ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಭೂ ದಾಖಲೆಗಳ ಗಣಕೀಕರಣಕ್ಕೆ ತಾಲೂಕು ಕಚೇರಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಗಣಕೀಕರಣ ಉದ್ಘಾಟಿಸಿ ಮಾತನಾಡಿದ ಶಾಸಕರು, ಕಂದಾಯ ಇಲಾಖೆ ಎಲ್ಲಾ ದತ್ತಾಂಶಗಳನ್ನು ಕ್ರೂಢೀಕರಿಸಿ ಗಣಕೀಕರಣ ಮಾಡುವುದರಿಂದ ದಾಖಲೆ ಕಳವು, ತಿದ್ದುಪಡಿ, ದಾಖಲೆ ಲಭ್ಯವಿಲ್ಲ ಎನ್ನುವ ವಿಚಾರವನ್ನು ಯಾರು ಹೇಳಲು ಸಾಧ್ಯವಿಲ್ಲ. ಯಾರು ಯಾವುದೇ ಮಾಹಿತಿಯನ್ನು ಕೇಳಿದರೂ ತಕ್ಷಣದಲ್ಲಿ ಅಧಿಕಾರಿಗಳು ನೀಡಲಿದ್ದಾರೆ ಎಂದರು.
ದಾಖಲೆಗಳನ್ನು ಹಿಂದೆ ಪಡೆಯಬೇಕಾದರೆ ಹಲವು ನಿಯಮಗಳನ್ನು ಪಾಲಿಸಬೇಕಿತ್ತು ಜೊತೆಗೆ ದಾಖಲೆ ಕೈ ಸೇರಲು ಹಲವು ದಿನಗಳೇ ಬೇಕಾಗಿತ್ತು. ಕಂದಾಯ ಇಲಾಖೆಯಲ್ಲಿ ಇದ್ದ ಅಡೆತಡೆಗಳನ್ನು ಸರಿಪಡಿಸಿ ಎಲ್ಲಾ ದಾಖಲೆಗಳನ್ನು ಗಣಕೀರಣ ಮಾಡುವ ಮೂಲಕ ಎಲ್ಲಾವೂ ಸುಭದ್ರ, ಸರಳ ಹಾಗೂ ಜನಪರವಾಗಿಯೂ ಇರಲಿದೆ ಎಂದು ಭರವಸೆ ನೀಡಿದರು.ಆಸ್ತಿ ದಾಖಲೆಯನ್ನು ಪಡೆಯಲು ಸಾರ್ವಜನಿಕರು ಎದುರಿಸುತ್ತಿದ್ದ ಸಮಸ್ಯೆ ಬಗೆಹರಿಸಲು ಭೂ ಸುರಕ್ಷಾ ಯೋಜನೆ ಸಹಕಾರಿಯಾಗಿದೆ. ಹಳೆಯ ದಾಖಲೆ ರಕ್ಷಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ದಾಖಲೆಗಳು ಡಿಜಿಟಲ್ ರೂಪದಲ್ಲಿರುವುದರಿಂದ ತಕ್ಷಣ ಬೇಕು ಎಂದಾಗ ಹುಡುಕುವುದು ಸುಲಭ. ಯಾವುದೇ ಸ್ಥಳದಲ್ಲಿದ್ದರೂ ಕೂಡ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬಹುದು. ದಾಖಲೆಗಾಗಿ ತಾಲೂಕು ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವುದನ್ನು ಸಂಪೂರ್ಣವಾಗಿ ತಪ್ಪಿಸಲಾಗುತ್ತದೆ ಎಂದು ವಿವರಿಸಿದರು.ಈ ವೇಳೆ ಉಪವಿಭಾಗಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಡಾ. ಎಸ್.ವಿ.ಲೊಕೇಶ್, ತಾಪಂ ಇಒ ಎಚ್.ಜಿ ಶ್ರೀನಿವಾಸ್, ಗ್ರೆಡ್ 2 ತಹಸೀಲ್ದಾರ್ ಬಿ.ವಿ ಕುಮಾರ್ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಮುಖಂಡರು ಇದ್ದರು.
ಜ.24 ರಂದು ಪೂರ್ವಭಾವಿ ಸಭೆಪಾಂಡವಪುರ: ಪುರಸಭೆಯ 2025-26ನೇ ಸಾಲಿನ ಆಯ-ವ್ಯಯವನ್ನು ಸಿದ್ಧಡಿಸುವ ಸಂಬಂಧ ಅಧ್ಯಕ್ಷೆ ಜ್ಯೋತಿಲಕ್ಷ್ಮಿಬಾಬು ಅಧ್ಯಕ್ಷತೆಯಲ್ಲಿ ಜ.24 ರಂದು ಬೆಳಗ್ಗೆ 11 ಗಂಟೆಗೆ ಪುರಸಭಾ ಕಚೇರಿಯ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಸಭೆಗೆ ಪುರಸಭಾ ಅಧ್ಯಕ್ಷರು/ ಉಪಾಧ್ಯಕ್ಷರು / ಸ್ಥಾಯಿ ಸಮಿತಿ ಅಧ್ಯಕ್ಷರು/ಸದಸ್ಯರು, ಹಾಗೂ ಮಾಜಿ ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆ ಅಧ್ಯಕ್ಷರು/ ಉಪಾಧ್ಯಕ್ಷರು/ ಪದಾಧಿಕಾರಿಗಳು ರವರ ಸಲಹೆ-ಸೂಚನೆಗಳನ್ನು ಸದರಿ ಸಭೆಗೆ ತಾವುಗಳು ಆಗಮಿಸಿ 2025-26ನೇ ಸಾಲಿನ ಆಯ-ವ್ಯಯಕ್ಕೆ ಸಂಬಂಧಿಸಿದಂತೆ ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.