ಕನ್ನಡಪ್ರಭ ವಾರ್ತೆ ಮಂಡ್ಯ

ಗಜೇಂದ್ರ ಮೋಕ್ಷ ಕೊಳದ ಆವರಣದ ಪ್ರಶಾಂತ ವಾತಾವರಣದಲ್ಲಿ ಶಿವರಾತ್ರಿ ದೀಪೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಉತ್ತಮವಾಗಿದೆ. ನಾಗರಿಕರಿಗೆ ಧಾರ್ಮಿಕ, ಸಾತ್ವಿಕ ಭಾವನೆ ಮೂಡಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ನಗರದ ಶ್ರೀ ಕಾಳಿಕಾಂಬ ದೇವಾಲಯದ ಮುಂಭಾಗದಲ್ಲಿರುವ ಗಜೇಂದ್ರಮೋಕ್ಷ ಕಲ್ಯಾಣಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆ, ಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್ ಮತ್ತು ಜಿಲ್ಲಾ ನಾಯಕರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಶಿವರಾತ್ರಿ ದೀಪೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಲ್ಯಾಣಿಯ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಸೂಕ್ತವಾಗಿದೆ. ಶಿವರಾತ್ರಿ ಅಂಗವಾಗಿ ಏರ್ಪಡಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಚೆನ್ನಾಗಿ ಮೂಡಿಬಂದಿವೆ ಎಂದು ಶ್ಲಾಘಿಸಿದರು.

ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ ಅವರು ಮಾತನಾಡಿ, ಹಬ್ಬಗಳು ಕೇವಲ ಸಂಭ್ರಮಕ್ಕೆ ಮಾತ್ರವಲ್ಲ. ಇದರ ಹಿನ್ನೆಲೆ ಅನೇಕ ವಿಚಾರಗಳನ್ನು ಹೊಂದಿರುತ್ತವೆ, ಅದನ್ನು ಯುವ ಜನಾಂಗ ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.


ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್, ಕಾಂಗ್ರೆಸ್ ಮುಖಂಡ ಆದರ್ಶ್‌ಗೌಡ ಶಿವಧ್ವಜಾರೋಹಣ ನಡೆಸಿದರು. ಶಾಸಕರು ವಿಷ್ಣುಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಬಳಿಕ ಭಾರತಿ ಅಡಿಗ ಅವರ ಕೃಷ್ಣ ಭಜನಾ ಮಂಡಳಿಯಿಂದ ಭಜನೆ, ನಂದಿಕೇಶ್ವರ ಭರತನಾಟ್ಯ ಕೇಂದ್ರದ ಶೈಲಜಾ ಅವರ ತಂಡದಿಂದ ಭರತನಾಟ್ಯ ಸಂಭ್ರಮ ಪ್ರೇಕ್ಷಕರನ್ನು ರಂಜಿಸಿತು. ಸ್ನೇಹಜೀವಿ ಬಳಗದ ನಾಗರಾಜು, ಶ್ರೀಪತಿ ಸಿದ್ದರಾಜು ಅವರಿಂದ ಭಕ್ತಿ ಗೀತೆ, ಭಾವಗೀತೆಗಳು, ಬೆಂಗಳೂರಿನ ಭರತನಾಟ್ಯ ಕಲಾವಿದೆ ರಾಮಾಚಾರ್ ಅವರ ಪುತ್ರಿ ಕುಮಾರಿ ಹರ್ಷಿಣಿ ಅವರಿಂದ ವಿವಿಧ ನೃತ್ಯ ರೂಪಕ ನಡೆಯಿತು.

ಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಬಿ.ರಮೇಶ್ ಸ್ವಾಗತ ಕೋರಿದರು, ಪತ್ರಕರ್ತ ಕೊಳಲು ಶ್ರೀಪಾದು, ಎಂ.ಬಿ.ನಾಗಣ್ಣಗೌಡ, ಬಿ.ಕೆ.ರಾಧಾ ರಮೇಶ್, ನಾಯಕರ ಸಂಘದ ಪ್ರ.ಕಾರ್ಯದರ್ಶಿ ಎಂ.ಆರ್.ವೆಂಕಟೇಶ್, ಎಲ್. ಕೃಷ್ಣ, ಅಭಿ, ಸತ್ಯವೇಲ್, ಪೇಂಟ್ ಮಹೇಂದ್ರ, ಟೆಂಪೋ ಪುಟ್ಟು, ರಾಘು ಮಂಚೇಗೌಡ, ಡಿ.ಎಚ್.ಹನುಮಂತು, ವಿದ್ಯಾರ್ಥಿಗಳಾದ ಸಾಗರ್, ಕೃಷ್ಣ, ಸ್ಕಂದ, ಅನಂತ ಬೋರೇಗೌಡ, ನಿಶಾಂತ್, ಋಷಿ ರಾಘವೇಂದ್ರ, ಉದಯ್, ಜಿ.ಮಹೇಂದ್ರ, ಶಾಂತಮ್ಮ, ರಾಮಣ್ಣ, ಸ್ವೀಟ್ ನರೇಂದ್ರ, ಸಂಜು, ಸತೀಶ್ ಶೆಟ್ಟಿ, ಲಕ್ಷ್ಮಣ್ ಪಟೇಲ್, ಗುಣಶೇಖರ್, ರಾಜೇಂದ್ರ ಸಿಂಗ್ ಬಾಬು ಮತ್ತಿತರರು ಪಾಲ್ಗೊಂಡಿದ್ದರು,