ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಟಿಪ್ಪು ನಗರ ಹಾಗೂ ಚಿಪ್ಪಿನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸುಸಜ್ಜಿತ ಅಂಗನವಾಡಿ ಕಟ್ಟಡಗಳನ್ನು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ಇದೇ ವೇಳೆ ಶಾಸಕರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರದ ಜೊತೆಗೆ ಮೂಲ ಸೌಕರ್ಯಗಳನ್ನು ಹೊಂದಿರುವ ಕಟ್ಟಡ ಹಾಗೂ ನುರಿತ ಶಿಕ್ಷಕರನ್ನು ಒದಗಿಸುತ್ತಿದ್ದರೂ ಸರ್ಕಾರಿ ಅಂಗನವಾಡಿ ಹಾಗೂ ಶಾಲೆಗಳ ಮೇಲೆ ವ್ಯಾಮೋಹ ಜನರಲ್ಲಿ ಕಡಿಮೆಯಾಗುತ್ತಿದೆ. ಇಂತಹ ಮನಸ್ಥಿತಿಯನ್ನು ಜನರು ಬಿಡಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರ ಕೂಡ ಬಾಲ್ಯದಿಂದಲೇ ಮಕ್ಕಳನ್ನು ಸದೃಢರಾಗಿ ಮಾಡುವ ನಿಟ್ಟಿನಲ್ಲಿ ವಿವಿಧ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸುವ ಜೊತೆಗೆ ಮಕ್ಕಳಿಗೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡಲು ಮುಂದಾಗಿದೆ ಇದನ್ನು ಎಲ್ಲಾ ಮಕ್ಕಳು ಬಳಸಿಕೊಳ್ಳಬೇಕು ಎಂದರು.ಚಿಪ್ಪಿನಕಟ್ಟೆ ಹಾಗೂ ಟಿಪ್ಪು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಮಕ್ಕಳು ಇದ್ದು ಅವರಿಗೂ ಶಾಲಾ ಪೂರ್ವ ಶಿಕ್ಷಣ ಒಳ್ಳೆಯ ರೀತಿಯಲ್ಲಿ ಸಿಗಬೇಕು ಎಂಬುದು ನಮ್ಮ ಆಶಯ. ಹಾಗಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬಿಟ್ಟುಕೊಡಲಾಗಿದೆ. ತಮ್ಮ ಮನೆ ಎಂಬಂತೆ ಭಾವಿಸಿ ಕಟ್ಟಡ ಹಾಗೂ ಸೌಲಭ್ಯಗಳನ್ನು ಕಾಪಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾತನಾಡಿ, ಮನುಷ್ಯನಿಗೆ ಪ್ರಮುಖವಾಗಿ ಅಗತ್ಯವಿರುವ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಲು ಸ್ಥಳೀಯ ಶಾಸಕರು ಮುಂದಾಗಿದ್ದು, ಒಳ್ಳೆಯ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಎಂದರು. ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸುವ ಬದಲಾಗಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳನ್ನು ಅವಲಂಬಿಸಬೇಕು. ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಜೊತೆಗೆ ಅಂಗನವಾಡಿ ಆವರಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮಧ್ಯಮಗಳು ಹಾಗೂ ಇನ್ನಿತರ ಕಿಡಿಗೇಡಿಗಳು ಬಂದು ಇಲ್ಲಿಯ ವಾತಾವರಣವನ್ನು ಕಲುಷಿತ ಮಾಡದಂತೆ ನೋಡಿಕೊಳ್ಳಬೇಕು ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಆ ಭಾಗದ ನಗರಸಭೆ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಮಕ್ಕಳು ಹಾಜರಿದ್ದರು.