ಸಾರಾಂಶ
ಈ ರೀತಿ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡಿಬೆಟ್ಟದಲ್ಲಿ ಕಿಡಿಗೇಡಿಗಳ ದುಷ್ಕೃತ್ಯದಿಂದ ಅರಣ್ಯ ಪ್ರದೇಶ ನಾಶವಾಗಿರುವುದನ್ನು ಖಂಡಿಸಿ, ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯವರು ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದರು.ಈ ಘಟನೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ಪರಿಗಣಿಸಿ, ಚಾಮುಂಡಿಬೆಟ್ಟಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಪ್ರತಿ ದಿನ ಪೊಲೀಸ್ ಜೀಪು 2- 3 ಬಾರಿ ಚಾಮುಂಡಿಬೆಟ್ಟ ಗಸ್ತು ತಿರುಗುವ ವ್ಯವಸ್ಥೆ ಮಾಡಬೇಕು. ಈ ರೀತಿ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಅವರು ಒತ್ತಾಯಿಸಿದರು.ಜಿಲ್ಲಾಡಳಿತ ಕೂಡಲೇ 100 ಎಕರೆ ಪ್ರದೇಶದಲ್ಲಿ ಎರಡು ಪಟ್ಟು, ಗಿಡ ಮರಗಳನ್ನು ನೆಡಬೇಕು. ಜೊತೆಗೆ ಇವುಗಳನ್ನು ಸಂರಕ್ಷಣೆ ಮಾಡಬೇಕು. ಹೆಚ್ಚು ಹೆಚ್ಚು ಅರಳಿ ಮರಗಳನ್ನು ನೆಡಬೇಕು ಎಂದು ಅವರು ಆಗ್ರಹಿಸಿದರು.ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಕೃಷ್ಣಪ್ಪ, ಪ್ರಭುಶಂಕರ್, ಪ್ರಜೀಶ್, ಶಿವಲಿಂಗಯ್ಯ, ನೇಹಾ, ಕೃಷ್ಣೇಗೌಡ, ಶಿವಕುಮಾರ್, ಸಿದ್ದೇಗೌಡ, ಸುನಿಲ್ ಕುಮಾರ್, ರಾಮಣ್ಣ, ಬಸವರಾಜು, ಮಂಜುಳಾ, ನಾಗರಾಜು, ಕುಮಾರ್ ಗೌಡ, ರಘು ಅರಸ್, ಗೀತಾ ಗೌಡ, ದರ್ಶನ್ ಗೌಡ, ಪ್ರಭಾಕರ್, ಸುಬ್ಬೇಗೌಡ ಮೊದಲಾದವರು ಇದ್ದರು.