಲ್ ಬೋಸ್, ನೂತನ ಸಂಸದ