ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ದಶಕದಿಂದ ಕೆಲಸ ಮಾಡಿದ್ದೇನೆ. ಎಲ್ಲಾ ಅನುಭವಗಳೂ ಇವೆ. ಈ ಬಾರಿಯ ದಾವಣಗೆರೆ ದಕ್ಷಿಣದ ಉಪ ಚುನಾವಣೆಯಲ್ಲಿ ತಮ್ಮ ಪುತ್ರ ಸೈಯದ್ ಖಾಲಿದ್ ಅಹಮ್ಮದ್ ಆಕಾಂಕ್ಷಿಯಾಗಿದ್ದು, ಹೈಕಮಾಂಡ್ ಅವಕಾಶ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸೈಯದ್ ಸೈಫುಲ್ಲಾ ಸಾಬ್ ಹೇಳಿದರು.ನಗರದ ಹಳೆ ಭಾಗದ ಮಿಲ್ಲತ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯುವ ಸಮ್ಮೇಳನದಲ್ಲಿ ಮಾತನಾಡಿ, ಹೈಕಮಾಂಡ್ನ ಯಾವುದೇ ತೀರ್ಮಾನಕ್ಕೂ ನಾವು ಬದ್ಧ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದರು.
ಅವಕಾಶಗಳು ಹುಡುಕಿಕೊಂಡು ಬರುವುದಿಲ್ಲ. ಅವಕಾಶ ಸಿಕ್ಕಾಗ ಯಾವುದ ಕಾರಣಕ್ಕೂ ನಾವು ಬಿಡಬಾರದು. ಉಪಯೋಗ ಮಾಡಿಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಪ್ರಯತ್ನ, ನಿರಂತರ ಶ್ರಮ ಇದ್ದರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ. ಕಾಯುವ ತಾಳ್ಮೆ ಇರಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೂಲಕ ಎಲ್ಲಾ ಧರ್ಮ, ಜಾತಿ, ವರ್ಗದವರನ್ನೂ ತಲುಪಿದೆ ಎಂದರು.ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಅಹಮ್ಮದ್ ಮಾತನಾಡಿ, ಪ್ರಸ್ತುತ ರಾಜಕಾರಣದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಬೇಕು. ನಿಸ್ವಾರ್ಥ, ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸಿದವರಿಗೆ ಅವಕಾಶಗಳು ಹೆಚ್ಚಿನದಾಗಿ ಸಿಗಬೇಕು. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯತೆ ಇದೆ ಎಂದು ಹೇಳಿದರು.
ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಸಕಾರಾತ್ಮಕ ಚಿಂತನೆಯೊಂದಿಗೆ ನಾವು ಭವಿಷ್ಯದ ಕನಸು ಕಾಣಬೇಕು. ಸವಾಲಗಳನ್ನು ಎದುರಿಸಿ, ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಂತಾಗಬೇಕು. ನಮ್ಮ ಮೇಲೆ ನಾವು ನಂಬಿಕೆಯನ್ನು ಇಟ್ಟುಕೊಂಡು, ಕಠಿಣ ಸವಾಲು, ಸತ್ಯಗಳನ್ನು ಎದುರಿಸಿ, ನಿಸ್ವಾರ್ಥ ಸೇವೆ ಮೂಲಕ ದೇಶದ ಏಕತೆ ಮತ್ತು ಪ್ರಗತಿಗೆ ಶ್ರಮಿಸಬೇಕು ಎಂದರು.
ಇಂದಿನ ಯುವಕರೇ ಮುಂದಿನ ಭವಿಷ್ಯದ ನೇತಾರರು. ಹಾಗಾಗಿ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ದೇಶದ ಭವಿಷ್ಯವಾದ ಯುವಕರಲ್ಲಿ ಆತ್ಮವಿಶ್ವಾಸ, ರಾಷ್ಟ್ರಪ್ರೇಮ ಹಾಗೂ ಜವಾಬ್ದಾರಿ ಜಾಗೃತಿಗೊಳಿಸಬೇಕಿದೆ ಎಂದರು.
ರಾಜಕಾರಣದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಪೈಕಿ ಕೆಲವೇ ಕೆಲವರಿಗೆ ಮಾತ್ರ ಅವಕಾಶ ಸಿಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟಕಡೆಯ ಯುವಕನಿಗೂ ವೇದಿಕೆ ಸಿಕ್ಕರೆ ಸಾಧಿಸಿ ತೋರಿಸುತ್ತಾನೆಂಬುದು ಇತಿಹಾಸದಿಂದ ತಿಳಿದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದವರಿಗೂ ಅವಕಾಶ ಸಿಕ್ಕರೆ ಖಂಡಿತವಾಗಿಯೂ ದೇಶದ ಮತ್ತಷ್ಟು ಸದೃಢವಾಗಲಿದೆ ಎಂದರು.ಕೆಪಿಸಿಸಿ ಉಪಾಧ್ಯಕ್ಷ ಮುಜಾಮ್ಮಿಲ್ ಹುಸೇನ್, ಪಾಲಿಕೆ ಮಾಜಿ ಸದಸ್ಯ ಎನ್.ಕೆ.ಇಸ್ಮಾಯಿಲ್ ಸಾಬ್, ಸೈಯದ್ ಅಲ್ತಾಫ್, ಸಿದ್ದಪ್ಪ, ಶಂಕರ, ಮಂಜುನಾಥ, ಪ್ರವೀಣ, ಸೈಯದ್ ಆರೀಫ್, ಅವಿನಾಶ, ಹಾಲೇಶ, ಹರೀಶ, ಕೆ.ಸಿ.ಮಹಮ್ಮದ್, ಇನಾಯತ್ ಅಲಿ, ಯುವ ಕಾಂಗ್ರೆಸ್ ಘಟಕದ ಯುವ ನಾಯಕರು, ಪದಾಧಿಕಾರಿಗಳು ಹಾಜರಿದ್ದರು.