ಕನ್ನಡಪ್ರಭ ವಾರ್ತೆ ಹನೂರು

ಚಿರತೆ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದ ತಟ್ಟೆಕೆರೆದೊಡ್ಡ ಗ್ರಾಮದ 4 ವರ್ಷದ ಬಾಲಕಿ ಹರ್ಷಿತಾಳನ್ನು ಶಾಸಕ ಎಂ.ಆರ್‌. ಮಂಜುನಾಥ್‌ ಭೇಟಿಯಾಗಿ ಬಾಲಕಿಯ ಆರೋಗ್ಯ ವಿಚಾರಿಸಿದರು. ಜೊತೆಗೆ ಆಕೆಯ ಪೋಷಕರಿಗೆ ಧೈರ್ಯ ತುಂಬಿದರು.

ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಮಿಣ್ಯಂ ಗ್ರಾಪಂ ವ್ಯಾಪ್ತಿಯ ತಟ್ಟೆಕೆರೆ ದೊಡ್ಡಿಯಲ್ಲಿ ಮನೆಯ ಹೊರಗೆ ಕುಳಿತಿದ್ದ ಅಜ್ಜಿ ಹಾಗೂ ಮೊಮ್ಮಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಈ ವೇಳೆ 4 ವರ್ಷದ ಬಾಲಕಿ ಹರ್ಷಿತಾ ತೀವ್ರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಕಾಮಗೆರೆ ಹೋಲಿ ಕ್ರಾಸ್‌ ಆಸ್ಪತ್ರೆಗೆ ದಾಖಲಿಸ ಬಳಿಕ ಹೋಲಿ ಕ್ರಾಸ್‌ ಆಸ್ಪತ್ರೆಗೆ ದಾಖಲಿಸಲಾಯಿತು.

ಶನಿವಾರ ಚಿರತೆ ದಾಳಿ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಂ.ಆರ್‌. ಮಂಜುನಾತ್‌ ಅವರು ಮಲೆ ಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್‌ ಜೊತೆ ಮಾತನಾಡಿ ಶಿವಮ್ಮ ಮತ್ತು ಹರ್ಷಿತಾರಿಗೆ ಚಿಕಿತ್ಸೆಗಾಗಿ ಒತ್ತಡ ಹಾಕಿದ್ದರು.

ಇದಾದ ಮರುದಿನವೇ ಭಾನುವಾರ ಹೋಲಿಕ್ರಾಸ್‌ ಆಸ್ಪತ್ರೆಗೆ ತೆರಳಿದ ಶಾಸಕರು, ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಜೊತೆಗೆ ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಭರವಸೆ ನೀಡಿದರು. ಹಾಗೂ ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರುವಂತೆ ಸಲಹೆ ನೀಡಿದರು.


ಪರಿಶೀಲನೆ ವೇಳೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಭಾಸ್ಕರ್‌, ಹೂಗ್ಯಂ ವಲಯ ಅರಣ್ಯ ಅಧಿಕಾರಿ ಜಿತೇಂದ್ರ, ಮಗುವಿನ ತಂದೆ ಮಹೇಂದ್ರ ಮುಖಂಡರಾದ ಮಂಜೇಶ್, ಮಹದೇವ ಸೇರಿದಂತೆ ಹಲವರು ಹಾಜರಿದ್ದರು.