ಕನ್ನಡಪ್ರಭ ವಾರ್ತೆ ಬೆಂಗಳೂರ

ಶಿವಾಜಿ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜಿಬಿಎ ಕೇಂದ್ರ ನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಸ್ಥಳೀಯ ಸಂಘಟನೆಯೊಂದರ ಮುಖಂಡ, ಆತನ ಬೆಂಬಲಿಗರು ಹಾಗೂ ಕೆಲ ವ್ಯಾಪಾರಿಗಳು ಅಡ್ಡಿಪಡಿಸಿ ಹಲ್ಲೆ ನಡೆಸಿದ್ದಾರೆ.ಮಂಗಳವಾರ ಬೆಳಗ್ಗೆ ಶಿವಾಜಿ ನಗರ ಬಸ್ ನಿಲ್ದಾಣದ ಬಳಿ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಮಾಧವ ರಾವ್ ಮತ್ತು ಇತರ ನಾಲ್ವರ ಮೇಲೆ ಹಲ್ಲೆ ನಡೆದಿದೆ. ಘಟನೆ ನಡೆದ ಕೆಲ ಹೊತ್ತಿನಲ್ಲಿ ಹತ್ತು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯನ್ನು ಖಂಡಿಸಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವವರು, ಹಲ್ಲೆ ನಡೆಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಮತ್ತೊಂದೆಡೆ ಹಲ್ಲೆ ಘಟನೆ ಖಂಡಿಸಿ, ನೌಕರರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಜಿಬಿಎ ನೌಕರರು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ಬುಧವಾರವೂ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ಘಟನೆ ವಿವರ:

ಮಂಗಳವಾರ ಬೆಳಗ್ಗೆ ಶಿವಾಜಿನಗರದಲ್ಲಿ ಎಂಜಿನಿಯರುಗಳಾದ ಮಾಧವ ರಾವ್, ಸಾವಿತ್ರಿ, ಸಹಾಯಕ ಎಂಜಿನಿಯರ್ ರುಚಿತಾ, ಜೆಸಿಬಿ ಚಾಲಕ ಸಿದ್ದಪ್ಪ ಹಾಗೂ ಟ್ರ್ಯಾಕ್ಟರ್ ಚಾಲಕ ಸುನೀಲ್ ಅವರು ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದರು. ಮಧ್ಯಾಹ್ನ 12 ಗಂಟೆಗೆ ಏಕಾಏಕಿ ಗುಂಪು ಕಟ್ಟಿಕೊಂಡು ಬಂದ ಕನ್ನಡ ಪರ ಹೋರಾಟಗಾರ ಬಸವರಾಜ ಪಡುಕೋಟೆ ಮತ್ತು ಆತನ ಬೆಂಬಲಿಗರು, ಅಧಿಕಾರಿಗಳನ್ನು ಉದ್ದೇಶಿಸಿ, ಅಂಗಡಿಗಳನ್ನು ಏಕೆ ತೆಗೆಸುತ್ತಿದ್ದಿರಾ? ನಿಮಗೆ ಇಲ್ಲಿ ತೆಗೆಯಲು ಹೇಳಿದ್ದಾರೆ? ಎಂದು ಜಗಳ ತೆಗೆದಿದ್ದಾರೆ. ಕರ್ತವ್ಯ ನಿರತರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಬೆದರಿಕೆ ಹಾಕಿ ನಿಂದಿಸುತ್ತಾ, ಮೇಲೆರಗಿದ್ದಾರೆ.


ಪರಿಸ್ಥಿತಿಯ ಗಂಭೀರತೆ ಅರಿತ ಅಧಿಕಾರಿಗಳು ಭದ್ರತೆಗೆ ಇರುವ ಪೊಲೀಸರು ತಮ್ಮ ನೆರವಿಗೆ ಬರಬಹುದೇ? ಎಂದು ಅತ್ತಿತ್ತ ನೋಡಿದ್ದಾರೆ. ಆದರೆ, ಪೊಲೀಸರಾಗಲಿ, ಮಾರ್ಷಲ್‌ಗಳಾಗಲಿ ಬಾರದ ಕಾರಣ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಅಷ್ಟರಲ್ಲೇ ಬಸವರಾಜ, ಆತನ ಬೆಂಬಲಿಗರು ಮತ್ತಿತರ ಕಿಡಿಗೇಡಿಗಳು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಮುಂದಾದ ಅಧಿಕಾರಿಗಳನ್ನು ಅಟ್ಟಿಸಿಕೊಂಡು ಹೋಗಿ ಹೆಲ್ಮೆಟ್, ಕುರ್ಚಿ, ಡಸ್ಟ್‌ಬಿನ್ ಸೇರಿದಂತೆ ಇನ್ನಿತರ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಸ್ಥಳದಿಂದ ತಪ್ಪಿಸಿಕೊಂಡ ಅಧಿಕಾರಿ ಮತ್ತು ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಮಾಹಿತಿ ಪಡೆದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿ 10 ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಅವರು ಸ್ವತಃ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ತ್ವರಿತ ಕ್ರಮಕ್ಕೆ ಒತ್ತಾಯಿಸಿದರು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹಾಗೂ ಜಗದೀಶ್ ಅವರು ಆಸ್ಪತ್ರೆಗೆ ತೆರಳಿ ಅಧಿಕಾರಿಗಳ ಆರೋಗ್ಯ ವಿಚಾರಿಸಿದರು.ಸೂಕ್ತ ಭದ್ರತೆ ತೆಗೆದುಕೊಳ್ಳುತ್ತೇವೆ: ಜಗದೀಶ್

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 100 ಕಿ.ಮೀ ಒತ್ತುವರಿ ತೆರವು ಮಾಡಲಾಗಿದೆ. ಶಿವಾಜಿನಗರದ ಐದಾರು ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈವರೆಗೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪೊಲೀಸ್ ಭದ್ರತೆ ತೆಗೆದುಕೊಂಡು ಕಾರ್ಯಾಚರಣೆ ನಡೆಸುತ್ತೇವೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಹೇಳಿದ್ದಾರೆ.2 ಅಡಿ ಕೂಡ ಜಾಗ

ಬಿಟ್ಟಿರಲಿಲ್ಲ: ರಾವ್

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ಸುಪ್ರೀಂಕೋರ್ಟ್ ಆದೇಶದಂತೆ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಘಟನೆ ನಡೆದಿರುವ ಸ್ಥಳದಲ್ಲಿ ವಿಶಾಲವಾದ ಫುಟ್‌ಪಾತ್ ಇದೆ. ಆದರೆ, 2 ಅಡಿ ಕೂಡ ಜಾಗ ಬಿಡದಂತೆ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಹೀಗಾಗಿಯೇ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಭದ್ರತಾ ಕ್ರಮಗಳೊಂದಿಗೆ ಕಾರ್ಯಾಚರಣೆ ಮುಂದುವರೆಸುತ್ತೇವೆ. ಇನ್ನು ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವುದರ ಹಿಂದೆ ಮಾಫಿಯಾ, ರೌಡಿಗಳು ಇದ್ದಾರೆಯೇ ಎಂಬುದನ್ನು ಪರಿಶೀಲಿಸಿ ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಜೆಸಿಬಿ, ಭದ್ರತೆಯೊಂದಿಗೆ

ತೆರವು ಕಾರ್ಯ ಚುರುಕು

ಶಿವಾಜಿ ನಗರದಲ್ಲಿ ಅಧಿಕಾರಿಗಳ ಮೇಲೆ ಘಟನೆ ನಂತರ ಕೆಲ ಕಾಲ ಸ್ಥಗಿತಗೊಂಡಿದ್ದ ಒತ್ತುವರಿ ತೆರವು ಕಾರ್ಯ ನಂತರ ಮತ್ತಷ್ಟು ತೀವ್ರತೆ ಪಡೆಯಿತು. ಪೊಲೀಸ್ ಭದ್ರತೆಯೊಂದಿಗೆ ಮತ್ತೆರೆಡು ಜೆಸಿಬಿಗಳನ್ನು ತಂದ ಜಿಬಿಎ ಅಧಿಕಾರಿಗಳು, ಒತ್ತುವರಿಗಳನ್ನು ನೆಲಸಮಗೊಳಿಸಿದರು.

ಇಂದು ನೌಕರರ ಪ್ರತಿಭಟನೆ?

ಹಲ್ಲೆ ಸುದ್ದಿ ತಿಳಿಯುತ್ತಿದ್ದಂತೆ ಜಿಬಿಎ ನೌಕರರು, ಅಧಿಕಾರಿಗಳುಘಟನಾ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಕರ್ತವ್ಯನಿರತ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ, ಬುಧವಾರ ಪಾಲಿಕೆ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವುದಾಗಿ ಪಾಲಿಕೆ ನೌಕರ ಸಂಘದ ಅಧ್ಯಕ್ಷ ಅಮೃತ್‌ರಾಜ್ ಹೇಳಿದ್ದಾರೆ.

ರಕ್ಷಣೆಗೆ ಧಾವಿಸದ ಪೊಲೀಸರು!

ತೆರವು ಕಾರ್ಯಾಚರಣೆ ವೇಳೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅದರಂತೆ ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಘಟನೆ ನಡೆಯುವಾಗ ಅವರು ರಕ್ಷಣೆಗೆ ಧಾವಿಸಿಲ್ಲ ಎಂದು ಹಲ್ಲೆಗೊಳಗಾದ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ. ಮಾರ್ಷಲ್‌ಗಳನ್ನು ಕೂಡ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಆದರೆ, ಅವರು ತೆರವು ಕಾರ್ಯಾಚರಣೆ ಸ್ಥಳದಿಂದ ಸ್ವಲ್ಪ ಮುಂದಕ್ಕೆ ಹೋಗಿದ್ದರು. ನಿಯೋಜನೆಗೊಂಡಿದ್ದ ಪೊಲೀಸರು ಏಕೆ ರಕ್ಷಣೆಗೆ ಧಾವಿಸಿಲ್ಲ? ಕಾರಣವೇನು? ಎಂಬುದರ ಕುರಿತು ಪೊಲೀಸ್ ಇಲಾಖೆ ಪರಿಶೀಲನೆ ನಡೆಸುತ್ತದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ತಿಳಿಸಿದ್ದಾರೆ.

ಆರೋಪಿಯ ಮಳಿಗೆ ತೆರವು

ಹಲ್ಲೆ ನಡೆಸಿದ ಪ್ರಮುಖ ಆರೋಪಿ ಎನ್ನಲಾಗಿರುವ ಬಸವರಾಜ ಪಡುಕೋಟೆ ಮತ್ತು ಆತನ ಬೆಂಬಲಿಗರದ್ದು ಎನ್ನಲಾದ, ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದ ಹೊಟೇಲ್‌ವೊಂದನ್ನು ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿದರು. ಬೌರಿಂಗ್ ಆಸ್ಪತ್ರೆ ಸಮೀಪದಲ್ಲಿ ಪುಟ್‌ಪಾತ್ ಮೇಲೆ ಕಟ್ಟಿಸಿಕೊಂಡಿದ್ದ ತಾತ್ಕಾಲಿಕ ಹೊಟೇಲ್‌ ಅನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.ತಲೆಮರೆಸಿಕೊಂಡ

ಪ್ರಮುಖ ಆರೋಪಿಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಆರೋಪಿಗಳಾದ ಕಿರಣ್‌ (34), ಬಸವರಾಜ್‌ (28), ರಂಜಿತ್‌ (19), ರಂಗಸ್ವಾಮಿ (49), ಮುಜ್ಜಾಹಿದ್‌ ಅಹಮ್ಮದ್‌ (39), ಕೊಟ್ರೇಶ್‌ (26), ಪರಶುರಾಮ್‌(27), ರಘು (28), ಪ್ರತಿಭನ್‌(23) ಮತ್ತು ಭರತ್‌(24) ಎಂಬುವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಬಸವರಾಜ್‌ ಪಡುಕೋಟೆ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಶೋಧ ನಡೆದಿದೆ. ಆರೋಪಿಗಳ ಹಿನ್ನೆಲೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಹಲ್ಲೆ ಸಹಿಸಲ್ಲ: ಸಚಿವಸುಪ್ರೀಂಕೋರ್ಟ್ ಆದೇಶದಂತೆ ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗುತ್ತಿದೆ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ ನಡೆಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಹೆಚ್ಚಿನ ಭದ್ರತೆಯೊಂದಿಗೆ ತೆರವು ಕಾರ್ಯ ಮುಂದುವರೆಸಲಾಗುವುದು.- ಕೃಷ್ಣ ಬೈರೇಗೌಡ, ಸಚಿವ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ

ಕಾನೂನು ಕ್ರಮ ಖಚಿತ

ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಆಗುತ್ತೆ. ಶಿವಾಜಿನಗರ ಕ್ಷೇತ್ರದಲ್ಲಿ ಕಳೆದ 13 ದಿನಗಳಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸಣ್ಣ ಗಲಾಟೆಯೂ ಆಗಿಲ್ಲ. ಅಲ್ಪಸಂಖ್ಯಾತರು ಬಾಹುಳ್ಯದ ಪ್ರದೇಶದಲ್ಲಿ ಕಾನೂನು ಅನ್ವಯ ಆಗುವುದಿಲ್ಲ ಎನ್ನುವವರಿಗೆ ನಾನು ಹೇಳಬಯಸುತ್ತೇನೆ. ಹಲ್ಲೆ ಮಾಡುದಿವರಲ್ಲಿ ಯಾರೂ ಅಲ್ಪಸಂಖ್ಯಾತರಿಲ್ಲ. ಹಲ್ಲೆ ಹಿಂದೆ ಯಾವ ಉದ್ದೇಶ ಇದೆ ಗೊತ್ತಿಲ್ಲ. ಕಾನೂನಿಗಿಂತ ಶಿವಾಜಿನಗರ ಕ್ಷೇತ್ರ ಮೇಲೆ ಅಲ್ಲ.

-ರಿಜ್ವಾನ್‌ ಅರ್ಷದ್‌, ಶಿವಾಜಿನಗರ ಕ್ಷೇತ್ರ ಶಾಸಕ