ಸಾರಾಂಶ
ಚಿಕ್ಕಮಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಯಡಿಯೂರಪ್ಪನವರ ದಾರಿಯಲ್ಲಿ ಹೋಗಲು ಅವಕಾಶ ಇದೆ. ರಾಮಕೃಷ್ಣ ಹೆಗಡೆ ದಾರಿಯಲ್ಲಿ ಹೋಗುವ ಅವಕಾಶವನ್ನ ಕಳೆದುಕೊಂಡಿದ್ದೀರಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆಯವರ ಮೇಲೆ ದೂರವಾಣಿ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದರು.
ನಿಮ್ಮ ಮೇಲೆ ಆರೋಪ ಬಂದಾಗ ಸೈಟ್ ಹಿಂದಿರುಗಿಸಿ ತನಿಖೆಯಾಗೋವರೆಗೂ ಸೈಟ್ ಬೇಡ ಅನ್ನಬೇಕಿತ್ತು. ಹೀಗೆ ಹೇಳಿದ್ದರೆ ತುಂಬಾ ದೊಡ್ಡ ವ್ಯಕ್ತಿ ಆಗುತ್ತಿದ್ದೀರಿ ರಾಜ್ಯದ ಜನ ನಿಮ್ಮನ್ನ ನೈತಿಕ ಉತ್ತುಂಗದ ಸ್ಥಾನದಲ್ಲಿ ಇಡುತ್ತಿದ್ದರು ಎಂದು ಹೇಳಿದರು.ಈಗ ಮುಡಾ ಹಗರಣವನ್ನು ರಾಜ್ಯಪಾಲರು ತನಿಖೆಗೆ ನೀಡಿರುವುದು ಅಪರಾಧ ಎಂದು ಬಿಂಬಿಸಿಕೊಳ್ಳಲಾಗುತ್ತಿದೆ.
ತನಿಖೆ ಮಾಡುವುದರಿಂದ ನಿಮಗೆ ಏಕೆ ಭಯ ? ನೀವು ಸ್ವಚ್ಛ ಆಡಳಿತ ಕೊಟ್ಟಿರುವುದರಿಂದ ಭಯ ಏಕೆ ಬೀಳಬೇಕು ಎಂದು ಪ್ರಶ್ನಿಸಿದರು.ಕಳೆದ 2001 ರಲ್ಲಿ ಎಲ್ ಆ್ಯಂಡ್ ಟಿಗೆ 11 ಕೋಟಿ ವೆಚ್ಚದಲ್ಲಿ ದೇವನೂರು ಬಡಾವಣೆ ಕೊಟ್ಟಿದ್ದಾರೆ. ಆಗ ಬಿಜೆಪಿ ಆಡಳಿತದಲ್ಲಿ ಇರಲಿಲ್ಲ ಅಭಿವೃದ್ಧಿ ಯಾಗಿರುವ ಭೂಮಿಯನ್ನು ಡಿ ನೋಟಿಫೈ ಮಾಡಿದ್ದೀರಾ, ಆಗ ಬಿಜೆಪಿ ಇರಲಿಲ್ಲ ಡೆವಲಪ್ಆಗಿರುವ ಜಾಗವನ್ನು ನಿಮ್ಮ ಬಾಮೈದ ಕೃಷಿ ಭೂಮಿ ಅಂತ ಖರೀದಿ ಮಾಡಿದ್ದಾರೆ.
ಡೆವಲಪ್ ಆಗಿರುವ ಬಡಾವಣೆ ತೋರಿಸಿ ಕೃಷಿ ಭೂಮಿ ಅಂತ ಖರೀದಿ ಮಾಡಲಾಗಿದೆ ಎಂದು ಹೇಳಿದರು.ಕಳೆದ 2013 ರಲ್ಲಿ ಚುನವಾಣೆ ಅಫಿಡವಿಟ್ನಲ್ಲಿ ಇದನ್ನು ಕಾಣಿಸಿರಲಿಲ್ಲ, ನೀವು ಅಫಿಡವಿಟ್ ನಲ್ಲಿ ಮುಚ್ಚಿಟ್ಟಿರುವುದರಲ್ಲಿ ಬಿಜೆಪಿ ಕೈವಾಡ ಇದೆಯೇ? ಮುಖ್ಯಮಂತ್ರಿಗಳು ವಕೀಲರಾಗಿದ್ದವರು ಮಾಹಿತಿ ಮುಚ್ಚಿಟ್ಟರೆ ಸೆಕ್ಷನ್ 125 ಅಡಿ ತಪ್ಪೋ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
1950 ರಿಂದ 2024 ರವರೆಗೂ ಒಂದೇ ಸಂವಿಧಾನ ಇರುವುದು. 2011 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರು. ಆಗ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಸಿದ್ದರಾಮಯ್ಯ ಎಲ್ಲರೂ ಅದನ್ನು ಸ್ವಾಗತಿಸಿದ್ದರು ಎಂದರು.ರಾಜ್ಯಪಾಲರದ್ದು ಸಂವಿಧಾನಿಕ ಹುದ್ದೆ ಎಂದು ಸ್ವಾಗತ ಮಾಡಲಾಗಿತ್ತು. ಭ್ರಷ್ಟರು ಮಾತ್ರ ತನಿಖೆಗೆ ಹೆದರುತ್ತಾರೆ, ಭ್ರಷ್ಟಾಚಾರ ಮಾಡದಿದ್ದರೆ ತನಿಖೆಗೆ ಏಕೆ ಭಯ ?
13 ವರ್ಷಗಳ ಹಿಂದೆ ಅಂದಿನ ರಾಜ್ಯಪಾಲರ ಕ್ರಮವನ್ನೇ ಇಂದಿನ ರಾಜ್ಯಪಾಲರು ತೆಗೆದುಕೊಂಡಿದ್ದಾರೆ. ಆವತ್ತು ನೀವು ಹೇಳಿದ ಮಾತು ಇಂದು ನಿಮಗೆ ಅನ್ವಹಿಸುವುದಿಲ್ಲವೇ? ಅಂದು ಸ್ವಾಗತ ಮಾಡಿದವರು ಇಂದು ಸ್ವಾಗತ ಮಾಡಬೇಕಲ್ಲವೇ, ಅಂದು ಸ್ವಾಗತಿಸಿ ಇಂದು ಏಕೆ ವಿರೋಧ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಸಿ.ಟಿ.ರವಿ, ಸಿಎಂ ಭ್ರಷ್ಟಾಚಾರ ಮಾಡಿದ್ದಾರೆ ಅಂತ ಹೇಳಿಲ್ಲ, ಜಡ್ಜ್ ಮೆಂಟ್ ಕೊಡೋ ಅಧಿಕಾರ ರಾಜ್ಯಪಾಲರಿಗೆ ಇಲ್ಲವೆಂದು ಹೇಳಿದರು.
ವಾರ್ತಾ ಇಲಾಖೆಯ ವಿರುದ್ಧ ಕಿಡಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದಿಂದ ವಾರ್ತಾ ಇಲಾಖೆ ಕಚೇರಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಸಿ.ಟಿ.ರವಿ ಆರೋಪಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಅಧಿಕೃತ ಖಾತೆ ದುರುಪಯೋಗವಾಗುತ್ತಿದೆ. ಫೇಸ್ ಬುಕ್ನಲ್ಲಿರುವ ಸಿಎಂ ಹೆಸರಿನ ಖಾತೆ ಕಾಂಗ್ರೆಸ್ ಮುಖವಾಣಿಯಾಗಿ ಬದಲಾಗಿದೆ ಎಂದು ದೂರಿದರು.ಸಿಎಂ ಹೆಸರಿನ ಖಾತೆಯಿಂದ ರಾಜ್ಯಪಾಲರು, ಮೋದಿ, ಬಿಜೆಪಿಯನ್ನು ಟೀಕೆ ಮಾಡಲು ಬಳಕೆ ಮಾಡಿ ಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು, ಸಿಎಂ ಆಫ್ ಕರ್ನಾಟಕ ಎನ್ನುವ ಫೇಸ್ ಬುಕ್ ಖಾತೆ ಜನರಿಗೆ ಸರ್ಕಾರದ ಬಗ್ಗೆ ಮಾಹಿತಿ ನೀಡುವುದಕ್ಕೆ ಆದರೆ ಬಿಜೆಪಿಯನ್ನು ಟೀಕೆ ಮಾಡಲು ಬಳಕೆ ಮಾಡಲಾಗುತ್ತಿದೆ.
ಸಿಎಂ ಹೆಸರಿನ ಖಾತೆಯನ್ನು ಕಾಂಗ್ರೆಸ್ ಕಾರ್ಯಕರ್ತರು ನಿರ್ವಹಿಸುತ್ತಿದ್ದಾರೋ ಅಥವಾ ವಾರ್ತಾಧಿಕಾರಿಗಳು ನಿರ್ವಹಿಸುತ್ತಿದ್ದಾರೋ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು.