ಸಾರಾಂಶ
ನಗರದ ವಿವಿಧ ರಸ್ತೆಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡವನ್ನು ತಪ್ಪಾಗಿ ಬರೆಯಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ತಾತ್ಸಾರದಿಂದ ಕನ್ನಡ ಭಾಷೆಗೆ ಅಪಮಾನವಾಗುತ್ತಿದೆ ಎಂದು ಕರ್ನಾಟಕ ವಿಕಾಸ ರಂಗ ಆಕ್ರೋಶ ವ್ಯಕ್ತಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ವಿವಿಧ ರಸ್ತೆಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡವನ್ನು ತಪ್ಪಾಗಿ ಬರೆಯಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ತಾತ್ಸಾರದಿಂದ ಕನ್ನಡ ಭಾಷೆಗೆ ಅಪಮಾನವಾಗುತ್ತಿದೆ ಎಂದು ಕರ್ನಾಟಕ ವಿಕಾಸ ರಂಗ ಆಕ್ರೋಶ ವ್ಯಕ್ತಪಡಿಸಿದೆ.ಹಲಸೂರು ವಾರ್ಡ್ 90ರಲ್ಲಿ ಅಳವಡಿಸಿರುವ ಅಂಡಾಳಮ್ಮ ದೇವಸ್ಥಾನ ಬೀದಿ ನಾಮಫಲಕವು ಇದಕ್ಕೆ ತಾಜಾ ಉದಾಹರಣೆ. ಇದರಂತೆ ನಗರದ ಹಲವೆಡೆ ರಸ್ತೆ ನಾಮಫಲಕಗಳಲ್ಲಿ ಕನ್ನಡವನ್ನು ತಪ್ಪಾಗಿ ಬರೆಯಲಾಗಿದ್ದು, ಪಾಲಿಕೆ ಕನ್ನಡಕ್ಕೆ ಅಪಮಾನ ಮಾಡುತ್ತಿದೆ. ಕೂಡಲೇ ಇದನ್ನು ಸರಿಪಡಿಸದಿದ್ದರೆ ಸಂಘದ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ರಾಜ್ಯ ಸರ್ಕಾರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಘೋಷವಾಕ್ಯದಲ್ಲಿ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡಿರುವ ಸುವರ್ಣ ಮಹೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲೇ ಬೆಂಗಳೂರು ನಗರದ ರಸ್ತೆಗಳ ನಾಮಫಲಕಗಳು ಶುದ್ಧ ಕನ್ನಡದಲ್ಲಿರುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ.ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನ.1ರಂದು ಎಲ್ಲಾ ಕಂಪನಿ, ಕಾರ್ಖಾನೆಗಳು, ಸಂಘ, ಸಂಸ್ಥೆಗಳು ಒಳಗೊಂಡಂತೆ ರಾಜ್ಯದೆಲ್ಲೆಡೆ ಕನ್ನಡ ಬಾವುಟ ಹಾರಿಸಿ ರಾಷ್ಟ್ರಧ್ವಜಕ್ಕೆ ನೀಡುವ ಗೌರವವನ್ನು ಕನ್ನಡ ಧ್ವಜಕ್ಕೂ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿರುವುದು ಅಭಿನಂದನಾರ್ಹ ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.