ಸಹಕಾರ ಕ್ಷೇತ್ರಕ್ಕೂ ಶಾಸಕ ಗಣೇಶ್‌ ಪ್ರಸಾದ್ ಹೆಜ್ಜೆ

| Published : May 18 2025, 11:47 PM IST

ಸಹಕಾರ ಕ್ಷೇತ್ರಕ್ಕೂ ಶಾಸಕ ಗಣೇಶ್‌ ಪ್ರಸಾದ್ ಹೆಜ್ಜೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು, ಚಾಮರಾಜನಗರ ಜಿಲ್ಲೆಯ ಬಹುತೇಕ ಶಾಸಕರನ್ನೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಇತ್ತೀಚಗೆ ಸಿಎಂ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಹಿನ್ನೆಲೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸಹಕಾರ ಕ್ಷೇತ್ರಕ್ಕೂ ಕಾಲಿಡಲು ಸಮ್ಮತಿಸಿದ್ದು, ಮುಂದಿನ ತಿಂಗಳು ನಡೆಯಲಿರುವ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.

ಮೈಸೂರು ಭಾಗದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ಹಿನ್ನೆಲೆ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಸಹಕಾರಿ ಧುರೀಣ ಮಾಜಿ ಸಚಿವ ಜಿ.ಟಿ.ದೇವೇಗೌಡರ ಸಹಕಾರ ಕ್ಷೇತ್ರದಲ್ಲಿ ಹಿಡಿತ ತಪ್ಪಿಸಲೇಬೇಕು ಎಂದು ಹಠಕ್ಕೆ ಬಿದ್ದ ಕಾರಣ ಮೈಸೂರು, ಚಾಮರಾಜನಗರ ಜಿಲ್ಲೆಯ ಬಹುತೇಕ ಶಾಸಕರನ್ನೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಇತ್ತೀಚಗೆ ಸೂಚನೆ ನೀಡಿದ್ದಾರೆ.ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಎಚ್.ಡಿ.ಕೋಟೆ ಕ್ಷೇತ್ರದ ಅನಿಲ್‌, ಚಿಕ್ಕಮಾದು, ಹುಣಸೂರು ಕ್ಷೇತ್ರದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಸಹೋದರ ಅಮರನಾಥ್‌, ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್‌ ತಂದೆ ದೊಡ್ಡಸ್ವಾಮಿ ಗೌಡ, ಮೈಸೂರು ನಗರದ ಚಾಮರಾಜ ಕ್ಷೇತ್ರದ ಶಾಸಕ ಹರೀಶ್‌ ಕಣಕ್ಕಿಳಿಯಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳಿಂದ ತಿಳಿದು ಬಂದಿದೆ.

ಡಜನ್‌ ಮಂದಿ ಪೈಪೋಟಿ:

ಮೈಸೂರು, ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಸ್ಪರ್ಧಿಸಲು ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಡಜನ್‌ಗೂ ಹೆಚ್ಚು ಮಂದಿ ಸ್ಪರ್ಧಿಸಲು ಆಸೆ ಇಟ್ಟು ಕೊಂಡಿದ್ದರು. ಅಲ್ಲದೆ ಸ್ಥಳೀಯ ನಾಯಕರಲ್ಲೇ ಸ್ಪರ್ಧೆಗೆ ಪೈಪೋಟಿ ಇತ್ತು.

ಪ್ರಮುಖವಾಗಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರ ಚಿಕ್ಕಪ್ಪ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ನಟೇಶ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜಿ.ಮಡಿವಾಳಪ್ಪ, ಕಿಲಗೆರೆ ಪ್ರಸಾದ್‌, ಗ್ರಾಪಂ ಮಾಜಿ ಅಧ್ಯಕ್ಷ ತಗ್ಗಲೂರು ತಮ್ಮಯ್ಯಪ್ಪ ಕೂಡ ಸ್ಪರ್ಧೆಗೆ ಆಸಕ್ತಿ ಇಟ್ಟು ಕೊಂಡಿದ್ದರು.ಒಂದು ಕಲ್ಲೇಟು:

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮೈಸೂರು,ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಚುನಾವಣೆಗ ಸ್ಪರ್ಧಿಸಲು ನಾಲ್ಕೈದು ಮಂದಿ ಕಾಂಗ್ರೆಸ್‌ ಮುಖಂಡರು ನಾನು, ನಾನು ಎಂದು ಹೇಳುತ್ತಿದ್ದರು. ಆದರೀಗ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರೇ ಸ್ಪರ್ಧೆಗೆ ಇಳಿಯುವ ಮೂಲಕ ಒಂದು ಕಲ್ಲಿಗೆ ಎರಡಕ್ಕಿಯಲ್ಲ, ನಾಲ್ಕೈದು ಹಕ್ಕಿಗಳಿಗೆ ಏಟು ಬಿದ್ದಿದೆ.

ಬಿಜೆಪಿಯಿಂದ ವೀರಪ್ಪ?

ಮೈಸೂರು, ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಚುನಾವಣೆಗೆ ಬಿಜೆಪಿ ಮುಖಂಡ ಎಸ್.ಎಂ.ವೀರಪ್ಪ ಸ್ಪರ್ಧೆ ಖಚಿತ ಎನ್ನಲಾಗುತ್ತು, ಚುನಾವಣೆ ಸ್ಪರ್ಧೆಗೆ ತಯಾರಾಗಿ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಹೇಳಿದ್ದಾರೆ ಎನ್ನಲಾಗಿದೆ.

ಸುನೀಲ್‌ಗೆ ಹಿನ್ನೆಡೆ:

ಮೈಸೂರು, ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿರ್ದೇಶಕ ಎಂ.ಪಿ.ಸುನೀಲ್‌ ಸ್ಪರ್ಧೆಗೆ ತಯಾರಿ ನಡೆಸಿದ್ದರು. ಆದರೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸ್ಪರ್ಧೆ ಹಿನ್ನೆಲೆ ಎಂ.ಪಿ.ಸುನೀಲ್‌ ಸ್ಪರ್ಧಿಸಬೇಕೋ ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ ಆದರೆ ಕೊನೆ ತನಕ ಕಾದು ನೋಡುವ ತಂತ್ರದಲ್ಲಿದ್ದಾರೆ.

ನಿಲ್ಲಲ್ಲ ಎಂದಿರುವ ಶಾಸಕ ದರ್ಶನ್?

ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್‌ ಮಾತ್ರ ಸಹಕಾರ ಕ್ಷೇತ್ರಕ್ಕೆ ಕಾಲಿಡಲು ಒಪ್ಪಿಗೆ ಸೂಚಿಸಿಲ್ಲ. ಸಹಕಾರ ಕ್ಷೇತ್ರದಲ್ಲಿ ಸ್ಥಳೀಯ ನಾಯಕರಿಗೆ ಅವಕಾಶ ಕೊಟ್ಟು ಗೆಲ್ಲಿಸಿ ಕೊಂಡು ಬರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸ್ಪಷ್ಟ ಪಡಿಸಿದ್ದಾರೆ.

ಕ್ಷೇತ್ರದಲ್ಲಿ ಸ್ಥಳೀಯ ನಾಯಕರಿಗೆ ಅವಕಾಶ ಕೊಡಬೇಕಿದೆ ಎಂದು ದರ್ಶನ್‌ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವೊಲಿಸಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ನರೇಂದ್ರ ಹಳೆ ಹುಲಿ:

ಹನೂರು ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ ಶಾಸಕರಾಗಿದ್ದಾಗಿನಿಂದಲೂ ಮೈಸೂರು, ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರಾಗಿದ್ದರು. ಈ ಚುನಾವಣೆಯಲ್ಲಿ ಅವರ ಸ್ಪರ್ಧೆಗೆ ವಿಶೇಷ ಅರ್ಥ ಬರಲ್ಲ!

ಇದೇ ಮೊದಲು

ಗುಂಡ್ಲುಪೇಟೆ:

ಮೈಸೂರು, ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಚುನಾವಣೆಯಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆಗಳ ಶಾಸಕರೇ ಸ್ಪರ್ಧೆಗೆ ಇಷ್ಟೊಂದು ಮಂದಿ ಇಳಿದಿರುವುದು ಇದೇ ಮೊದಲು ಎನ್ನಲಾಗಿದೆ.ಹನೂರು ಶಾಸಕರಾಗಿದ್ದ ಆರ್.ನರೇಂದ್ರ ಬಿಟ್ಟರೆ ಜಿಲ್ಲೆಯ ಯಾವ ಶಾಸಕರು ಎಂಸಿಡಿಸಿಸಿ ಬ್ಯಾಂಕ್‌ ಸ್ಪರ್ಧೆಗೆ ಮುಂದಾಗಿರಲಿಲ್ಲ. ಆದರೆ ಮುಖ್ಯಮಂತ್ರಿಗಳ ವಿಶೇಷ ಆಸಕ್ತಿಯ ಫಲವಾಗಿ ಶಾಸಕರೇ ಸ್ಪರ್ಧೆಗೆ ಇಳಿಯುತ್ತಿದ್ದಾರೆ ಎಂಬುದೇ ಈ ಚುನಾವಣೆ ವಿಶೇಷ.

-----

18ಸಿಎಚ್‌ಎನ್‌61

ಮಂಜುನಾಥ್

----------

18ಸಿಎಚ್ಎನ್‌62

ಅನಿಲ್‌ ಚಿಕ್ಕಮಾದು

----------

18ಸಿಎಚ್‌ಎನ್‌63

ರವಿಶಂಕರ್

ಪುಟ್ಟರಂಗಶೆಟ್ಟಿ ಹಾಗು ಆರ್.ನರೇಂದ್ರ, ನಂಜನಗೂಡು ಶಾಸಕ ದರ್ಶನ್‌ ಫೋಟೋ ಬಳಸಿ ಕೊಳ್ಳಿ