ಸಾರಾಂಶ
- ಚನ್ನಗಿರಿಯಲ್ಲಿ ವಿಹಿಂಪ ಮುಖಂಡ ಮಂಜುನಾಥ್ ಆಗ್ರಹ । ಪೆಹಲ್ಗಾಂನಲ್ಲಿ ಹಿಂದೂ ನಾಗರೀಕರ ಹತ್ಯೆ ಖಂಡಿಸಿ ಪ್ರತಿಭಟನೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಈ ದೇಶದ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನಕ್ಕೆ ಜಿಂದಾಬಂದ್ ಎಂದು ಹೇಳುವ ಮೀರ್ ಸಾಧಿಕರ ವಿರುದ್ಧ ಹಿಂದೂ ಸಮಾಜ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತು ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ್ ಹೇಳಿದರು.ಕಾಶ್ಮೀರದ ಪೆಹಲ್ಗಾಂನಲ್ಲಿ ನಡೆದ ಹಿಂದೂ ನಾಗರೀಕರ ಹತ್ಯೆ ಖಂಡಿಸಿ ಮಂಗಳವಾರ ಪಟ್ಟಣದ ವಿಶ್ವ ಹಿಂದೂ ಪರಿಷತ್ತು-ಬಜರಂಗದಳ ವತಿಯಿಂದ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪೆಹಲ್ಗಾಂನಲ್ಲಿ ಹತ್ಯೆ ಮಾಡುವಾಗ ಜಿಹಾದಿಗಳು ಕೇಳಿದ್ದು ಧರ್ಮವನ್ನೇ ಹೊರತು, ನೀನು ಯಾವ ಜಾತಿಯವನು ಎಂದಲ್ಲ. ಇಂತಹ ಘಟನೆಗಳು ಮತ್ತೊಮ್ಮೆ ಈ ದೇಶದಲ್ಲಿ ಮರುಕಳಿಸದಂತೆ ಜಿಹಾದಿಗಳಿಗೆ ತಕ್ಕ ಉತ್ತರ ಕೊಡಬೇಕಾಗಿದೆ. ಈ ದೇಶದ ಪ್ರಧಾನಮಂತ್ರಿ ಜಿಹಾದಿಗಳನ್ನು ಮಟ್ಟಹಾಕಲು ಏನೇ ತೀರ್ಮಾನ ತೆಗೆದುಕೊಂಡರೂ ಸಮಸ್ಥ ಹಿಂದೂ ಸಮಾಜ ಅವರಿಗೆ ಬೆಂಬಲವಾಗಿ ನಿಲ್ಲಲಿದೆ ಎಂದರು.ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ದೇಶದ ಅಮಾಯಕ ಪ್ರವಾಸಿಗರನ್ನು ಕೊಂದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಪ್ರಧಾನಿ ನರೇಂದ್ರ ಮೋದಿ ಯೋಚಿಸುತ್ತಿದ್ದಾರೆ. ಇಂಥ ಸಮಯದಲ್ಲಿ ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧದ ಅವಶ್ಯಕತೆ ಇಲ್ಲ ಎಂಬ ಹೇಳಿಕೆ ನೀಡಿರುವುದು ಇವರ ಮನಸ್ಥಿತಿ ಏನೆಂಬುದನ್ನು ತೋರುತ್ತದೆ. ಜಿಹಾದಿಗಳಿಗೆ ಜಿಹಾದಿಗಳ ಹಾದಿಯಲ್ಲಿಯೇ ಉತ್ತರ ನೀಡಬೇಕೇ ವಿನಃ ಶಾಂತಿಯ ಪಾಠ ಮಾಡುವ ಕಾಲ ಇದಲ್ಲ ಎಂದರು.
ಮುಂದಿನ ದಿನಗಳಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ಉಗ್ರರು ಮತ್ತು ದೇಶಪ್ರೇಮಿಗಳ ನಡುವಿನ ಸಮರವಾಗಿದೆ. ಹಿಂದೂ ಧರ್ಮದ ಮೇಲೆ ಯಾರೇ ದಬ್ಬಾಳಿಕೆ, ದೌರ್ಜನ್ಯ ನಡೆಸಿದರೂ ಅವರನ್ನು ಸದೆಬಡಿಯಲು ಸಮಸ್ತ ಹಿಂದೂ ಸಮಾಜ ಸನ್ನದ್ಧವಾಗಿದೆ. ಭಾರತದ ಅಭಿವೃದ್ಧಿ ಸಹಿಸದ ಕೆಲ ಕಿಡಿಗೇಡಿಗಳು ದೇಶದಲ್ಲಿ ಅಶಾಂತಿ ಉಂಟುಮಾಡಲು ಮುಂದಾಗುತ್ತಿದ್ದಾರೆ. ಅದರಲ್ಲೂ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವುದು ಖಂಡನೀಯ ಎಂದರು.ಪ್ರತಿಭಟನೆಯಲ್ಲಿ ವಿ.ಎಚ್.ಪಿ- ಬಜರಂಗದಳ ಪ್ರಮುಖರಾದ ವಸಂತ್, ಹನುಮಂತ್ ಮಡಿವಾಳ್, ಕಾಯಿ ಮಂಜುನಾಥ್, ದಿಗ್ಗೇನಹಳ್ಳಿ ನಾಗರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಕುಮಾರಸ್ವಾಮಿ, ರವಿಚಂದ್ರ, ಕಿರಣ್ ಕೋರಿ, ದರ್ಶನ್ ಮೊಹರೆ, ಮಾಚನಾಯ್ಕನಹಳ್ಳಿ ಜಯಪ್ಪ, ಪುನೀತ್, ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್, ತುಮ್ಕೋಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಗಂಗಾ ಮಂಜುನಾಥ್, ಅಂಬಿಕಾ, ಪೂರ್ಣಿಮಾ, ಪದ್ಮ ಅರುಣ್, ಸಿಂದೂ, ಉಮಾದೇವಿ ಸೇರಿದಂತೆ ವಿಎಚ್ಪಿ- ಬಜರಂಗದಳ ಕಾರ್ಯಕರ್ತರು ಹಾಜರಿದ್ದರು.
- - -(ಕೋಟ್)ಭಾರತದ ಕಿರೀಟದಂತಿರುವ ಜಮ್ಮು-ಕಾಶ್ಮೀರವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಪದೇಪದೇ ಭಾರತೀಯರ ಸಹನೆ ಪರೀಕ್ಷೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಿಗಳಿಗೆ ತಕ್ಕ ಉತ್ತರ ನೀಡಬೇಕಾಗಿದೆ. ಈ ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ನಾಮ ಆಗುವವರೆಗೂ ಉಗ್ರವಾದ ನಿಲ್ಲದು. ಆಸೆ, ಆಮಿಷಗಳಿಗೆ ಬಲಿಯಾಗಿ ಮತ ನೀಡುವವರು ಇನ್ನಾದರೂ ಎಚ್ಚೆತ್ತುಕೊಳ್ಳಲಿ.
- ಮಂಜುನಾಥ್, ಜಿಲ್ಲಾ ಕೋಶಾಧ್ಯಕ್ಷ- - -
-29ಕೆಸಿಎನ್ಜಿ1:ಕಾಶ್ಮೀರದ ಪೆಹಲ್ಗಾಂನಲ್ಲಿ ಉಗ್ರರು ನಡೆಸಿದ ಹಿಂದೂ ನಾಗರೀಕರ ಹತ್ಯೆ ಖಂಡಿಸಿ ಮಂಗಳವಾರ ಚನ್ನಗಿರಿಯಲ್ಲಿ ವಿಶ್ವ ಹಿಂದೂ ಪರಿಷತ್ತು-ಬಜರಂಗದಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು