ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ಇಲ್ಲಿನ ದೇರಳಕಟ್ಟೆಯ ಪಿಎಚ್.ಡಿ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಕುರಿತು ಎಂಟು ದಿನಗಳ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿ ಬಳಸುತ್ತಿದ್ದ ಆಕ್ಟಿವಾ ಸ್ಕೂಟರ್ ಭಾನುವಾರ ಸುರತ್ಕಲ್ ಬಳಿ ಪತ್ತೆಯಾಗಿದೆ.ಪುತ್ತೂರು ನಿವಾಸಿ ದಿ. ಸತೀಶ್ ಹೆಬ್ಬಾರ್ ಪುತ್ರಿ ಚೈತ್ರಾ ಹೆಬ್ಬಾರ್ (೨೭) ನಾಪತ್ತೆಯಾದವರು. ಕೋಟೆಕಾರು ಮಾಡೂರು ಬಳಿ ಪಿ.ಜಿ.ಯಲ್ಲಿ ನೆಲೆಸಿದ್ದ ಈಕೆ ಎಂಎಸ್ಸಿ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಫುಡ್ ಸೆಕ್ಯುರಿಟಿ ವಿಭಾಗದಲ್ಲಿ ಪಿಎಚ್.ಡಿ ಮಾಡುತ್ತಿದ್ದರು. ಫೆ.೧೭ರಂದು ಪಿ.ಜಿಯಿಂದ ಹೊರಹೋದಾಕೆ ಕಾಲೇಜಜಿಗೂ ತೆರಳದೆ ನಾಪತ್ತೆಯಾಗಿದ್ದರು. ಈ ಕುರಿತು ಚಿಕ್ಕಪ್ಪ ಪ್ರಕಾಶ್ ಹೆಬ್ಬಾರ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ನಾಪತ್ತೆಯಾಗಿ ೮ ದಿನಗಳು ಕಳೆದ ಬಳಿಕ ಭಾನುವಾರ ಸುರತ್ಕಲ್ ಸಮೀಪ ಚೈತ್ರಾ ಉಪಯೋಗಿಸುತ್ತಿದ್ದ ಆಕ್ಟಿವಾ ಸ್ಕೂಟರ್ ಪತ್ತೆಯಾಗಿದೆ. ಲವ್ ಜಿಹಾದ್ ಆರೋಪ:
ಪುತ್ತೂರು ಮೂಲದ ಮುಸ್ಲಿಂ ಯುವಕ ಮಾಡೂರಿನಲ್ಲಿರುವ ಪಿ.ಜಿಗೆ ಬಂದು ಹೋಗುತ್ತಿದ್ದ. ೧೦ ದಿನಗಳ ಹಿಂದೆ ಸ್ಥಳೀಯರು ಈ ಕುರಿತು ಬಜರಂಗದಳ ಗಮನಕ್ಕೆ ತಂದಿದ್ದರು. ಪಿಜಿಯಲ್ಲಿ ವಿಚಾರಿಸಿದಾಗ ಹಿಂದೂ ವಿದ್ಯಾರ್ಥಿನಿಯರು ಇರುತ್ತಿದ್ದ ಪಿಜಿಯಲ್ಲಿ ಆತನೂ ಉಳಿಯುತ್ತಿದ್ದ ಎಂದು ಆರೋಪಿಸಿದ್ದರು ಎಂದು ಬಜರಂಗದಳ ದೂರಿದೆ.ಡ್ರಗ್ ಪೆಡ್ಲರ್ ಆಗಿರುವ ಸಂಶಯದಿಂದ ಚೈತ್ರಾಳ ದೊಡ್ಡಪ್ಪನನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ಕರೆದು ಮಾತನಾಡುವುದಾಗಿ ತಿಳಿಸಿದ ಮರುದಿನ ಫೆ.೧೭ ರಂದು ಚೈತ್ರಾ ದಿಢೀರ್ ನಾಪತ್ತೆಯಾಗಿದ್ದಾಳೆ. ಯುವಕ ಡ್ರಗ್ ಜಾಲ ಚೈತ್ರಾಳನ್ನು ಅಪಹರಿಸಿರುವ ಸಾಧ್ಯತೆಯಿದೆ. ಉಳ್ಳಾಲ ಭಾಗದಲ್ಲಿ ಮಾಜಿ ಶಾಸಕ ಇದಿನಬ್ಬ ಸೊಸೆಯನ್ನೇ ಲವ್ ಜಿಹಾದ್ ಜಾಲಕ್ಕೆ ಸಿಲುಕಿಸಲಾಗಿತ್ತು. ಈ ಆರೋಪಿ ಯುವಕನನ್ನು ತಕ್ಷಣ ಬಂಧಿಸಬೇಕು. ಮೂರು ದಿನಗಳ ಒಳಗೆ ಪತ್ತೆ ಮಾಡದೇ ಇದ್ದಲ್ಲಿ ತೀವ್ರ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಬಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರು ಮಾಧ್ಯಮಗಳ ಮೂಲಕ ಎಚ್ಚರಿಸಿದ್ದಾರೆ.