ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨ ಸಾವಿರ ಕುಟುಂಬಗಳಿಗೆ ನಿವೇಶನ ನೀಡುವ ಯೋಜನೆ ಇದೆ. ಮುಂದಿನ ಹಂತದಲ್ಲಿ ಈ ಎಲ್ಲ ಕುಟುಂಬಗಳಿಗೆ ಮನೆ ಮಂಜೂರು ಮಾಡಿಸಲು ಯತ್ನಿಸಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು.ದ.ಕ. ಜಿ.ಪಂ. ಗ್ರಾಮೀಣ ಕೈಗಾರಿಕಾ ವಿಭಾಗ ವತಿಯಿಂದ ಸೋಮವಾರ ಪುತ್ತೂರು ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ಫಲಾನುಭವಿಗಳಿಗೆ ನಾನಾ ಸವಲತ್ತು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿವೇಶನ ಮತ್ತು ಮನೆ ಇಲ್ಲದವರು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಸರ್ಕಾರದ ಮೇಲೆ ಒತ್ತಡ ತಂದು ನಿಯಮ ಸಡಿಲಗೊಳಿಸಿದ್ದೇವೆ. ತಮ್ಮದೇ ಪಂಚಾಯಿತಿಯಲ್ಲಿ ಮನೆ, ನಿವೇಶನಕ್ಕೆ ಅರ್ಜಿ ಸಲ್ಲಿಸಬೇಕೆಂದಿಲ್ಲ. ಇತರ ಪಂಚಾಯಿತಿಯಲ್ಲೂ ಅರ್ಜಿ ಸಲ್ಲಿಸಬಹುದು ಎಂದರು.

ಜನರ ಹಸಿವು ನೀಗಿಸುವ ಕೆಲಸ ಸರ್ಕಾರಗಳು ಮಾಡಬೇಕಿದ್ದು, ಅದನ್ನೇ ರಾಜ್ಯ ಸರ್ಕಾರ ಮಾಡುತ್ತಿದೆ. ಆನ್ ಲೈನ್ ಮೂಲಕ ಪ್ರತಿ ಸವಲತ್ತುಗಳನ್ನು ಪಡೆಯಲು ಅರ್ಜಿ ಸಲ್ಲಿಸುವ ಕೆಲಸವನ್ನು ಮಾಡಬೇಕು ಎಂದರು.

೨೦೨೫-೨೬ನೇ ಸಾಲಿನ ವೃತ್ತಿಪರ ಕುಶಲ ಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣಗಳನ್ನು ಈ ಸಂದರ್ಭ ವಿತರಿಸಲಾಯಿತು. ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡಲಾಯುತು. ೩೭ ಗಾರೆ ಸಲಕರಣೆ, ೧೩ ಬಡಗಿ ಸಲಕರಣೆ, ೧೫ ಎಲೆಕ್ಟ್ರಿಕಲ್ ಸಾಮಗ್ರಿ, ೧ ಕಮ್ಮಾರಿಕೆ ಸಲಕರಣೆ, ೧೫ ಅಕ್ಕಸಾಲಿಗೆ ಸಲಕರಣೆ, ೩೬ ಹೊಲಿಗೆ ಯಂತ್ರ ಸೇರಿದಂತೆ ಒಟ್ಟು ೧೧೭ ಸಲಕರಣೆ ವಿತರಿಸಲಾಯಿತು.ದ.ಕ. ಜಿಪಂ. ಗ್ರಾಮೀಣ ಕೈಗಾರಿಕೆ ವಿಭಾಗದ ಉಪ ನಿರ್ದೇಶಕ ಮಂಜುನಾಥ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಇದ್ದರು. ಇಲಾಖೆ ಸಿಬ್ಬಂದಿ ಆಶಾ ನಿರೂಪಿಸಿದರು.