ಸಾರಾಂಶ
ಕುಡಿಗಾಣ ಮತ್ತು ಕೊತ್ನಳ್ಳಿ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಶಾಸಕ ಡಾ.ಮಂತರ್ಗೌಡ ಚಾಲನೆ ನೀಡಿದರು. ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ, ಅದೇ ಬಸ್ಸಿನಲ್ಲಿ ಶಾಸಕರೊಂದಿಗೆ ತಮ್ಮ ಊರಿಗೆ ತೆರಳಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ಕುಗ್ರಾಮಗಳಾದ ಕುಡಿಗಾಣ ಮತ್ತು ಕೊತ್ನಳ್ಳಿ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಶಾಸಕ ಡಾ.ಮಂತರ್ಗೌಡ ಚಾಲನೆ ನೀಡಿದರು. ಗ್ರಾಮೀಣ ಭಾಗಕ್ಕೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಈಗ ಈಡೇರಿದ್ದು ಗ್ರಾಮಸ್ಥರು ಸಂಭ್ರಮಿಸಿದರು. ಪಟ್ಟಣ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ, ಅದೇ ಬಸ್ಸಿನಲ್ಲಿ ಶಾಸಕರೊಂದಿಗೆ ತಮ್ಮ ಊರಿಗೆ ತೆರಳಿದರು.ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಅರುಣ್ ಕುಮಾರ್ ಮತು ಪದಾಧಿಕಾರಿಗಳು ಶಾಸಕರನ್ನು ಭೇಟಿಯಾಗಿ ಬಸ್ಗೆ ಮನವಿ ಸಲ್ಲಿಸಿದರು. ಸಾರಿಗೆ ಸಚಿವರಿಗೂ ಮನವಿ ಸಲ್ಲಿಸಿದ್ದರು.
ಬಸ್ ಇಂದಿನಿಂದ ಕಾರ್ಯಾರಂಭ ಮಾಡಿದೆ. ಪ್ರತಿದಿನ ಬೆಳಗ್ಗೆ 6.30 ಕ್ಕೆ ಕುಶಾಲನರದಿಂದ ಹೊರಟು ಸೋಮವಾರಪೇಟೆ ಬಸ್ ನಿಲ್ದಾಣ ತಲುಪಿ 7.40 ಕ್ಕೆ ಸೋಮವಾರಪೇಟೆಯಿಂದ ಕೂಡುರಸ್ತೆ, ಯಡೂರು, ಶಾಂತಳ್ಳಿ, ಕನ್ನಳ್ಳಿಕಟ್ಟೆ, ಜಕ್ಕನಳ್ಳಿ, ಕೊತ್ತನಳ್ಳಿ, ಕುಡಿಗಾಣ ಗ್ರಾಮಕ್ಕೆ ತೆರಳಿ, ಅದೇ ಮಾರ್ಗವಾಗಿ ವಾಪಾಸ್ಸು ಸೋಮವಾರಪೇಟೆ ತಲುಪಿ, 10 ಗಂಟೆಗೆ ಸೋಮವಾರಪೇಟೆಯಿಂದ ಹೊರಟು ಕೊವರ್ಕೊಲ್ಲಿ, ಕೂಡಿಗೆ , ಕುಶಾಲನಗರ ಮಾರ್ಗವಾಗಿ ಮೈಸೂರು ತಲುಪಲಿದೆ. ಸಂಜೆ 4ಗಂಟೆಗೆ ಸೋಮವಾರಪೇಟೆಯಿಂದ ಕುಡಿಗಾಣ ತಲುಪಿ, ವಾಪಾಸ್ಸು ಸಂಜೆ 6ಗಂಟೆಗೆ ಸೋಮವಾರಪೇಟೆ ತಲುಪಲಿದೆ.ಅಭಿವೃದ್ಧಿ ಹೋರಾಟ ಸಮಿತಿ ಹಾಗು ಗ್ರಾಮೀಣ ಜನರ ಬೇಡಿಕೆಯನ್ನು ಈಡೇರಿಸಿರುವ ತೃಪ್ತಿ ಇದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು ಗಮನದಲ್ಲಿಟ್ಟುಕೊಂಡು ಮಾರ್ಗವನ್ನು ಜೋಡಿಸಿದ್ದೇವೆ ಎಂದು ಶಾಸಕ ಮಂತರ್ ಗೌಡ ಹೇಳಿದರು. ಕುಶಾಲನಗರ ಡಿಪೋ ಪ್ರಾರಂಭವಾದ ಮೇಲೆ ಇನ್ನು 80 ಬಸ್ಗಳು ಸಿಗುತ್ತವೆ. ನಂತರ ಪ್ರತಿ ಗ್ರಾಮಕ್ಕೂ ಬಸ್ ಸಂಚರಿಸುವ ಅವಕಾಶ ಸಿಗಲಿದೆ ಎಂದು ಹೇಳಿದರು.