2023- 24ನೇ ಸಾಲಿನ ಕ್ರಿಯಾ ಯೋಜನೆ ಅಡಿ ಆತಗೂರು ಮತ್ತು ತಗ್ಗಹಳ್ಳಿ ಗ್ರಾಪಂಗಳಲ್ಲಿ ಅಕ್ರಮವಾಗಿ ನಕಲಿ ಬಿಲ್ ಸೃಷ್ಟಿಸಿ 1.75 ಕೋಟಿ ರು. ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಪಿಡಿಒ ಶಶಿಧರ್ ಅಮಾನತಿ ಮಾಡಿ ಜಿಪಂ ಸಿಇಒ ಕೆ.ಆರ್. ನಂದಿನಿ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಆತಗೂರು ಮತ್ತು ತಗ್ಗಹಳ್ಳಿ ಗ್ರಾಮ ಪಂಚಾಯ್ತಿಗಳಲ್ಲಿ 15ನೇ ಹಣಕಾಸು ಯೋಜನೆ ಅಡಿ ಕೋಟ್ಯಂತರ ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಪಿಡಿಒ ಎ.ಬಿ.ಶಶಿಧರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

2023- 24ನೇ ಸಾಲಿನ ಕ್ರಿಯಾ ಯೋಜನೆ ಅಡಿ ಆತಗೂರು ಮತ್ತು ತಗ್ಗಹಳ್ಳಿ ಗ್ರಾಪಂಗಳಲ್ಲಿ ಅಕ್ರಮವಾಗಿ ನಕಲಿ ಬಿಲ್ ಸೃಷ್ಟಿಸಿ 1.75 ಕೋಟಿ ರು. ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಪಿಡಿಒ ಶಶಿಧರ್ ಅಮಾನತಿ ಮಾಡಿ ಜಿಪಂ ಸಿಇಒ ಕೆ.ಆರ್. ನಂದಿನಿ ಆದೇಶ ಹೊರಡಿಸಿದ್ದಾರೆ.

ಹಗರಣದ ಸಂಬಂಧ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಲ್. ವಿನೋದ್ ಬಾಬು ಪಿಡಿಒ ಶಶಿಧರ್ ವಿರುದ್ಧ ದೂರು ಸಲ್ಲಿಸಿದ್ದರು. ತಾಪಂ ಯೋಜನಾಧಿಕಾರಿ ಮತ್ತು ಸಹಾಯಕ ಲೆಕ್ಕಾಧಿಕಾರಿ ಅವರು ಜಂಟಿ ತಪಾಸಣೆ ಕೈಗೊಂಡು ಹಗರಣದ ಬಗ್ಗೆ ಎಂಟು ಪುಟಗಳ ವರದಿ ಸಲ್ಲಿಸಿ, ಆತಗೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ಅನುಮೋದನೆ ಪಡೆಯದೆ ಮತ್ತು 15ನೇ ಹಣಕಾಸು ಮಾರ್ಗ ಸೂಚಿ ಉಲ್ಲಂಘಿಸಿ ಹಾಗೂ ಕೆಟಿಪಿಪಿ ಕಾಯ್ದೆ ಪಾಲಿಸದೆ ಕರ್ತವ್ಯ ಲೋಪ ಮಾಡಿರುವ ಪಿಡಿಒ ಶಶಿಧರ್ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಜಂಟಿ ತಪಾಸಣೆ ನಡೆಸಿದ ತನಿಖಾ ತಂಡ ಅಧಿಕಾರಿಗಳು ವರದಿ ಸಲ್ಲಿಸಿದ್ದರು.

5ನೇ ಹಣಕಾಸು ಕಾಮಗಾರಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸುವಾಗ 12 ನಕಲಿ ಬಿಲ್ಲುಗಳನ್ನು ಸೃಷ್ಟಿಸಿ 1.75 ಕೋಟಿ ರು. ಹಣವನ್ನು ಗುಳುಂ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ತನಿಕಾ ತಂಡದ ವರದಿ ಆಧಾರದ ಮೇಲೆ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಪಿಡಿಒ ಶಶಿಧರ್ ಅವರನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಅಮಾನತ್ತು ಮಾಡಿ ಸಿಇಒ ನಂದಿನಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಹಲಗೂರು ಗ್ರಾಪಂ ಪಿಡಿಒ ಆಗಿದ್ದ ಅವಧಿಯಲ್ಲಿ ಶಶಿಧರ್ ಹಣ ದುರುಪಯೋಗ ಆರೋಪದ ಮೇಲೆ ಅಮಾನತ್ತಾಗಿದ್ದರು. ಸಹ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದರು. ಆತಗೂರು ಮತ್ತು ತಗ್ಗಹಳ್ಳಿ ಪಂಚಾಯಿತಿಗಳಲ್ಲಿ ಅವ್ಯವಹಾರದಲ್ಲಿ ತಾಪಂ ಇಒ ಸೇರಿದಂತೆ ಹಲವು ಅಧಿಕಾರಿಗಳು ಶಾಮೀಲು ಆಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸಿಇಒ ನಂದಿನಿ ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರೈತ ಸಂಘದ ವಿನೋದ್ ಬಾಬು ಆಗ್ರಪಡಿಸಿದ್ದಾರೆ.